
ನವದೆಹಲಿ, ಡಿಸೆಂಬರ್ 20: ವಂಚನೆ ಪ್ರಕರಣವೊಂದರಲ್ಲಿ ಸಿಲುಕಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ವಿರುದ್ಧ ದೆಹಲಿ ನ್ಯಾಯಾಲಯವೊಂದು ಜಾಮೀನು ಸಹಿತ ವಾರಂಟ್ ಹೊರಡಿಸಿದೆ.
ಗಂಭೀರ್ ಅವರು ಬ್ರಾಂಡ್ ಅಂಬಾಸೆಡರ್ ಆಗಿದ್ದ ರಿಯಲ್ ಎಸ್ಟೇಟ್ ಸಮೂಹ ರುದ್ರ ಬಿಲ್ಡ್ವೆಲ್ ಯೋಜನೆಯ ವಿರುದ್ಧ ವಂಚನೆ, ದುರುಪಯೋಗ ಮತ್ತು ಸಂಚು ರೂಪಿಸಿದ್ದ ಆರೋಪ ದಾಖಲಿಸಲಾಗಿತ್ತು. ಈ ಸಂಬಂಧ ಗಂಭೀರ್ ಅವರೂ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ಅದರ ವಿಚಾರಣೆಗೆ ನಿರಂತರವಾಗಿ ಗೈರು ಹಾಜರಾಗಿರುವ ಕಾರಣ ಅವರಿಗೆ ವಾರಂಟ್ ನೀಡಲಾಗಿದೆ.
ಗೌತಮ್ ಗಂಭೀರ್ ಅವರು 2019ರ ಜನವರಿ 24ರಂದು ನ್ಯಾಯಾಯದ ಮುಂದೆ ಹಾಜರಾಗಬೇಕಿದೆ.
ರುದ್ರ ಸಮೂಹ ಸಂಸ್ಥೆಯು ಗಾಜಿಯಾಬಾದ್ನ ಇಂದಿರಾಪುರಂ ಪ್ರದೇಶದಲ್ಲಿ ಫ್ಲಾಟ್ ನಿರ್ಮಾಣ ಯೋಜನೆಗಾಗಿ 2011ರಲ್ಲಿ ಖರೀದಿ ಆಸಕ್ತರಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಸಿಕೊಂಡಿತ್ತು. ಆದರೆ, ಆ ಯೋಜನೆಯೇ ಆರಂಭವಾಗಿರಲಿಲ್ಲ. ವಂಚನೆಗೆ ಒಳಗಾದ ಜನರು ಕಂಪೆನಿ ವಿರುದ್ಧ ದೂರು ನೀಡಿದ್ದರು. ಅದರಲ್ಲಿ ಬ್ರಾಂಡ್ ಅಂಬಾಸೆಡರ್ ಆಗಿದ್ದ ಗಂಭೀರ್ ಹೆಸರನ್ನೂ ಉಲ್ಲೇಖಿಸಿದ್ದರು.
ಗೌತಮ್ ಗಂಭೀರ್ ಅವರು ರುದ್ರ ಬಿಲ್ಡ್ ವೆಲ್ ರಿಯಾಲಿಟಿ ಕಂಪೆನಿಯ ಬ್ರಾಂಡ್ ಅಂಬಾಸೆಡರ್ ಆಗಿದ್ದರ ಜೊತೆಗೆ ನಿರ್ದೇಶಕರೂ ಆಗಿದ್ದರು. ಮನೆ ನಿರ್ಮಾಣ ಯೋಜನೆ ಹೆಸರಿನಡಿ ಫ್ಲಾಟ್ ಬುಕಿಂಗ್ಗಾಗಿ ಹಣ ಪಡೆದು ಜನರನ್ನು ವಂಚಿಸಿದ ಆರೋಪದಲ್ಲಿ 2016ರಲ್ಲಿ ಕಂಪೆನಿ ವಿರುದ್ಧ ದೂರು ದಾಖಲಿಸಲಾಗಿತ್ತು.