ಕ್ರಿಕೆಟ್ ಮೈದಾನದಿಂದ ಆಗಾಗ ವಿಚಿತ್ರ ಸುದ್ದಿಗಳು ಹೊರಬೀಳುತ್ತಿರುತ್ತವೆ. ಆದರೆ ಕ್ರಿಕೆಟ್ ಮೈದಾನದ ಹೊರಗಿನ ಘಟನೆಗಳು ಕೂಡ ಎಲ್ಲರನ್ನೂ ಅಚ್ಚರಿಗೊಳಿಸುತ್ತವೆ. ಅಂತಹದೇ ಒಂದು ಘಟನೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್)ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಬಿಪಿಎಲ್ ಭ್ರಷ್ಟಾಚಾರ ಮತ್ತು ಫಿಕ್ಸಿಂಗ್ನಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ಬಿಪಿಎಲ್ ಟೂರ್ನಿಯ ದರ್ಬಾರ್ ರಾಜಶಾಹಿ ತಂಡದ ಆಟಗಾರರು ತಮ್ಮ ಸಂಬಳವನ್ನು ಪಡೆಯುತ್ತಿಲ್ಲ. ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಕೇವಲ ಆಟಗಾರರು ಮಾತ್ರವಲ್ಲದೆ, ಬಸ್ ಚಾಲಕನಿಗೂ ಸಂಬಳ ಕೈ ಸೇರಿಲ್ಲ.ದರ್ಬಾರ್ ರಾಜಶಾಹಿ ತಂಡದ ಆಟಗಾರರನ್ನು ಕರೆದುಕೊಂಡು ಹೋಗುವ ಬಸ್ ಚಾಲಕ ತನ್ನ ಸಂಬಳವನ್ನು ಬಹಳ ದಿನಗಳಿಂದ ಪಡೆದಿಲ್ಲ. ಇದರಿಂದ ಬೇಸತ್ತ ಚಾಲಕ ಆಟಗಾರರ ಕಿಟ್ ಬ್ಯಾಗ್ ಹಾಗೂ ವೈಯಕ್ತಿಕ ವಸ್ತುಗಳನ್ನು ಬಸ್ ನಲ್ಲಿ ಲಾಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ವರದಿಯ ಪ್ರಕಾರ, ಮೊಹಮ್ಮದ್ ಬಬೂಲ್ ಎಂಬ ಬಸ್ ಚಾಲಕ ದರ್ಬಾರ್ ರಾಜಶಾಹಿ ತಂಡಕ್ಕೆ ಸೇರಿದವರು. ಅವರು ಬಹುದಿನಗಳಿಂದ ಸಂಬಳವನ್ನು ಪಡೆದಿಲ್ಲ. ಪ್ರತಿದಿನ ಆಟಗಾರರನನ್ನು ನಿಗದಿಪಡಿಸಿದ ಸ್ಥಳಗಳಿಗೆ ತಲುಪಿಸಬೇಕಾಗಿತ್ತು. ಸಂಬಳ ಕೇಳಿದಾಗ ಫ್ರಾಂಚೈಸಿ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಇದರಿಂದ ಸಿಟ್ಟಿಗೆದ್ದ ಬಸ್ ಡ್ರೈವರ್ ತಕ್ಕ ಪಾಠ ಕಲಿಸಲು ಮುಂದಾಗಿದ್ದಾನೆ. ಆಟಗಾರರು ತಮ್ಮ ಕಿಟ್ ಗಳನ್ನು ಬಸ್ನ ಲಗೇಜ್ ಬಾಕ್ಸ್ನಲ್ಲಿ ಹಾಕಿದ ಡ್ರೈವರ್ ಲಾಕ್ ಮಾಡಿದ್ದಾನೆ. ಹೊಟೇಲ್ ಬಂದಾಗ ಆಟಗಾರನ್ನು ಕೆಳಗಿಳಿಸಿದ್ದಾನೆ. ಇದಾದ ನಂತರ ನನ್ನ ಬಾಕಿ ಸಂಬಳವನ್ನು ಪಾವತಿ ಮಾಡುವವರೆಗೂ ಒಂದು ಕಿಟ್ ಕೊಡುವುದಿಲ್ಲ ಎಂದು ಪಟ್ಟು ಹಿಡಿದ್ದಾನೆ. ಈ ವೇಳೆ ತನಗಾಗಿರುವ ಅನ್ಯಾಯದ ಬಗ್ಗೆ ಮೊಹಮ್ಮದ್ ಬಬೂಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾನೆ.
ಸ್ಥಳೀಯ ಮತ್ತು ವಿದೇಶಿ ಆಟಗಾರರೆಲ್ಲರ ಕಿಟ್ಗಳೂ ಬಸ್ನ ಒಳಗಿವೆ. ಆದರೆ ನನಗೆ ಬಾಕಿ ಉಳಿಸಿಕೊಂಡಿರುವ ಸಂಬಳವನ್ನು ನೀಡದಿದ್ದರೆ ನಾನು ಯಾವುದೇ ಕಾರಣಕ್ಕೂ ಕಿಟ್ಗಳನ್ನು ವಾಪಸ್ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ. ಈ ವಿಷಯದಿಂದ ಇಡೀ ಕ್ರಿಕೆಟ್ ಜಗತ್ತು ಬೆಚ್ಚಿಬಿದ್ದಿದೆ. ಏಕೆಂದರೆ ಚಾಲಕರು ಆಟಗಾರರ ಕಿಟ್ ಬ್ಯಾಗ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಇಂತಹ ಪ್ರಕರಣಗಳು ಅಪರೂಪ. ಇಂತಹ ಪರಿಸ್ಥಿತಿಯಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತದೆಯೋ? ಕಾದು ನೋಡಬೇಕಾಗಿದೆ.