ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕಳಪೆ ಪ್ರದರ್ಶನ ತೋರಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ತವರಿನಲ್ಲಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗುವ ಮೂಲಕ ಬೇಡದ ದಾಖಲೆಯನ್ನು ಮಾಡಿದೆ.
ಕಿವೀಸ್ ಪಡೆಯ ವೇಗದ ಬೌಲಿಂಗ್ ದಾಳಿಗೆ ಪ್ರತ್ಯೋತ್ತರ ನೀಡಿದ ಟೀಮ್ ಇಂಡಿಯಾ ಬ್ಯಾಟರ್ ಪೆವೆಲಿಯನ್ ಪರೇಡ್ ನಡೆಸಿದರು. ಪರಿಣಾಮವಾಗಿ ಟೀಮ್ ಇಂಡಿಯಾ 31.2 ಓವರ್ಗಳಲ್ಲಿ ಕೇವಲ 46 ರನ್ಗಳಿಗೆ ಆಲೌಟ್ ಆಯಿತು. ಮೊದಲ ಬಾರಿಗೆ ಟೀಮ್ ಇಂಡಿಯಾ ತವರಿನಲ್ಲಿ 50ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿರುವುದು. 1987ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 75 ರನ್ಗಳಿಗೆ ಆಲೌಟ್ ಆಗಿತ್ತು.

ಟೀಮ್ ಇಂಡಿಯಾ ಕಡಿಮೆ ಮೊತ್ತಕ್ಕೆ ಆಲೌಟ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗೆ ಗುರಿಯಾಗುತ್ತಿದೆ. ಜೊತೆಗೆ ನೆಟ್ಟಿಗರಿಗೆ ಟೀಮ್ ಇಂಡಿಯಾ ಭರ್ಜರಿ ಆಹಾರವಾಗಿದೆ. ಮತ್ತೊಂದೆಡೆ ಮಾಜಿ ಆಟಗಾರರು ಕೂಡ ತಂಡದ ಕಾಲೆಳೆದಿದ್ದಾರೆ. ಟೀಮ್ ಇಂಡಿಯಾಕ್ಕೆ ಸಂಬಂಧಿಸಿದ ಸಾಕಷ್ಟು ಮೀಮ್, ಟ್ರೋಲ್ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಮುಂದಿನ ತಿಂಗಳು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತಬ ಮತ್ತು ಆಸ್ಟ್ರೇಲಿಯಾ ನಡುವೆ ಬಾರ್ಡರ್ ಗವಾಸ್ಕರ್ ಟ್ರೋಫಿಯ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾ ಕ್ರಿಕೆಟ್ ಹಂಚಿಕೊಂಡಿರುವ ವಿಡಿಯೋ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಯಾಗಿದೆ.
ಭಾರತ ತಂಡ 46 ರನ್ಗಳಿಗೆ ಆಲೌಟ್ ಆಗುತ್ತಿದ್ದಂತೆ ಆಸ್ಟ್ರೇಲಿಯಾ ಕ್ರಿಕೆಟ್ ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ಕ್ರಿಕೆಟ್ ಭಾರತ ತಂಡದ ಕಾಲೆಳೆದಿದೆ. ಈ ವಿಡಿಯೋ ಮಿಂಚಿನ ವೇಗದಲ್ಲಿ ವೈರಲ್ ಆಗಿದೆ.
2020-21ರ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 36 ರನ್ಗಳಿಗೆ ಸರ್ವಪತನವಾಗಿತ್ತು. ಇದು ಟೆಸ್ಟ್ ಇತಿಹಾಸದಲ್ಲಿ ಭಾರತದ ಕನಿಷ್ಠ ಮೊತ್ತವಾಗಿದೆ. ಅಡಿಲೇಡ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ಗಳನ್ನು ಆಸೀಸ್ ವೇಗಿಗಳಾದ ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್ವುಡ್ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಆಸ್ಟ್ರೇಲಿಯಾ ಕ್ರಿಕೆಟ್ ಅಡಿಲೇಡ್ನಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕ ತತ್ತರಿಸಿದ ಹೈಲೈಟ್ಸ್ ವಿಡಿಯೋ ಅನ್ನು ಟ್ವೀಟರ್ (ಎಕ್ಸ್)ನಲ್ಲಿ ಪೋಸ್ಟ್ ಮಾಡಿದೆ. ಆಗ '36 ರನ್ಗಳಿಗೆ ಆಲೌಟ್, ಈಗ 46 ರನ್ಗಳಿಗೆ ಆಲೌಟ್' ಎಂದು ಪೋಸ್ಟ್ನಲ್ಲಿ ಕ್ಯಾಪ್ಶನ್ ಬರೆದು ಭಾರತ ತಂಡದ ಕಾಲೆಳೆದಿದೆ.
ಅಡಿಲೇಡ್ ಟೆಸ್ಟ್ ಪಂದ್ಯದ ನಂತರ ಟೀಮ್ ಇಂಡಿಯಾ ಅದ್ಭುತ ಪುನರಾಗಮನವನ್ನು ಮಾಡಿತ್ತು. ಅಂತಿಮವಾಗಿ ಆಸ್ಟ್ರೇಲಿಯಾ ವಿರುದ್ಧ ಸರಣಿಯನ್ನು 2-1 ಅಂತರದಿಂದ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಗಬಾದಲ್ಲಿ ರಿಷಬ್ ಪಂತ್ ಅಬ್ಬರ ಬ್ಯಾಟಿಂಗ್ ಮಾಡಿ ಭಾರತಕ್ಕೆ ಐತಿಹಾಸಿಕ ಗೆಲುವು ತಂದು ಕೊಟ್ಟಿದ್ದರು.