
ನವದೆಹಲಿ, ಮೇ 15: ಈಗಾಗಲೇ ಪ್ರಕಟಗೊಂಡಿರುವ 15 ಜನರನ್ನೊಳಗೊಂಡ ಭಾರತ ವಿಶ್ವಕಪ್ ತಂಡದಲ್ಲಿರುವ ಕೇದಾರ್ ಜಾಧವ್ ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರ ಜಾಗಕ್ಕೆ ಅಕ್ಷರ್ ಪಟೇಲ್ ಅಥವಾ ಅಂಬಾಟಿ ರಾಯುಡು ಅವರನ್ನು ಕರೆತರಲು ಆಯ್ಕೆ ಸಮಿತಿ ಯೋಚಿಸುತ್ತಿದೆಯೆಂದು ವರದಿಯೊಂದು ಹೇಳುತ್ತಿದೆ.
ಆಲ್ ರೌಂಡರ್ ಕೇದಾರ್ ಜಾಧವ್ ಗಾಯಕ್ಕೊಳಗಾಗಿರುವುದು ಬಿಸಿಸಿಐಗೆ ಸಣ್ಣ ಮಟ್ಟಿನ ತಲೆ ನೋವು ತಂದಿರುವುದು ನಿಜ. ಜಾಧವ್ ಚೇತರಿಸಿಕೊಳ್ಳುತ್ತಿರುವತ್ತ ಬಿಸಿಸಿಐ ಕಣ್ಣಿಟ್ಟಿದೆಯಲ್ಲದೆ, ಒಂದು ವೇಳೆ ಜಾಧವ್ ಗಾಯ ಚೇತರಿಕೆ ಕಾಣದಿದ್ದರೆ ಅವರ ಬದಲಿಗೆ ಅಕ್ಷರ್ ಇಲ್ಲವೆ ರಾಯುಡು ಕರೆತರಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಆದರೆ ಯಾವುದಕ್ಕೂ ಜಾಧವ್ ಸುಧಾರಣೆ ಖಾತ್ರಿ ಪಡಿಸಿಕೊಳ್ಳಲು ಬಿಸಿಸಿಐ ಇನ್ನೊಂದಿಷ್ಟು ದಿನ ಕಾಯಲಿದೆ ಎಂದು ಹೇಳಲಾಗುತ್ತಿದೆ.
'ಜಾಧವ್ ಸುಧಾರಣೆ ಸ್ಥಿತಿ ತಿಳಿಸುವುದನ್ನು ಬಿಸಿಸಿಐ ಹಿಡಿದಿಟ್ಟುಕೊಂಡಿದೆ. ಆದರೆ ಜಾಧವ್ ಫಿಟ್ನೆಸ್ ಬಗ್ಗೆ ಬಿಸಿಸಿಐ ತೀವ್ರ ನಿಗಾ ವಹಿಸುತ್ತಿದೆ. ಜಾಧವ್ ವಿಶ್ವಕಪ್ನಲ್ಲಿ ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬ ಬಗ್ಗೆ ಬಿಸಿಸಿಐ ಈಗಲೇ ಹೇಳಲಾರದು. ಆದರೆ ಮುಂದಿನ ವಾರ ಈ ಬಗ್ಗೆ ಮಾಹಿತಿ ನೀಡಲಿದೆ. ಅಂದರೆ ಮೇ 22ರಂದು ಟೀಮ್ ಇಂಡಿಯಾ ಇಲ್ಲಿಂದ ಹೊರಡುವಷ್ಟರಲ್ಲಿ ಮಾಹಿತಿ ಲಭ್ಯವಾಗಲಿದೆ' ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಐಸಿಸಿ ನಿಯಮದ ಪ್ರಕಾರ ಎಲ್ಲಾ ತಂಡಗಳಿಗೂ ಮೇ 23ರರೊಳಗೆ ತಂಡದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಕೊನೆಯ ಅವಕಾಶವಿದೆ. ಹೀಗಾಗಿ ಜಾಧವ್ ಗಾಯ ಸುಧಾರಣೆ ಕಾಣದಿದ್ದರೆ, ಆ ಜಾಗಕ್ಕೆ ಅಕ್ಷರ್ ಪಟೇಲ್ ಅಥವಾ ಅಂಬಾಟಿ ರಾಯುಡು ಬರಲೂ ಬಹುದು.