ಟಿ20 ವಿಶ್ವಕಪ್ 2026ರ ಟೂರ್ನಿಯಿಂದ ಬಾಂಗ್ಲಾದೇಶ ಹೊರ ನಡೆದಿದೆ. ಐಸಿಸಿ ಈ ಬಗ್ಗೆ ಶನಿವಾರ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಈಗ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಸಹ ದೊಡ್ಡ ಹೇಳಿಕೆಯನ್ನು ನೀಡಿದೆ. ಬಾಂಗ್ಲಾ ಭಾರತ ಪ್ರವಾಸ ಬೆಳೆಸದಿರಲು ನಿರ್ಧರಿಸಿದ್ದು, ಸರ್ಕಾರದ ನಿಲುವಾಗಿತ್ತು. ಬಿಸಿಬಿ ನಿಲುವಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅಲ್ಲದೆ ಬಿಸಿಬಿ ಐಸಿಸಿ ಟಿ20 ವಿಶ್ವಕಪ್ನಲ್ಲಿ ಆಡಲು ಬಯಸಿತ್ತು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡ ಬಾಂಗ್ಲಾದೇಶ ಸರ್ಕಾರ ತನ್ನ ತಂಡವನ್ನು ಭಾರತಕ್ಕೆ ಪ್ರಯಾಣಿಸಲು ಅವಕಾಶ ನೀಡಲಿಲ್ಲ. ಅಲ್ಲದೆ ಸರ್ಕಾರವೇ ಪಂದ್ಯದ ಸ್ಥಳವನ್ನು ಭಾರತದಿಂದ ಬೇರೆ ಕಡೆಗೆ ನಡೆಸಲು ಮನವಿಯನ್ನು ಮಾಡಿತ್ತು. ಇದೇ ಮನವಿಯನ್ನು ನಾವು ಐಸಿಸಿ ಮುಂದೆ ಇಟ್ಟಿದ್ದೆವು. ಆದರೆ ಐಸಿಸಿ ಭಾರತದಲ್ಲಿ ಯಾವುದೇ ಭದ್ರತಾ ಸಮಸ್ಯೆಗಳು ಇಲ್ಲ ಎಂದು ಸ್ಪಷ್ಟ ಪಡಿಸಿತ್ತು. ಐಸಿಸಿ ನಿರ್ಧಾರ ಸರ್ಕಾರಕ್ಕೆ ತೃಪ್ತಿ ತಂದಿಲ್ಲ ಎಂದು ಬಿಸಿಬಿ ತಿಳಿಸಿದೆ. ಜನವರಿ 22 ರಂದು ಟೂರ್ನಿಯಿಂದ ಹೊರ ನಡೆಯುವ ಬಗ್ಗೆ ಬಾಂಗ್ಲಾ ತಿಳಿಸಿತ್ತು. ಐಸಿಸಿ ಶನಿವಾರ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟಿದ್ದು ಸ್ಕಾಟ್ಲೆಂಡ್ಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ.

ಬಾಂಗ್ಲಾದೇಶ ಸರ್ಕಾರ ಭಾರತದಲ್ಲಿ ತಮ್ಮ ತಂಡ ಆಡುವುದು ಸುರಕ್ಷಿತವಲ್ಲ ಎಂಬ ನಿರ್ಧಾರವನ್ನು ಕೈಗೊಂಡಿತ್ತು ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧ್ಯಕ್ಷ ಅಮ್ಜದ್ ಹೊಸೇನ್ ತಿಳಿಸಿದ್ದಾರೆ. ಅಲ್ಲದೆ ಸರ್ಕಾರದ ನಿಲುವಿನಿಂತೆ ನಾವು ಸಹ ಐಸಿಸಿ ಮುಂದೆ ನಮ್ಮ ನಿಲುವನ್ನು ಇಟ್ಟಿದ್ದೆವು. ಆದರೆ ಐಸಿಸಿ ನಮ್ಮ ಮನವಿಗೆ ಸ್ಪಂದಿಸಿಲ್ಲ. ಹೀಗಾಗಿ ನಮಗೂ ಬೇರೆ ದಾರಿ ಇರಲಿಲ್ಲ. ಸರ್ಕಾರ ಭದ್ರತಾ ಕಾರಣಗಳಿಂದ ಪ್ರವಾಸ ಬೆಳೆಸದಿರಲು ನಿರ್ಧರಿಸಿದೆ ಎಂದು ಬಿಸಿಬಿ ಅಧ್ಯಕ್ಷರು ತಿಳಿಸಿದ್ದಾರೆ.
