
ಟಿ20 ವಿಶ್ವಕಪ್ನ ಸೂಪರ್ 12 ಹಂತದಲ್ಲಿ ಶನಿವಾರ ನಡೆಯುವ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಶ್ರೀಲಂಕಾ ಹಾಗೂ ಇಂಗ್ಲೆಂಡ್ ತಂಡಗಳು ತಮ್ಮ ಅಂತಿಮ ಸೂಪರ್ 12 ಹಂತದ ಪಂದ್ಯವನ್ನು ಆಡಿಲಿದ್ದು ಸೆಮಿಫೈನಲ್ಗೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳಿಗೆ ಈ ಪಂದ್ಯ ಬಹಳ ನಿರ್ಣಾಯಕವೆನಿಸಿದೆ. ಶ್ರೀಲಂಕಾ ಗೆಲುವು ಸಾಧಿಸಿದರೆ ಆಸ್ಟ್ರೇಲಿಯಾಗೆ ಸೆಮಿಫಯನಲ್ಗೇರಲು ಅವಕಾಶ ದೊರೆಯುವ ಕಾರಣ ಈ ಪಂದ್ಯದಲ್ಲಿ ಶ್ರೀಲಂಕಾ ಗೆಲುವಿಗೆ ಆಸ್ಟ್ರೇಲಿಯಾ ಕಾತರಿಸುತ್ತಿದೆ.
ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದ ಬಳಿಕ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ವೇಡ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಶನಿವಾರ ನಡೆಯಲಿರುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಶ್ರೀಲಂಕಾ ಮಣಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
"ನಾವು ಇಂದು ರಾತ್ರಿ ಇಲ್ಲೇ ಉಳಿದು ನಾಳೆ ಪಂದ್ಯವನ್ನು ವೀಕ್ಷಿಸಲಿದ್ದೇವೆ. ಶನಿವಾರದ ಪಂದ್ಯದಲ್ಲಿ ಇಂಗ್ಲೆಂಡ್ಗೆ ಶ್ರೀಲಂಕಾ ಆಘಾತ ನೀಡುವುದನ್ನು ನೋಡಲು ಬಯಸುತ್ತೇವೆ. ಟೂರ್ನಿಯಲ್ಲಿ ಮುಂದುವರಿಯುವ ಸ್ಥಾನದಲ್ಲಿ ಈವರೆಗೂ ನಮ್ಮ ತಂಡವನ್ನು ಉಳಿಸಿಕೊಳ್ಳಲು ನಾವು ಯಶಸ್ವಿಯಾಗಿದ್ದೇವೆ. ಇನ್ನು ಈ ಟೂರ್ನಿಯಲ್ಲಿ ನಮ್ಮಿಂದ ನಿಧಾನಗತಿಯ ಪ್ರದರ್ಶನ ಬಂದಿದ್ದರೂ ಅದು ನಮಗೆ ಹಿನ್ನಡೆಯುಂಟು ಮಾಡದು ಎಂಬ ವಿಶ್ವಾಸದಲ್ಲಿದ್ದೇವೆ" ಎಂದು ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ವೇಡ್ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಶುಕ್ರವಾರ ಆಸ್ಟ್ರೇಲಿಯಾಗೆ ನಿರ್ಣಾಯಕವಾಗಿದ್ದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸೋಲಿನ ಅಂಚಿಗೆ ತಲುಪಿ ಕಡೆಗೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಆಲ್ರೌಂಡರ್ ರಶೀದ್ ಖಾನ್ ಅಂತಿಮ ಹಂತದಲ್ಲಿ ಅದ್ಭುತ ಹೋರಾಟವನ್ನು ಪ್ರದರ್ಶಿಸಿದ್ದು ತಂಡವನ್ನ ಗೆಲುವಿನ ಸನಿಹಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು ಕೂಡ ಗೆಲುವಿನ ದಡ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತಿಮ ಹಂತದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.
ಆಸ್ಟ್ರೇಲಿಯಾ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿತ್ತು. ಸೆಮಿಫೈನಲ್ ಹಂತಕ್ಕೇರುವ ಸ್ಪರ್ಧೆಯಲ್ಲಿ ಮುಂದುವರಿಯಬೇಕಾದರೆ ಆಸ್ಟ್ರೇಲಿಯಾ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿತ್ತು. ತೀವ್ರ ಪೈಪೋಟಿಯನ್ನು ನಡೆಸಿದ ಬಳಿಕ ಆಸಿಸ್ ಪಡೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಅಫ್ಘಾನಿಸ್ತಾನ ತಂಡ ಒಂದೂ ಗೆಲುವು ಕಾಣದೆ ನಿರಾಸೆ ಅನುಭವಿಸಿದೆ.