
ನವದೆಹಲಿ: ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ಟೀಮ್ ಇಂಡಿಯಾ ಆತಿಥೇಯರ ವಿರುದ್ಧ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಭಾರತಕ್ಕೆ ವಾಪಸ್ಸಾಗಿದೆ. ತಾಯ್ನಾಡಿಗೆ ಮರಳಿರುವ ಭಾರತ ತಂಡವನ್ನು ಅಭಿಮಾನಿಗಳು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ, ಅದ್ದೂರಿಯಾಗಿ ಸ್ವಾಗತಿಸಿದ್ದಾರೆ.
ಪ್ರವಾಸ ಸರಣಿಗಳಲ್ಲಿ ನಾಲ್ಕು ಪಂದ್ಯಗಳ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಹೆಚ್ಚು ಕುತೂಹಲ ಮೂಡಿಸಿತ್ತು. ಈ ಸರಣಿಯನ್ನು ಭಾರತ 2-1ರಿಂದ ಗೆದ್ದುಕೊಂಡಿದೆ. ಆರಂಭದಲ್ಲಿ ಟೆಸ್ಟ್ ಸರಣಿಯನ್ನು 4-0ಯಿಂದ ಸೋಲುವ ಸೂಚನೆ ನೀಡಿದ್ದ ಭಾರತ ಮತ್ತೆ ರೋಚಕ ರೀತಿಯಲ್ಲಿ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.
ಸರಣಿ ಗೆಲುವಿನಲ್ಲಿ ಪ್ರಮುಖ ಕಾರಣರಾಗಿದ್ದ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಆಸ್ಟ್ರೇಲಿಯಾದ ಪ್ರೇಕ್ಷಕರು ನನ್ನನ್ನು ನಿಂದಿಸಲಾರಂಭಿಸಿದರು. ಅದು ನನ್ನನ್ನು ಮಾನಸಿಕವಾಗಿ ಇನ್ನಷ್ಟು ಬಲಿಷ್ಠನನ್ನಾಗಿಸಿತು,' ಎಂದು ಭಾರತಕ್ಕೆ ಬಂದಿರುವ ಸಿರಾಜ್ ಹೇಳಿದ್ದಾರೆ.
'ಪ್ರೇಕ್ಷಕರ ನಿಂದನೆ ನನ್ನ ಪ್ರದರ್ಶನವನ್ನು ಕಡಿಮೆ ಮಾಡಬಾರದು ಎಂಬ ಯೋಚನೆ ನನ್ನಲ್ಲಿತ್ತು. ನನ್ನ ನಿಂದಿಸಿದ್ದನ್ನು ನನ್ನ ನಾಯಕನಿಗೆ ಹೇಳೋದು ನನ್ನ ಜವಾಬ್ದಾರಿಯಾಗಿತ್ತು. ಅದನ್ನು ಮಾಡಿದೆ,' ಎಂದು ಸಿರಾಜ್ ವಿವರಿಸಿದ್ದಾರೆ. ಸಿಡ್ನಿ ಮತ್ತು ಬ್ರಿಸ್ಬೇನ್ನಲ್ಲಿ ನಡೆದಿದ್ದ ಪಂದ್ಯಗಳ ವೇಳೆ ಸಿರಾಜ್ ಪ್ರೇಕ್ಷಕರಿಂದ ನಿಂದಿಸಲ್ಪಟ್ಟಿದ್ದರು. ಅಂದ್ಹಾಗೆ ಆಸೀಸ್ ಟೆಸ್ಟ್ ಸರಣಿಯಲ್ಲಿ ಸಿರಾಜ್ ಒಟ್ಟು 13 ವಿಕೆಟ್ ಪಡೆದಿದ್ದರು.