"ನಾವು ಸಹ ನಮ್ಮ ನಿರ್ಧಾರವನ್ನು ಸರ್ಕಾರದ ಮುಂದೆ ಇಟ್ಟಿದ್ದೇವು. ಸರ್ಕಾರ ಕ್ಯಾಬಿನೆಟ್ ಸಭೆಯನ್ನು ನಡೆಸಿದ ಬಳಿಕ ತನ್ನ ನಿಲುವನ್ನು ಪ್ರಕಟಿಸಿದೆ. ಪರಿಸ್ಥಿತಿಗಳು ಬದಲಾಗದ ಹಿನ್ನೆಲೆ ಬಾಂಗ್ಲಾದೇಶ ಟಿ20 ವಿಶ್ವಕಪ್ನಲ್ಲಿ ಭಾಗವಹಿಸುತ್ತಿಲ್ಲ ಎಂದು ಸರ್ಕಾರ ತಿಳಿಸಿದೆ. ನಾವು ಸಹ ಐಸಿಸಿ ನಿರ್ಧಾರವನ್ನು ಒಪ್ಪುತ್ತೇವೆ" ಎಂದು ಬಿಸಿಬಿ ಅಧ್ಯಕ್ಷ ಅಮ್ಜದ್ ಹೊಸೇನ್ ಹೇಳಿದ್ದಾರೆ.
ಬಿಸಿಬಿ ಟಿ20 ವಿಶ್ವಕಪ್ನಲ್ಲಿ ಆಡುವ ಆಸೆಯನ್ನು ಹೊಂದಿತ್ತು. ಆದರೆ ಸರ್ಕಾರದ ನಿರ್ಧಾರವನ್ನು ನಾವು ಗೌರವಿಸಿದ್ದೇವೆ ಎಂದು ಅಮ್ಜದ್ ಹೊಸೇನ್ ತಿಳಿಸಿದ್ದಾರೆ. ನಾನು ವೈಫಲ್ಯ ಎಂದು ಕರೆಯುವುದಿಲ್ಲ; ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದರೆ ಸರ್ಕಾರ ತನ್ನ ನಿರ್ಧಾರವನ್ನು ತೆಗೆದುಕೊಂಡಿತು ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜಿನಲ್ಲಿ ಬಾಂಗ್ಲಾದೇಶದ ಬೌಲರ್ ಮುಸ್ತಾಫಿಜುರ್ ರಹಮಾನ್ ಅವರನ್ನು 9.2 ಕೋಟಿ ರೂ. ನೀಡಿ ಖರೀದಿಸಿತ್ತು. ಆಗ ಕೆಕೆಆರ್ ತಂಡಕ್ಕೆ ಸ್ಥಳೀಯ ನಾಯಕರಿಂದ ಬೆದರಿಕೆ ಕರೆಗಳು ಬಂದಿದ್ದವು ಎಂದು ಹೇಳಲಾಗುತ್ತಿದೆ. ಆ ನಂತರ ಬಿಸಿಸಿಐ ಸೂಚನೆಯ ಮೇರೆಗೆ ಕೆಕೆಆರ್ ಮುಸ್ತಾಫಿಜುರ್ ಅವರನ್ನು ತಂಡದಿಂದ ಕೈ ಬಿಟ್ಟಿತು. ಅಲ್ಲದೆ ಅವರ ಬದಲಿಗೆ ಬೇರೆ ಆಟಗಾರ ಖರೀದಿಗೆ ಅವಕಾಶವನ್ನು ಕಲ್ಪಿಸುವುದಾಗಿ ತಿಳಿಸಿತ್ತು. ಮುಸ್ತಾಫಿಜುರ್ ರಹಮಾನ್ ಅವರನ್ನು ಐಪಿಎಲ್ನಿಂದ ಹೊರಗಿಡುತ್ತಿದ್ದಂತೆ ಬಾಂಗ್ಲಾದೇಶ ಸಹ ಐಪಿಎಲ್ ನೇರಪ್ರಸಾರಕ್ಕೆ ಬ್ರೇಕ್ ಹಾಕಿತು. ಅಲ್ಲದೆ ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡಿ ಟಿ20 ವಿಶ್ವಕಪ್ನಲ್ಲಿ ಆಡದಿರಲು ನಿರ್ಧರಿಸಿತ್ತು. ಅಲ್ಲದೆ ಐಸಿಸಿ ಮುಂದೆ ಹಲವು ಬಾರಿ ಸ್ಥಳ ಬದಲಾವಣೆಯ ಬೇಡಿಕೆಯನ್ನು ಸಹ ಇಟ್ಟಿತ್ತು.