ಪಾಕಿಸ್ತಾನದ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿರುವ ಬಾಂಗ್ಲಾದೇಶ, ಸರಣಿ ಗೆಲುವಿನ ಹುಮ್ಮಸ್ಸಿನಲ್ಲಿದೆ. ಪಾಕ್ ತಂಡದ ವಿರುದ್ಧ ಬಾಂಗ್ಲಾ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಈಗ ಬಾಂಗ್ಲಾ ಭಾರತದಲ್ಲಿ ಸರಣಿ ಆಡಲು ಪ್ರಯಾಣ ಬೆಳೆಸಿದೆ. ಈ ನಡುವೆ ಬಾಂಗ್ಲಾದೇಶಕ್ಕೆ ಒಂದು ಚಿಂತೆ ಬಹುವಾಗಿ ಕಾಡುತ್ತಿದೆ.
ಪಾಕಿಸ್ತಾನ ವಿರುದ್ಧ ಬಾಂಗ್ಲಾ ತಂಡ ಸಂಘಟಿತ ಆಟವನ್ನು ಪ್ರದರ್ಶಿಸಿತ್ತು. ಬ್ಯಾಟರ್ ಹಾಗೂ ಬೌಲರ್ಗಳು ವಿಶೇಷ ಕಾಣಿಕೆ ನೀಡಿ ಜಯದಲ್ಲಿ ಮಿಂಚಿದ್ದರು. ಈ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಟಗಾರರ ಪೈಕಿ ಲಿಟನ್ ದಾಸ್ಗೂ ಸ್ಥಾನ ಲಭಿಸಿದೆ. ಇವರು ಪಾಕ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಅಲ್ಲದೆ 138 ರನ್ಗಳ ಬಿಗ್ ಇನಿಂಗ್ಸ್ ಕಟ್ಟಿ ತಂಡಕ್ಕೆ ನೆರವಾಗಿದ್ದರು. ಇದರಿಂದ ಬಾಂಗ್ಲಾ ಆಟಗಾರರ ಮನೋಬಲ ಹೆಚ್ಚಿದೆ.

ಭಾರತದಲ್ಲಿ ಸೆಪ್ಟೆಂಬರ್ 19 ರಿಂದ ಟೆಸ್ಟ್ ಪಂದ್ಯ ಆರಂಭವಾಗಲಿದೆ. ಈ ಸರಣಿಗೂ ಮುನ್ನ ಬಾಂಗ್ಲಾ ಆಟಗಾರರಿಗೆ ಒಂದು ಟೆನ್ಷನ್ ಶುರುವಾಗಿದೆ. ಬಾಂಗ್ಲಾದೇಶ ಬ್ಯಾಟ್ಸ್ಮನ್ ಲಿಟನ್ ದಾಸ್ ಭಾರತದಲ್ಲಿ ಚೆಂಡು ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದರು.
ಎಸ್ಜಿ ಚೆಂಡನ್ನು ಆಡುವುದು ಸ್ವಲ್ಪ ಕಷ್ಟ. ಕೂಕಬುರ್ರಾ ಚೆಂಡು ಹಳೆಯದಾಗುತ್ತಿದ್ದಂತೆ, ಆಡಲು ಸುಲಭವಾಗುತ್ತದೆ. ಅದಕ್ಕಿಂತ ಉತ್ತಮವಾದದ್ದು ಯಾವುದೂ ಇಲ್ಲ. ಭಾರತದಲ್ಲಿನ ಟೆಸ್ಟ್ನಲ್ಲಿ ಬೇರೆ ಚೆಂಡು ಇದ್ದಿರುವುದು ಒತ್ತಡ ಎಂದು ನಾವು ಭಾವಿಸುವುದಿಲ್ಲ ಎಂದಿದ್ದಾರೆ.
ಭಾರತದ ಬೌಲರ್ಗಳಿಗೆ ಕಾಡಲು ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟನ್ ದಾಸ್ ಮತ್ತು ಯುವ ಆಟಗಾರ ಶಾದ್ಮನ್ ಇಸ್ಲಾಂ ಸಜ್ಜಾಗಿದ್ದಾರೆ. ಪಾಕ್, ಶ್ರೀಲಂಕಾ, ಬಾಂಗ್ಲಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾದಲ್ಲಿ ಸಾಮಾನ್ಯವಾಗಿ ಕೂಕಬುರಾ ಚೆಂಡು ಬಳಸುತ್ತಾರೆ. ಎಸ್ಜಿ ಚೆಂಡು ರಿವರ್ಸ್ ಸ್ವಿಂಗ್ ಮಾಡಲು ಸಹಾಯ ಮಾಡುತ್ತದೆ. ಇದು ಬಾಂಗ್ಲಾ ಬ್ಯಾಟರ್ಗಳಿಗೆ ಚಿಂತೆಯನ್ನು ಹೆಚ್ಚಿಸಿದೆ.

ಈಗಾಗಲೇ ಬಾಂಗ್ಲಾ ಪರ 223 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮೂರು ಫಾರ್ಮೆಟ್ನಲ್ಲಿ ಆಡಿರುವ ಅನುಭವ ಹೊಂದಿರುವ ಲಿಟನ್ ದಾಸ್, ಜವಾಬ್ದಾರಿ ಹೊರಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಒಂದು ದಶಕದಿಂದ ಬಾಂಗ್ಲಾ ಪರ ಆಡುತ್ತಿದ್ದು, ಅನುಭವ ಇದೆ. ಆದ್ದರಿಂದ ನಾನು ಕೊಂಚ ಕ್ರೀಸ್ನಲ್ಲಿ ನಿಂತು ಆಡುವ ಕಲೆಯನ್ನು ಕಲಿತಿದ್ದೇನೆ. ಇಲ್ಲಿ ರನ್ಗಳಿಸುವುದು ಮುಖ್ಯ. ಸಾಮಾನ್ಯ ಬ್ಯಾಟರ್ಗಳು ಮಾಡಿದ ರೀತಿಯಲ್ಲೇ ನಾನು ಸಹ ಭಾರತದಲ್ಲಿ ಬ್ಯಾಟ್ ಮಾಡುವೆ ಎಂದಿದ್ದಾರೆ. ಲಿಟನ್ ದಾಸ್ ಬಾಂಗ್ಲಾ ಮಧ್ಯಮ ಕ್ರಮಾಂಕದ ಆಧಾರ ಸ್ತಂಭ ಎನ್ನುವುದರಲ್ಲಿ ಎರಡು ಮಾತಿಲ್ಲ.