
ನವದೆಹಲಿ, ನವೆಂಬರ್ 1: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಆತಂಕಕಾರಿ ರೀತಿಯಲ್ಲಿ ಹಾಳಾಗಿರುವುದರಿಂದ ಟಿ20ಐ ಸರಣಿಯ ಅಭ್ಯಾಸದ ವೇಳೆ ಪ್ರವಾಸಿ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ಮಾಸ್ಕ್ ಧರಿಸಿಕೊಂಡೇ ಮೈದಾನಕ್ಕಿಳಿದ ದೃಶ್ಯ ಶುಕ್ರವಾರ (ನವೆಂಬರ್ 1) ಕಾಣ ಸಿಕ್ಕಿತು.
ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರ ರೀತಿಯಲ್ಲಿ ಹದಗೆಟ್ಟಿದೆ. ಮಂಜು ಕವಿದಂತೆ ಮಬ್ಬಾಗಿ ಬದಲಾಗಿರುವ ದೆಹಲಿ ವಾತಾವರಣ ನೋಡಿ ಅಂಜಿಕೊಂಡಿರುವ ಬಾಂಗ್ಲಾ ಆಟಗಾರರು ಮುನ್ನೆಚ್ಚರಿಕೆಯಾಗಿ ಮಾಸ್ಕ್ನ ಮೊರೆ ಹೋಗಿದ್ದಾರೆ. ಅಭ್ಯಾಸದ ವೇಳೆ 3 ಆಟಗಾರರು ಮತ್ತು ಒಬ್ಬರು ಬೆಂಬಲ ಸಿಬ್ಬಂದಿ ಮಾಸ್ಕ್ ಧರಿಸಿದ್ದು ಕಂಡುಬಂತು.
ಗುರುವಾರದ (ಅಕ್ಟೋಬರ್ 31) ಅಭ್ಯಾದ ವೇಳೆ ಬಾಂಗ್ಲಾ ಮುಖ್ಯ ಕೋಚ್ ರಸೆಲ್ ಡೊಮಿಂಗೊ ಮತ್ತು ಇನ್ನು ಕೆಲ ಆಟಗಾರರು ತಮಗೆ ಉಸಿರಾಟದ ತೊಂದರೆಯಾಗುತ್ತಿರುವುದಾಗಿ ದೂರಿತ್ತಿದ್ದರು. ಹೀಗಾಗಿ ಬಾಂಗ್ಲಾದೇಶ ಮ್ಯನೇಜ್ಮೆಂಟ್ ತಂಡಕ್ಕೆ ಹೆಚ್ಚು ಮಾಸ್ಕ್ಗಳನ್ನು ನೀಡಲು ವ್ಯವಸ್ಥೆ ಮಾಡುತ್ತಿದೆ.
ಗುರುವಾರ ಲಿಟನ್ ದಾಸ್ ಒಬ್ಬರೇ ಮಾಸ್ಕ್ ಧರಿಸಿ ಮೈದಾನಕ್ಕಿಳಿದಿದ್ದರು. ಶುಕ್ರವಾರ ಒಟ್ಟು 3 ಜನ ಕ್ರಿಕೆಟಿಗರು ಮಾಸ್ಕ್ ನೊಂದಿಗೆ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದಾರೆ. ಮಾಸ್ಕ್ ವಿಚಾರದಲ್ಲಿ ಪ್ರತಿಕ್ರಿಯಿಸಿರುವ ಬಾಂಗ್ಲಾ ಕ್ರಿಕೆಟ್ ಬೋರ್ಡ್ (ಬಿಸಿಬಿ), 'ಮಾಸ್ಕ್ ಧರಿಸೋದು ಬಿಡೋದು ಆಯಾ ಆಟಗಾರರಿಗೆ ಬಿಟ್ಟಿದ್ದು,' ಎಂದಿದೆ.