ಬಾಂಗ್ಲಾದೇಶ ಹಾಗೂ ಭಾರತದ ನಡುವಣ ರಾಜಕೀಯ ಬಿಕ್ಕಟ್ಟು ಮುಂದುವರೆದಿದೆ. ಇಂಡಿಯನ್ ಪ್ರೀಮಿಯರ್ ಲಿಗ್ನಿಂದ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರಹಮಾನ್ ಅವರನ್ನು ಕೈ ಬಿಟ್ಟಬೆನ್ನಲ್ಲೆ, ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರಕ್ಕೆ ಅಲ್ಲಿನ ಸರ್ಕಾರ ನಿಷೇಧ ಹೇರಿದೆ. ಮುಸ್ತಾಫಿಜುರ್ ರಹಮಾನ್ ಅವರನ್ನು ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 9.2 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು. ಅಲ್ಲದೆ ದೇಶದಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇವರನ್ನು ಐಪಿಎಲ್ನಲ್ಲಿಂದ ಕೈ ಬಿಡುವಂತೆ ಕೆಕೆಆರ್ ತಂಡಕ್ಕೆ ಬಿಸಿಸಿಐ ಸೂಚನೆಯನ್ನು ನೀಡಿದೆ.
ಜನವರಿ 5 (ಸೋಮವಾರ) ಹೊರಡಿಸಲಾದ ಅಧಿಕೃತ ಹೇಳಿಕೆಯಲ್ಲಿ, ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರ, ಪ್ರಚಾರ ಕಾರ್ಯಕ್ರಮಗಳ ವರದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದ್ದು, ಮುಂದಿನ ಆದೇಶ ಬರುವವರೆಗೂ ಹಾಗೆಯೇ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರವನ್ನು ಕೈ ಗೊಳ್ಳಲಾಗಿದೆ ಎಂದು ತಿಳಿಸಿದೆ.

19ನೇ ಆವೃತ್ತಿ ಆರಂಭಕ್ಕೂ ಮುನ್ನವೇ ಕೆಕೆಆರ್ ತಂಡದಿಂದ ಮುಸ್ತಾಫಿಜುರ್ ರಹಮಾನ್ ಅವರನ್ನು ತಂಡದಿಂದ ಕೈ ಬಿಟ್ಟ ಬಳಿಕ, ಐಪಿಎಲ್ ನೇರ ಪ್ರಸಾರಕ್ಕೆ ಬಾಂಗ್ಲಾದೇಶ ನಿಷೇಧ ಹೇರಿದೆ. ಈ ನಿಲುವನ್ನು ತೆಗೆದುಕೊಳ್ಳಲು ಯಾವುದೇ ಕಾರಣವಿಲ್ಲ. ಬದಲಿಗೆ ಬಿಸಿಸಿಐಗೆ ಸೂಚನೆ ನೀಡಲೆಂದು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಐಪಿಎಲ್ ಪ್ರಸಾರಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಎಲ್ಲಾ ಐಪಿಎಲ್ ಪಂದ್ಯಗಳು ಮತ್ತು ಸಂಬಂಧಿತ ಕಾರ್ಯಕ್ರಮಗಳ ಪ್ರಸಾರವನ್ನು ತಕ್ಷಣವೇ ನಿಲ್ಲಿಸುವಂತೆ ಸಚಿವಾಲಯವು ಎಲ್ಲಾ ದೂರದರ್ಶನ ಚಾನೆಲ್ಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರ್ಕಾರವು ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳ ನೇರ ಪ್ರಸಾರವನ್ನು ನಿಷೇಧಿಸಲು ನಿರ್ಧರಿಸಿತು.
ಬಾಂಗ್ಲಾದೇಶ 2026 ಐಪಿಎಲ್ ನೇರ ಪ್ರಸಾರಕ್ಕೆ ನಿಷೇಧ ಹೇರಿದೆ. ಇದಕ್ಕೂ ಮೊದಲು ಪಾಕಿಸ್ತಾನದಲ್ಲೂ ಐಪಿಎಲ್ ನೇರಪ್ರಸಾರವನ್ನು ನಿಷೇಧಿಸಲಾಗಿತ್ತು. 2019ರಲ್ಲಿ ಅಂದಿನ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿತ್ತು. ಆಗ ಪಾಕ್ನಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇನ್ನು ಪುಲ್ವಾಮ್ನಲ್ಲಿ 40 ಸಿಆರ್ಪಿಎಫ್ ಸೈನಿಕರನ್ನು ಉಗ್ರರು ಬಲಿತೆಗೆದುಕೊಂಡ ಬಳಿಕ ಭಾರತದಲ್ಲೂ ಪಾಕಿಸ್ತಾನ ಸೂಪರ್ ಲೀಗ್ ನೇರ ಪ್ರಸಾರಕ್ಕೆ ಬ್ರೇಕ್ ಬಿದ್ದಿತ್ತು.
ಮುಸ್ತಾಫಿಜುರ್ ರಹಮಾನ್ ಅವರನ್ನು ಕೆಕೆಆರ್ ತಂಡದಿಂದ ಕೈ ಬಿಡುತ್ತಿದ್ದಂತೆ, ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಸಹ ದೊಡ್ಡ ನಿರ್ಧಾರವನ್ನು ಕೈ ಗೊಂಡಿದೆ. ಮುಂಬರುವ ಟಿ20 ವಿಶ್ವಕಪ್ನಲ್ಲಿ ಭಾರತ ಪ್ರವಾಸವನ್ನು ಬೆಳೆಸಲು ಬಾಂಗ್ಲಾದೇಶ ನಿರಾಕರಿಸಿದೆ. ಅಲ್ಲದೆ ಈ ಬಗ್ಗೆ ಈಗಾಗಲೇ ಬಾಂಗ್ಲಾದೇಶ, ಐಸಿಸಿಗೆ ಮನವಿಯನ್ನು ಮಾಡಿಕೊಂಡಿದ್ದು, ತಮ್ಮ ಎಲ್ಲ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲು ಅನುಮತಿ ಕೇಳಿದೆ. ಒಂದು ವೇಳೆ ಈ ನಿರ್ಧಾರಕ್ಕೆ ಐಸಿಸಿ ಸಮ್ಮತಿ ಸೂಚಿಸಿದ್ದೇ ಆದಲ್ಲಿ ಶ್ರೀಲಂಕಾದಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ತಮ್ಮ ಪಂದ್ಯಗಳನ್ನು ಆಡಲಿವೆ.