ಬೆಂಗಳೂರು, ಸೆಪ್ಟೆಂಬರ್ 28: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೆ. 28ರ ಮಧ್ಯಾಹ್ನ ಆರಂಭವಾದ ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸೀಸ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದೆ.
ಇಂಗ್ಲೆಂಡ್ ನ ರಿಚರ್ಡ್ ಈಲಿಂಗ್ ವರ್ತ್ ಹಾಗೂ ಭಾರತದ ಸಿ. ಶಂಶುದ್ದೀನ್ ಅವರ ಸಮ್ಮುಖದಲ್ಲಿ ಹಾಕಲಾದ ಟಾಸ್ ಗೆದ್ದ ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್, ಮೊದಲು ಬ್ಯಾಟ್ ಮಾಡುವ ನಿರ್ಧಾರ ಕೈಗೊಂಡಿದ್ದರು.

ಟಾಸ್ ಹಾಕುವ ಮುನ್ನವೇ ಮಾಧ್ಯಮಗಳ ಜತೆ ಮಾತನಾಡಿದ್ದ ಸ್ಟೀವನ್ ಸ್ಮಿತ್, ''ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ದುಕೊಳ್ಳುತ್ತೇನೆ. ಇಲ್ಲಿನ ಪಿಚ್ ಡ್ರೈ ಆಗಿದ್ದು, ಮೊದಲು ಬ್ಯಾಟ್ ಮಾಡುವವರಿಗೆ ಹೆಚ್ಚು ಅನುಕೂಲಕಾರಿಯಾಗಿದೆ'' ಎಂದು ಪ್ರತಿಕ್ರಿಯಿಸಿದರು.
ಅತ್ತ, ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು ಪ್ರತಿಕ್ರಿಯಿಸಿದ್ದು, ''ಇದೇ ವರ್ಷ ಐಪಿಎಲ್ ವೇಳೆ ನಾನು ಗಮನಿಸಿದ್ದ ಬೆಂಗಳೂರಿನ ಪಿಚ್ ಗೂ ಈಗಿನ ಪಿಚ್ ಗೂ ವ್ಯತ್ಯಾಸಗಳಿವೆ. ಈಗಿನ ಪಿಚ್ ಮೊದಲಿಗಿಂತಲೂ ಡ್ರೈ ಆಗಿದೆ. ಹಾಗಾಗಿ, ಮೊದಲು ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚು ಅನುಕೂಲವಿದೆ. ಆದರೆ, ಎರಡನೇ ಇನಿಂಗ್ಸ್ ನಲ್ಲಿ ಬ್ಯಾಟ್ ಮಾಡುವ ತಂಡಕ್ಕೂ ಯಾವುದೇ ತೊಂದರೆಯೇನಿಲ್ಲ. ಸಂಜೆ ವೇಳೆಗೆ ಉಷ್ಣಾಂಶ ಇಳಿಕೆಯಾದ ನಂತರ, ಇಲ್ಲಿನ ಪಿಚ್ ಬದಲಾವಣೆಯಾಗಿ, ಬ್ಯಾಟಿಂಗ್ ಗೆ ಅನುಕೂಲ ಕಲ್ಪಿಸಲಿದೆ'' ಎಂದು ತಿಳಿಸಿದ್ದಾರೆ.