
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಗೆಲ್ಲುತ್ತಲೇ ಭಾರತೀಯ ಆಟಗಾರರ ಕಿಚ್ಚಿನ ಹೋರಾಟದ ಬಗ್ಗೆ, ಅಜಿಂಕ್ಯ ರಹಾನೆಯವರ ಉತ್ತಮ ನಾಯಕತ್ವದ ಬಗ್ಗೆ ಎಲ್ಲೆಡೆ ಶ್ಲಾಘನೆ ಕೇಳಿ ಬರತೊಡಗಿದೆ. ಈ ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್ನ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದೆ.
ಗಬ್ಬಾ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 3 ವಿಕೆಟ್ ರೋಚಕ ಗೆಲುವು ಕಂಡಿತ್ತು. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-1ರಿಂದ ಗೆದ್ದಿತ್ತು. ಮುಖ್ಯವಾಗಿ ನಾಲ್ಕನೇ ಪಂದ್ಯದಲ್ಲಿನ ಗೆಲುವು ಭಾರತ ಹೆಚ್ಚು ಮಿನುಗುವಂತೆ ಮಾಡಿತ್ತು.
ಗಬ್ಬಾ ಟೆಸ್ಟ್ ಮುಗಿಯುತ್ತಲೇ ಅಜಿಂಕ್ಯ ರಹಾನೆ ಬಳಗದಲ್ಲಿದ್ದ ಮೂವರು ಆರ್ಸಿಬಿ ಬೌಲರ್ಗಳಾದ ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್ ಮತ್ತು ನವದೀಪ್ ಸೈನಿ ಬಗ್ಗೆ ಜಾಲತಾಣದಲ್ಲಿ ಪೋಸ್ಟ್ಗಳು ಓಡಾಡುತ್ತಿವೆ. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಚೆನ್ನಾಗಿ ಆಡುವ ಸಿರಾಜ್, ಸುಂದರ್, ಸೈನಿ ಕೊಹ್ಲಿ ನಾಯಕತ್ವದಲ್ಲಿ ಯಾಕೆ ಆಡುತ್ತಿಲ್ಲ? ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.
ಆರ್ಸಿಬಿ ಮೂವರು ಬೌಲರ್ಗಳನ್ನು ರಹಾನೆ ಚೆನ್ನಾಗಿ ಬಳಸಿಕೊಂಡಿದ್ದಾರೆ. ಕೊಹ್ಲಿ ಯಾಕೆ ಬಳಸಿಕೊಳ್ಳುತ್ತಿಲ್ಲ? ಕೊಹ್ಲಿ ನಾಯಕತ್ವದ ಸರಿಯಿಲ್ಲ. ಆರ್ಸಿಬಿ ನಾಯಕ ಬದಲಾಗಬೇಕು ಆಗ ಮಾತ್ರ ತಂಡ ಕಪ್ ಗೆಲ್ಲುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಇನ್ನೂ ಕೆಲವರು ಟೆಸ್ಟ್ ಪ್ರದರ್ಶನವನ್ನು ಟಿ20ಗೆ ಹೋಲಿಸಿ ನೋಡೋದು ಅರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.