ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಆಟಗಾರರ ಹಿತರಕ್ಷಣಾ ಸಮಿತಿ (ಸಿಡಬ್ಲ್ಯೂಎಬಿ) ನಡುವೆ ಗುರುವಾರ ತಡ ರಾತ್ರಿ ನಡೆದ ಸಭೆ ಸುಖಾಂತ್ಯ ಕಂಡಿದೆ. ಬಾಂಗ್ಲಾ ಕ್ರಿಕೆಟ್ ಆಟಗಾರರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ನಿಲ್ಲಿಸಿದ್ದಾರೆ. ಈ ಸುದ್ದಿ ನಿಜಕ್ಕೂ ಬಾಂಗ್ಲಾದೇಶದಲ್ಲಿದ್ದ ಸ್ಥಳೀಯ ಆಟಗಾರರಿಗೆ ಖುಷಿಯನ್ನು ತಂದಿದೆ.
ಆಟಗಾರರು ಮಂಡಳಿಯ ಮುಂದೆ ಒಟ್ಟು 13 ಬೇಡಿಕೆಗಳನ್ನು ಇಟ್ಟಿದ್ದರು. ಈ ಬೇಡಿಕೆಗಳಲ್ಲಿ ಪ್ರಮುಖವಾಗಿ ವೇತನ ಹೆಚ್ಚಳವೂ ಸೇರಿತ್ತು. ಅಲ್ಲದೆ ದೇಶೀಯ ಕ್ರಿಕೆಟ್ನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಆಟಗಾರರ ಹಿತ ರಕ್ಷಣೆಗೆ ಸಂಬಂಧಿಸಿದ ಅಂಶಗಳು ಸಹ ಸೇರಿದ್ದವು. ಗುರುವಾರ ತಡ ರಾತ್ರಿ ನಡೆದ ಸಭೆಯಲ್ಲಿ ಬಿಸಿಬಿ ನಿರ್ದೇಶಕ ಇಫ್ತಿಕರ್ ರೆಹಮಾನ್ ಅವರೊಂದಿಗೆ ಕುಳಿತಿದ್ದ ಸಿಡಬ್ಲ್ಯೂಎಬಿ ಅಧ್ಯಕ್ಷ ಮೊಹಮ್ಮದ್ ಮಿಥುನ್ ಮಾತುಕತೆ ನಡೆಸಿದರು. ಈ ವೇಳೆ ಶುಕ್ರವಾರದಿಂದ ಬಾಂಗ್ಲಾ ಪ್ರೀಮಿಯರ್ ಲೀಗ್ ಆರಂಭಿಸುವ ನಿರ್ಧಾರಕ್ಕೆ ಬರಲಾಗಿದೆ.

ಗುರುವಾರ ಸಂಜೆ ವೇಳೆ, ಸಿಡಬ್ಲ್ಯೂಎಬಿ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿತ್ತು. ಈ ವೇಲೆ ನಜ್ಮುಲ್ ಅವರ ಅಮಾನತು ಮುಖ್ಯ ಷರತ್ತು ಎಂದು ತಿಳಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಬಿಸಿಬಿ ನಜ್ಮುಲ್ ಅವರನ್ನು ಹಣಕಾಸು ಸಮಿತಿಯ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿತ್ತು. ಪ್ರತಿಭಟನಾ ನಿರತ ಆಟಗಾರರು ಮಂಡಳಿಯ ಈ ನಿಲುವನ್ನು ಸ್ವಾಗತಿಸಿದ್ದು, ಸಾರ್ವಜನಿಕ ಕ್ಷಮೆಯಾಚನೆಗೂ ಪಟ್ಟು ಹಿಡಿದಿದ್ದಾರೆ. ಅಲ್ಲದೆ ಆಟಗಾರರ ಗೌರವಕ್ಕೆ ಧಕ್ಕೆ ತರುವಂತಹ ವರ್ತನೆಗಳನ್ನು ಮಂಡಳಿ ನಿಯಂತ್ರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
ಬಿಸಿಬಿ ನಿರ್ದೇಶಕ ನಜ್ಮುಲ್ ಇಸ್ಲಾಂ ಅವರು ಹಿರಿಯ ಆಟಗಾರರ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಗಳಿಂದಾಗಿ ಈ ಬಿಕ್ಕಟ್ಟು ಹುಟ್ಟಿಕೊಂಡಿತು. ತಮೀಮ್ ಇಕ್ಬಾಲ್ ಎರಡು ಕ್ರಿಕೆಟ್ ಮಂಡಳಿಗಳು ಟಿ 20 ವಿಶ್ವಕಪ್ ಸ್ಥಳದ ಬಗ್ಗೆ ಮಾತುಕತೆ ನಡೆಸಬೇಕೆಂದು ಸೂಚಿಸಿದ್ದರು. ಇದಕ್ಕೆ ನಜ್ಮುಲ್ ಇಸ್ಲಾಂ ಅವರು ತಮೀಮ್ ಅವರನ್ನು ಭಾರತದ ಏಜೆಂಟ್ ಎಂದಿದ್ದರು. ನಜ್ಮುಲ್ ಟಿ20 ವಿಶ್ವಕಪ್ಗೆ ಸಂಬಂಧಿಸಿದಂತೆ ಆಟಗಾರರ ಹಿತಾಸಕ್ತಿಗೆ ವಿರುದ್ಧವಾಗಿ ಮಾತನಾಡಿದ್ದು ಆಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು.
ಐಪಿಎಲ್ 2026ರ ಮಿನಿ ಹರಾಜಿನಲ್ಲಿ ಕೆಕೆಆರ್ ಖರೀದಿಸಿದ್ದ ಮುಸ್ತಫಿಜುರ್ ರಹಮಾನ್ ಅವರನ್ನು ಬಿಸಿಸಿಐ ಕೈ ಬಿಡುವಂತೆ ಸೂಚಿಸಿತ್ತು. ಇದಾದ ಬಳಿಕ ಐಪಿಎಲ್ನಿಂದ ಮುಸ್ತಾಫಿಜುರ್ ಅವರನ್ನು ಬಿಡುಗಡೆ ಮಾಡಿದ್ದು ಉಲ್ಬಣಗೊಂಡಿತು. ಇನ್ನು ಮುಂದೆ ನಜ್ಮುಲ್ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ದೇಶದ ಆಟಗಾರರು ಆಡದೇ ಇದ್ದರೆ ಆಟಗಾರರಿಗೆ ಯಾವುದೇ ಪರಿಹಾರವನ್ನು ನೀಡುವುದಿಲ್ಲ ಎಂದು ಸೂಚಿಸಿದ್ದರು. ನಜ್ಮುಲ್ ಹೇಳಿಕೆಯಿಂದ ಆಟಗಾರರು ಕೋಪಗೊಂಡು, ಕ್ರಿಕೆಟ್ ಬಹಿಷ್ಕರಿಸುವುದಾಗಿ ತಿಳಿಸಿದರು. ನಜ್ಮುಲ್ ಇಸ್ಲಾಂ ಅವರನ್ನು ಮಂಡಳಿಯಿಂದ ತೆಗೆದುಹಾಕಬೇಕೆಂದು ಆಟಗಾರರು ಒತ್ತಾಯಿಸಿದರು.