
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಗಳು ಹೆಚ್ಚು ಕುತೂಹಲಕಾರಿಯಾಗಿರುತ್ತದೆ. ಯಾಕೆಂದರೆ ಎರಡೂ ತಂಡಗಳೂ ಬಲಿಷ್ಠವಾಗಿರುವುದರಿಂದ ಇತ್ತಂಡಗಳ ಕದನವೂ ಜಿದ್ದಾಜಿದ್ದಿಯಿಂದ ಕೂಡಿರುತ್ತದೆ. ಇತ್ತಂಡಗಳ ಆಟಗಾರರು ಪರಸ್ಪರ ಕಾಲೆಳೆದುಕೊಳ್ಳುವುದೂ ಇದೆ.
ಬಲಿಷ್ಠ ತಂಡಗಳ ನಡುವಿನ ಕದನವೆಂದರೆ ಅಲ್ಲಿ ಆಟಗಾರರ ಮಧ್ಯೆ ಬಿಗುವಿನ ವಾತಾವರಣ ನಿರ್ಮಾಣವಾಗೋದು ಸಾಮಾನ್ಯ. ಸದ್ಯ ಕುತೂಹಲಕಾರಿ ಟೆಸ್ಟ್ ಪಂದ್ಯ ಆಡುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವೆಯೂ ಕಾಲೆಳೆಯುವಿಕೆ, ತಮಾಷೆ, ಸಿಡುಕಿನ ಸಂಗತಿಗಳು ನಡೆಯುತ್ತಿವೆ. ತೀರಾ ಇತ್ತೀಚೆಗೆ ಆಸ್ಟ್ರೇಲಿಯಾ ನಾಯಕ ಟಿಮ್ ಪೈನ್ ಮತ್ತು ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇದಕ್ಕೆ ಸಾಕ್ಷಿಯಾಗಿದ್ದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಡ್ರಾಗೊಂಡ ಬಳಿಕ ಆರ್ ಅಶ್ವಿನ್ ಬಳಿ ಬಂದಿದ್ದ ಪೈನ್, 'ಗಬ್ಬಾದಲ್ಲಿ ನಿನ್ನನ್ನು ಎದುರುಗೊಳ್ಳಲು ಕಾತರನಾಗಿದ್ದೇನೆ,' ಎಂದಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಅಶ್ವಿನ್, 'ಭಾರತದಲ್ಲಿ ನಿನ್ನನ್ನು ನೋಡಲು ಕಾತರನಾಗಿದ್ದೇನೆ. ಅದು ನಿನ್ನ ಕೊನೇ ಸರಣಿಯಾಗಿರಲಿದೆ,' ಎಂದಿದ್ದರು.
ಪಂದ್ಯ ಮುಕ್ತಾಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪೈನ್ ತನ್ನ ದುರ್ವರ್ತನೆಗಳಿಗೆಲ್ಲ ಕ್ಷಮೆ ಕೋರಿದ್ದಾರೆ. 'ನಾನು ಹೆಮ್ಮೆ ಪಡುವ ತಂಡವನ್ನು ಮುನ್ನಡೆಸುವವನು. ನೆನ್ನೆ ನಾನು ಅದನ್ನು ಮರೆತು ವರ್ತಿಸಿದೆ. ನಾನು ಮನುಷ್ಯ. ನಾನು ತಪ್ಪುಗಳನ್ನು ಮಾಡುತ್ತೇನೆ. ಆದರೆ ನಾನು ಮಾಡಿದ ತಪ್ಪುಗಳಿಗೆ ಕ್ಷಮೆ ಕೋರಲು ಬಯಸುತ್ತೇನೆ,' ಎಂದು ಪೈನ್ ಹೇಳಿದ್ದಾರೆ.