ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಯಾರಾದರೂ ಕಲಿಯಬೇಕಿದ್ದರೆ, ಅದು ಈ ಪ್ಲೇಯರ್ನನ್ನು ನೋಡಿ ಕಲಿಯಬೇಕು. ಭಾರತದಲ್ಲಿ ನಡೆಯಲಿರುವ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಹಲವು ಯುವ ಆಟಗಾರರು ಕಸರತ್ತು ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಅನುಭವಿ ಆಟಗಾರ ಸಹ ತಮ್ಮನ್ನು ಪರಿಗಣಿಸುವಂತೆ ಆಯ್ಕೆದಾರರಿಗೆ ಒತ್ತಾಯಿಸಿದ್ದಾರೆ.
ದೇಶೀಯ ಟೂರ್ನಿ ದುಲೀಪ್ ಟ್ರೋಫಿ ನಡೆಯುತ್ತಿದೆ. ಈ ಟೂರ್ನಿಯ ಮೇಲೆ ಆಯ್ಕೆದಾರರ ಒಂದು ಕಣ್ಣು ನೆಟ್ಟಿದ್ದಾರೆ. ಈ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಆಟಗಾರರಿಗೆ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸುವ ಚಾನ್ಸ್ ಇದೆ. ಈ ನಿಟ್ಟಿನಲ್ಲಿ ಅನುಭವಿ ಆಲ್ರೌಂಡರ್ ಸಹ ಕರ್ಚಿಫ್ ಹಾಕಿದ್ದಾರೆ.

ಭಾರತದಲ್ಲಿ ಟೆಸ್ಟ್ ಸರಣಿಗಳು ನಡೆಯುತ್ತಿದ್ದರೆ ಸ್ಪಿನ್ ಬೌಲರ್ಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ವೇಳೆ ಟೀಮ್ ಇಂಡಿಯಾದಲ್ಲಿ ಅನುಭವಿ ಸ್ಪಿನ್ ಬೌಲರ್ ಆರ್.ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರು ಇದ್ದಾರೆ. ಇನ್ನು ಒಬ್ಬರಿಗೆ ಅವಕಾಶ ಸಿಕ್ಕರೆ ಹೆಚ್ಚು. ಈ ಅವಕಾಶವನ್ನು ಬಳಸಿಕೊಳ್ಳಲು ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ ರೆಡಿ ಆಗಿದ್ದಾರೆ.
ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಕ್ಷರ್ ಪಟೇಲ್ ಮೊದಲ ಇನಿಂಗ್ಸ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಅಕ್ಷರ್ ತಮ್ಮನ್ನು ಸಹ ಟೆಸ್ಟ್ ತಂಡದಲ್ಲಿ ಪರಿಗಣಿಸಿ ಎಂದು ಆಯ್ಕೆದಾರರಿಗೆ ತಿಳಿಸಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಭಾರತ ಡಿ ತಂಡಕ್ಕೆ ಯಾವೊಬ್ಬ ಬ್ಯಾಟರ್ ಆಧಾರವಾಗದೇ ಇಲ್ಲದಾಗ, ಅಕ್ಷರ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್ನಿಂದ ತಂಡಕ್ಕೆ ನೆರವಾದರು. ಒಂದು ಬದಿಯಲ್ಲಿ ವಿಕೆಟ್ಗಳು ಬೀಳುತ್ತಾ ಇದ್ದರೂ ಸಹ ನೆಲಕಚ್ಚಿ ಬ್ಯಾಟ್ ಮಾಡಿದ ಅಕ್ಷರ್, 116 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಾಯದಿಂದ 86 ರನ್ ಬಾರಿಸಿ ಅಬ್ಬರಿಸಿದರು. ಇವರ ಅಮೋಘ ಬ್ಯಾಟಿಂಗ್ ಫಲವಾಗಿಯೇ ಭಾರತ ಡಿ ತಂಡ 164 ರನ್ಗಳನ್ನು ಮೊದಲ ಇನಿಂಗ್ಸ್ನಲ್ಲಿ ಕಲೆ ಹಾಕಿತು.
ಮೊದಲ ಇನಿಂಗ್ಸ್ ಆರಂಭಿಸಿರುವ ಭಾರತ ಸಿ ತಂಡಕ್ಕೆ ಪೆಟ್ಟು ನೀಡುವಲ್ಲಿ ಸಹ ಅಕ್ಷರ್ ಪಟೇಲ್ ಸಹ ಸಫಲರಾಗಿದ್ದಾರೆ. ಇವರು ಪಂದ್ಯದ 16ನೇ ಓವರ್ನಲ್ಲಿ ಮಧ್ಯಮ ಕ್ರಮಾಂಕದ ಆಟಗಾರ ಆರ್ಯನ್ ಜುಯಲ್ಗೆ ಖೆಡ್ಡಾ ತೋಡಿದರು. ಇನ್ನು 18ನೇ ಓವರ್ನಲ್ಲಿ ಭರವಸೆಯ ಆಟಗಾರ ರಜತ್ ಪಟಿದಾರ್ ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಅಕ್ಷರ್ ಪಟೇಲ್ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಕನಸಿನಲ್ಲಿದ್ದು, ಮೊದಲ ಇನಿಂಗ್ಸ್ನಲ್ಲಿ ಅಮೋಘ ಪ್ರದರ್ಶನ ನೀಡಿ ತಂಡಕ್ಕೆ ನೆರವಾಗಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ಇದೇ 19ರಿಂದ ಆರಂಭವಾಗಲಿದ್ದು, ಈ ಸರಣಿಗೆ ಭಾರತ ತಂಡವನ್ನು ಪ್ರಕಟಿಸಬೇಕಿದೆ. ದುಲೀಪ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಆಟಗಾರರಿಗೆ ಈ ಟೂರ್ನಿಯಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಇದೆ.