ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 8 ರವರೆಗೆ ಚೀನಾದ ಹ್ಯಾಂಗ್ಜೂನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸುವ ಭಾರತದ ಕ್ರಿಕೆಟ್ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದೆ. ಋತುರಾಜ್ ಗಾಯಕ್ವಾಡ್ ನೇತೃತ್ವದಲ್ಲಿ ಭಾರತ ಪುರುಷರ ತಂಡ ಈ ಕ್ರೀಡಾಕೂಟದಲ್ಲಿ ಭಾಗಿಯಾಗಲಿದೆ. ಈ ಹಿನ್ನೆಲೆಯಲ್ಲಿ ಋತುರಾಜ್ ಗಾಯಕ್ವಾಡ್ ಪ್ರತಿಕ್ರಿಯೆ ನೀಡಿದ್ದು ಚಿನ್ನದ ಪದಕವನ್ನು ಗೆಲ್ಲುವುದು ತನ್ನ ಕನಸು ಎಂದು ಹೇಳಿದ್ದಾರೆ.
ಬಿಸಿಸಿಐ ಟ್ವಿಟ್ಟರ್ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು ಈ ವಿಡಿಯೋದಲ್ಲಿ ಗಾಯಕ್ವಾಡ್ "ಚಿನ್ನದ ಪದಕ ಗೆಲ್ಲುವುದು, ವೇದಿಕೆಯ ಮೇಲೆ ನಿಂತು ದೇಶಕ್ಕಾಗಿ ರಾಷ್ಟ್ರಗೀತೆ ಹಾಡುವುದು ಕನಸು "ಗಾಯಕ್ವಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತಕ್ಕಾಗಿ ಆಡುವುದು ಹೆಮ್ಮೆಯ ಭಾವನೆ ಮತ್ತು ಅಂತಹ ಶ್ರೇಷ್ಠ ಘಟನೆಯಲ್ಲಿ ತಂಡವನ್ನು ಮುನ್ನಡೆಸುವುದು ನನಗೆ, ವೈಯಕ್ತಿಕವಾಗಿ ಮತ್ತು ನನ್ನೊಂದಿಗೆ ಇರುವ ಇತರ ಎಲ್ಲಾ ತಂಡದ ಸದಸ್ಯರಿಗೆ ಉತ್ತಮ ಅವಕಾಶವಾಗಿದೆ" ಎಂದಿದ್ದಾರೆ ಋತುರಾಜ್ ಗಾಯಕ್ವಾಡ್.

ಏಷ್ಯನ್ ಗೇಮ್ಸ್ ಅವಧಿಯಲ್ಲಿ ವಿಶ್ವಕಪ್ ಕ್ರಿಕೆಟ್ ಸನಿಹದಲ್ಲಿರುವ ಕಾರಣ ಅಲ್ಲಿ ಭಾಗವಹಿಸುವ ಆಟಗಾರರಿಗೆ ಪೂರ್ವಸಿದ್ಧತೆಗೆ ಅವಕಾಶ ನೀಡಲಾಗಿದ್ದು ಭಾರತ ತನ್ನ ಈ ಕ್ರೀಡಾಕೂಟಕ್ಕೆ ಹೊಸ ಆಟಗಾರರನ್ನು ಹೆಸರಿಸಿದೆ. ಏಷ್ಯನ್ ಗೇಮ್ಸ್ನಲ್ಲಿ ಟಿ20 ಮಾದರಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಆಟಗಾರರಿಗೆ ಈ ಟೂರ್ನಿಯಲ್ಲಿ ಅವಕಾಶ ದೊರೆತಿದೆ. ಹೀಗಾಗಿ ಈ ತಂಡದ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.
ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಮಿಂಚಿರುವ ಯುವ ಪ್ರತಿಭೆಗಳಿಗೆ ಈ ಟೂರ್ನಿ ಅದ್ಭುತ ಅವಕಾಶವಾಗಿದ್ದು ಪ್ರತಿಭಾನ್ವಿತ ಕ್ರಿಕೆಟಿಗರು ಈ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಋತುರಾಜ್ ಗಾಯಕ್ವಾಡ್ಗೆ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ದೊರೆತಿದ್ದು ರಿಂಕು ಸಿಂಗ್, ಜಿತೇಶ್ ಶರ್ಮಾ ಅವರಂತಾ ಪ್ರತಿಭೆಗಳಿಗೂ ಸ್ಥಾನ ನೀಡಲಾಗಿದೆ. ಈ ಇಬ್ಬರು ಕೂಡ ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು ಇದಕ್ಕೆ ಪ್ರತಿಫಲವಾಗಿ ರಾಷ್ಟ್ರೀಯ ತಂಡದಲ್ಲಿ ಗೌರವ ದೊರೆತಂತಾಗಿದೆ.