ಇಂಗ್ಲೆಂಡ್ನ ಕೆನ್ನಿಂಗ್ಟನ್ ಓವಲ್ನಲ್ಲಿ ಜೂನ್ 7ರಿಂದ 11ರವರೆಗೆ ನಡೆಯಲಿರುವ 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಪ್ಯಾಟ್ ಕಮ್ಮಿನ್ಸ್ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡಲಿದೆ.
ಇದೇ ವೇಳೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ತಮ್ಮ ಅತ್ಯುತ್ತಮ ಮೂವರು ವೇಗಿಗಳೊಂದಿಗೆ ಆಡಬೇಕು ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಜೇಸನ್ ಗಿಲ್ಲೆಸ್ಪಿ ಸಲಹೆ ನೀಡಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೂ ಮುನ್ನ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯವು ಮೊದಲ ಸ್ಥಾನ ಗಳಿಸಿತ್ತು. ಹೀಗಾಗಿ ಫೈನಲ್ ಪಂದ್ಯದಲ್ಲಿ ಈ ಎರಡೂ ತಂಡಗಳು ಮುಖಾಮುಖಿಯಾಗಿವೆ.
"ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಹೆಚ್ಚು ಬ್ಯಾಟಿಂಗ್ ಅಗತ್ಯವಿದೆ ಎಂದು ಭಾರತ ತಂಡ ಭಾವಿಸಿದರೆ, ಶಾರ್ದೂಲ್ ಠಾಕೂರ್ ಅವರನ್ನು ಆಯ್ಕೆ ಮಾಡಬಹುದು. ಆದರೆ ಅಂತಿಮವಾಗಿ, ಭಾರತ ತಮ್ಮ ಬೌಲಿಂಗ್ ದಾಳಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. 20 ವಿಕೆಟ್ಗಳನ್ನು ಪಡೆಯುವ ಸಾಧ್ಯತೆಯಿರುವ ತಂಡ ಯಾವುದು ಎನ್ನುವುದನ್ನು ನಿರ್ಧರಿಸಬೇಕಿದೆ," ಎಂದು ಜೇಸನ್ ಗಿಲ್ಲೆಸ್ಪಿ ಅಭಿಪ್ರಾಯಪಟ್ಟರು.

ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲು ಭಾರತವು ತಮ್ಮ ಅತ್ಯುತ್ತಮ ಮೂವರು ವೇಗದ ಬೌಲರ್ಗಳನ್ನು ಆಯ್ಕೆ ಮಾಡಬೇಕು ಎಂದು ಜೇಸನ್ ಗಿಲ್ಲೆಸ್ಪಿ ಸಲಹೆ ನೀಡಿದರು. ಭಾರತ ತಂಡಕ್ಕೆ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಯದೇವ್ ಉನಾದ್ಕಟ್, ಉಮೇಶ್ ಯಾದವ್ ಮತ್ತು ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರ ವೇಗದ ಬೌಲಿಂಗ್ ಆಯ್ಕೆಗಳಿವೆ.
"ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಆ 20 ವಿಕೆಟ್ಗಳನ್ನು ಕಬಳಿಸಲು ಕೊಡುಗೆ ನೀಡುತ್ತಾರೆ. ಅಷ್ಟೇ ಅಲ್ಲದೆ, ಅವರು ಬ್ಯಾಟಿಂಗ್ನಲ್ಲಿಯೂ ಉತ್ತಮ ಕೊಡುಗೆ ನೀಡುತ್ತಾರೆ. ಆಸ್ಟ್ರೇಲಿಯಾದ 20 ವಿಕೆಟ್ಗಳನ್ನು ಪಡೆಯಲು ತಮ್ಮ ಅತ್ಯುತ್ತಮ ಮೂರು ವೇಗದ ಬೌಲರ್ಗಳನ್ನು ಆಯ್ಕೆ ಮಾಡಬೇಕೆಂದು ನಾನು ಸಲಹೆ ನೀಡುತ್ತೇನೆ," ಎಂದು ಜೇಸನ್ ಗಿಲ್ಲೆಸ್ಪಿ ತಿಳಿಸಿದರು.
ಇದೇ ವೇಳೆ ಮೊಹಮ್ಮದ್ ಶಮಿ ಅವರನ್ನು ಆಸೀಸ್ ಮಾಜಿ ವೇಗಿ ಶ್ಲಾಘಿಸಿದರು. ಅವರ ವೇಗ ಪ್ರಸ್ತುತಿ ವಿಶ್ವ ಕ್ರಿಕೆಟ್ನಲ್ಲಿ ಉತ್ತಮವಾಗಿದೆ. ಅವರು ಭಾರತಕ್ಕೆ ಇಂಗ್ಲೆಂಡ್ ಪರಿಸ್ಥಿತಿಗಳಲ್ಲಿ ದೊಡ್ಡ ಪಾತ್ರವನ್ನು ವಹಿಸಬಹುದು ಎಂದು ಹೇಳಿದರು.

ಮೊಹಮ್ಮದ್ ಶಮಿ ಅವರು 17 ಪಂದ್ಯಗಳಲ್ಲಿ 28 ವಿಕೆಟ್ಗಳೊಂದಿಗೆ ಐಪಿಎಲ್ 2023ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಉತ್ತಮ ಫಾರ್ಮ್ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.
"ಮೊಹಮ್ಮದ್ ಶಮಿ ನನ್ನನ್ನು ತುಂಬಾ ಪ್ರಭಾವಿಸಿದ ಬೌಲರ್. ಆತ ಭಾರತಕ್ಕಾಗಿ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ. ಶಮಿ ವೇಗ ಮತ್ತು ಚೆಂಡನ್ನು ಬಿಡುಗಡೆ ಮಾಡುವ ಶೈಲಿ ನನಗೆ ಇಷ್ಟವಾಗಿದೆ," ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ಜೇಸನ್ ಗಿಲ್ಲೆಸ್ಪಿ ಹೇಳಿದರು.
ಜೂನ್ 7ರಂದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು, ಭಾರತ ತಂಡವು ಸುಮಾರು ಒಂದು ದಶಕದ ನಂತರ ತಮ್ಮ ಮೊದಲ ಐಸಿಸಿ ಟ್ರೋಫಿಯನ್ನು ಎತ್ತಿ ಹಿಡಿಯಲು ಎದುರು ನೋಡುತ್ತಿದೆ.