ತಾನಾಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡ ಬೌಲಿಂಗ್ ವಿಭಾಗದ ಮೇಲೆ ಹಲವು ಪ್ರಶ್ನೆಗಳು ಎದ್ದಿದ್ದವು. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 209 ರನ್ ಕಲೆ ಹಾಕಿದ್ರೂ ಗೆಲ್ಲುವಲ್ಲಿ ವಿಫಲವಾಗಿದೆ. ಈಗ ಎರಡನೇ ಪಂದ್ಯಕ್ಕಾಗಿ ತಯಾರಿಗಳು ನಡೆದಿವೆ. ಈ ವೇಳೆ ಒಂದು ಸುದ್ದಿ ಬಂದಿದ್ದು ಲಕ್ನೋ ಸೂಪರ್ ಜೈಂಟ್ಸ್ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಟಾರ್ ವೇಗಿ ಆವೇಶ್ ಖಾನ್ ಗಾಯಕ್ಕೆ ತುತ್ತಾಗಿದ್ದಾರೆ. ಇವರ ಗಾಯದ ಬಗ್ಗೆ ಈಗ ಬಿಗ್ ಅಪ್ಡೇಟ್ ಲಭ್ಯವಾಗಿದೆ. ಇವರು ಚೇತರಿಕೆಯನ್ನು ಕಾಣುತ್ತಿದ್ದು ಶೀಘ್ರದಲ್ಲಿ ತಂಡವನ್ನು ಸೇರಿಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇವರು ಗಾಯದ ಕಾರಣದಿಂದಾಗಿಯೇ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವೇ ಆಗಿರಲಿಲ್ಲ. ಇವರು ಎಸ್ಆರ್ಎಚ್ ವಿರುದ್ಧದ ಪಂದ್ಯದ ವೇಳೆ ತಂಡವನ್ನು ಸೇರಿಕೊಳ್ಳುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ.

ಆವೇಶ್ ಖಾನ್ ಕಳೆದ ಕೆಲವು ತಿಂಗಳಿನಿಂದ ಅಂಗಳಕ್ಕೆ ಇಳಿದಿಲ್ಲ. ಇವರು 2024ರ ನವೆಂಬರ್ನಲ್ಲಿ ಭಾರತದ ಪರ ಟೀಮ್ ಇಂಡಿಯಾದ ಪರ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಇವರಿಗೆ ಗಾಯದ ಕಾರಣದಿಂದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆಯ ಪಂದ್ಯವನ್ನು ಸಹ ಆಡಲು ಆಗಿರಲಿಲ್ಲ. ಇವರು ಬಿಸಿಸಿಐ ಮೇಲ್ವಿಚಾರಣೆಯಲ್ಲಿ ಗಾಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಈಗ ಚೇತರಿಕೆ ಕಂಡಿದ್ದಾರೆ ಎಂಬ ವರದಿಗಳು ಇವೆ. ಆವೇಶ್ ಇತ್ತೀಚಿಗೆ ಫಿಟ್ನೆಸ್ ಪರೀಕ್ಷೆಗೂ ಒಳಗಾಗಿದ್ದರು ಎಂದು ಕ್ರಿಕ್ ಇನ್ಫೋ ವರದಿ ಮಾಡಿದೆ.
ಎಲ್ಎಸ್ಜಿ ತಂಡಕ್ಕೆ ಆವೇಶ್ ಖಾನ್ ಯಾವಾಗ ಮರಳುತ್ತಾರೆ ಎಂಬ ಬಗ್ಗೆ ಇನ್ನು ನಿಖರ ಮಾಹಿತಿ ಇಲ್ಲ. ಆದರೆ ಈಗ ಬರುತ್ತಿರುವ ವರದಿಯನ್ನು ನಂಬುವುದಾದರೆ ಇವರು ಶೀಘ್ರದಲ್ಲಿ ತಂಡವನ್ನು ಸೇರಿಕೊಳ್ಳಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಎಲ್ಎಸ್ಜಿ ತನ್ನ ಲೀಗ್ ಹಂತದ ಮುಂದಿನ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಅವರು ಮರಳುತ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ.

ಆವೇಶ್ ಖಾನ್ ತಮ್ಮ ಬಿಗುವಿನ ದಾಳಿಯಿಂದಲೇ ಹೆಸರುವಾಸಿ. ಇವರು ಐಪಿಎಲ್ನಲ್ಲಿ ಒಟ್ಟು 63 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಎಲ್ಎಸ್ಜಿ ತಂಡದ ದುಬಾರಿ ಆಟಗಾರ ರಿಷಭ್ ಪಂತ್ ಮೊದಲ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಗುರುವಾರ ನಡೆಯುವ ಪಂದ್ಯದಲ್ಲಿ ಇವರು ಸ್ಥಿರ ಪ್ರದರ್ಶನ ನೀಡುವ ಅನಿವಾರ್ಯತೆ ಇದೆ. ಎಲ್ಎಸ್ಜಿ ಪರ ಮಿಚೆಲ್ ಮಾರ್ಷ್ ಹಾಗೂ ನಿಕೋಲಸ್ ಪೂರನ್ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಿದ್ದರು.
ರವಿ ಬಿಷ್ಣೋಯಿ, ಪ್ರಿನ್ಸ್ ಯಾದವ್, ಶಹಬಾಜ್ ಅಹ್ಮದ್ ರನ್ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದರು. ಅಲ್ಲದೆ ಉಳಿದ ಬ್ಯಾಟರ್ಗಳು ಸರಿಯಾದ ಸ್ಥಳದಲ್ಲಿ ಚೆಂಡನ್ನು ಎಸೆಯುವಲ್ಲಿ ಹಿಂದೆ ಬಿದ್ದಿದ್ದರು. ಹೀಗಾಗಿ ಡೆಲ್ಲಿ ವಿರುದ್ಧ ಎಲ್ಎಸ್ಜಿ ಪಂದ್ಯವನ್ನು ಸೋತಿತ್ತು. ಈಗ ಎರಡನೇ ಪಂದ್ಯದಲ್ಲಿ ಗೆಲುವಿನ ಖಾತೆ ಓಪನ್ ಮಾಡಲು ರಿಷಭ್ ಪಂತ್ ಪಡೆ ಪ್ಲ್ಯಾನ್ ಮಾಡಿಕೊಂಡಿದೆ.