
ಸಿಡ್ನಿ: ಭಾರತದ ಯುವ ಬ್ಯಾಟ್ಸ್ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆಯುತ್ತಿರುವ ಭಾರತ vs ಆಸ್ಟ್ರೇಲಿಯಾ ತೃತೀಯ ಪಂದ್ಯದಲ್ಲಿ ಗಾಯಕ್ಕೀಡಾಗಿರುವ ಪಂತ್ ಅವರನ್ನು ಸ್ಕ್ಯಾನಿಂಗ್ಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಭಾರತದ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಪಂತ್, ಪ್ಯಾಟ್ ಕಮಿನ್ಸ್ ಓವರ್ನಲ್ಲಿ ಶಾರ್ಟ್ ಬಾಲ್ ಅನ್ನು ಮಿಸ್ ಮಾಡಿದರು. ಚೆಂಡು ಪಂತ್ ಅವರ ಎಡಗೈಗೆ ಬಡಿಯಿತು. ಚೆಂಡು ಜೋರಾಗಿ ಬಡಿದಿದ್ದರಿಂದ ಪಂತ್ ಗಾಯಕ್ಕೀಡಾಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಪಂತ್ 36 ರನ್ಗೆ ಜೋಶ್ ಹ್ಯಾಝಲ್ವುಡ್ಗೆ ವಿಕೆಟ್ ನೀಡಿದ್ದರು.
ಭಾರತದ ದ್ವಿತೀಯ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ ಆಡುತ್ತಾರೋ ಇಲ್ಲವೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಪಂತ್ ಸ್ಕ್ಯಾನಿಂಗ್ ವರದಿಯ ಬಳಿಕ ನಿರ್ಧಾರ ತಿಳಿಸುವುದಾಗಿ ಬಿಸಿಸಿಐ ಹೇಳಿದೆ. ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್ ವೇಳೆ ಪಂತ್ ಬದಲಿಗೆ ಅನುಭವಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ಗೆ ಬಂದಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ನಲ್ಲಿ 105.4 ಓವರ್ಗೆ 338 ರನ್ ಪೇರಿಸಿತ್ತು. ಭಾರತ ತಂಡ ಮೊದಲ ಇನ್ನಿಂಗ್ಸ್ನಲ್ಲಿ 100.4 ಓವರ್ಗೆ 244 ರನ್ ಬಾರಿಸಿ 94 ರನ್ ಹಿನ್ನಡೆ ಅನುಭವಿಸಿದೆ. ಆಸ್ಟ್ರೇಲಿಯಾ ಸದ್ಯ ದ್ವಿತೀಯ ಇನ್ನಿಂಗ್ಸ್ ಆಡುತ್ತಿದೆ.