ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ತಾನು ಭಾಗವಹಿಸದಿರಲು ಬಾಂಗ್ಲಾದೇಶ ನಿರ್ಧರಿಸಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಗುರುವಾರ ತನ್ನ ನಿರ್ಧಾರವನ್ನು ಪ್ರಕಟಿಸಿದ್ದು, ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ಗೆ ತಾನು ಪ್ರಯಾಣ ಬೆಳೆಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದಕ್ಕೂ ಮೊದಲು ಬಿಸಿಬಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಡುವಣ ಬುಧವಾರ ಸಾಲು ಸಾಲು ಸಭೆಗಳು ನಡೆದಿದ್ದವು. ಈ ವೇಳೆ ಐಸಿಸಿ, ಬಾಂಗ್ಲಾದೇಶಕ್ಕೆ ನಿರ್ಧಾರವನ್ನು ತೆಗೆದುಕೊಳ್ಳಲು 24 ಗಂಟೆಗಳ ಗಡುವು ನೀಡಿತ್ತು. 2026ರ ಟಿ20 ವಿಶ್ವಕಪ್ ಫೆಬ್ರವರಿ 7 ರಿಂದ ಆರಂಭವಾಗಲಿದೆ.
ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶ ಭಾಗವಹಿಸುತ್ತದೆಯೋ ಇಲ್ಲವೋ ಎಂಬ ಬಗ್ಗೆ ತನ್ನ ಅಂತಿಮ ನಿರ್ಧಾರವನ್ನು ಗುರುವಾರ ತಿಳಿಸುವಂತೆ ಐಸಿಸಿ ತಿಳಿಸಿತ್ತು. ಬುಧವಾರ ನಡೆದ ಸಭೆಯಲ್ಲಿ ಬಾಂಗ್ಲಾದೇಶ ಹಲವು ಬೇಡಿಕೆಗಳನ್ನು ಇಟ್ಟು ಟಿ20 ವಿಶ್ವಕಪ್ನಲ್ಲಿ ಆಡುವ ಆಸೆಯನ್ನು ಹೊಂದಿತ್ತು. ಆದರೆ ಇದಕ್ಕೆಲ್ಲಾ ಸೊಪ್ಪು ಹಾಕದ ಐಸಿಸಿ ಟಿ20 ವಿಶ್ವಕಪ್ ಆಡುವುದಿದ್ದರೆ ಭಾರತದಲ್ಲಿ ಆಡಿ, ಇಲ್ಲದಿದ್ದರೆ ಟೂರ್ನಿಯಿಂದ ಹೊರ ನಡೆಯಿರಿ ಎಂದು ಸ್ಪಷ್ಟ ಪಡಿಸಿತ್ತು. ಅದರಂತೆ ಬಾಂಗ್ಲಾದೇಶ ಈಗ ತನ್ನ ನಿರ್ಧಾರವನ್ನು ಪ್ರಕಟಿಸಿದೆ.

ಬುಧವಾರ ನಡೆದ ಐಸಿಸಿ ಹಾಗೂ ಬಿಸಿಬಿ ಸಭೆಯಲ್ಲಿ ಬಾಂಗ್ಲಾದೇಶ ಭಾರತಕ್ಕೆ ಪ್ರವಾಸ ಬೆಳೆಸಬೇಕೋ ಬೇಡವೋ ಎಂಬ ಬಗ್ಗೆ ಮತದಾನ ನಡೆಯಿತು. ಈ ವೇಳೆ ಸಭೆಯಲ್ಲಿ ಒಟ್ಟು 16 ಸದಸ್ಯರು ಭಾಗವಹಿಸಿದ್ದರು. ಈ ವೇಳೆ 16 ಸದಸ್ಯರು ಬಾಂಗ್ಲಾದೇಶ ವಿರುದ್ಧ ಮತ ಚಲಾಯಿಸಿದರು. ಇನ್ನು 2 ಮತಗಳು ಬಾಂಗ್ಲಾ ಪರವಾಗಿ ಬಿದ್ದವು. ಇದರಲ್ಲಿ ಒಂದು ಮತ ಬಾಂಗ್ಲಾದೇಶದ್ದಾಗಿದ್ದರೆ, ಇನ್ನೊಂದು ಮತ ಪಾಕಿಸ್ತಾನ ಚಲಾಯಿಸಿದೆ ಎಂದು ಅಂದಾಜಿಸಲಾಗಿದೆ.
ಬುಧವಾರ ನಡೆದ ಸಭೆಯಲ್ಲಿ ಬಾಂಗ್ಲಾದೇಶ ಐಸಿಸಿ ಮುಂದೆ ತನ್ನನ್ನು ಬೇರೆ ಗುಂಪಿಗೆ ಶಿಫ್ಟ್ ಮಾಡುವಂತೆ ಬೇಡಿಕೆ ಇಟ್ಟಿತ್ತು. ಬಾಂಗ್ಲಾದೇಶ ಸಿ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಇದೇ ವೇಳೆ ತಮ್ಮ ತಂಡವನ್ನು ಬಿ ಗುಂಪಿಗೆ ವರ್ಗಾಯಿಸುವಂತೆ ಬೇಡಿಕೆ ಇಟ್ಟಿತ್ತು. ಇದಕ್ಕೆಲ್ಲಾ ಸೊಪ್ಪು ಹಾಕದ ಐಸಿಸಿ ತಾನು ಈ ಮೊದಲೇ ಪ್ರಕಟಿಸಿದ ವೇಳಾ ಪಟ್ಟಿಗೆ ಬದ್ಧವಾಗಿದೆ ಎಂದು ತಿಳಿಸಿತ್ತು. ಇನ್ನು ಬಾಂಗ್ಲಾದೇಶ ಭಾರತದಲ್ಲಿ ಭದ್ರತಾ ಕಾರಣಗಳನ್ನು ನೀಡಿ ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಸಹ ಕೇಳಿಕೊಂಡಿತ್ತು. ಇದಕ್ಕೂ ಸಹ ಐಸಿಸಿ ಒಪ್ಪಲಿಲ್ಲ. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ದೊಡ್ಡ ನಿರ್ಧಾರವನ್ನು ಕೈಗೊಂಡಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರಗಳು ನಡೆಯುತ್ತಿದ್ದಾಗ, ಹಲವು ಸಂಘಟನೆಗಳು ಐಪಿಎಲ್ನಿಂದ ಬಾಂಗ್ಲಾದೇಶ ಆಟಗಾರರನ್ನು ಬ್ಯಾನ್ ಮಾಡುವಂತೆ ಬೇಡಿಕೆ ಇಟ್ಟಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಬಿಸಿಸಿಐ, ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 9.2 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿದ್ದ ಮುಸ್ತಾಫಿಜುರ್ ರಹಮಾನ್ ಅವರನ್ನು ತಂಡದಿಂದ ಕೈ ಬಿಡುವಂತೆ ಸೂಚಿಸಿತ್ತು. ಅಲ್ಲದೆ ಅವರ ಬದಲಿಗೆ ಬೇರೆ ಆಟಗಾರರನ್ನು ಸಹ ತಂಡಕ್ಕೆ ಸೇರಿಸಿಕೊಳ್ಳುವ ಅವಕಾಶವನ್ನು ನೀಡಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೆ ಬಾಂಗ್ಲಾದೇಶ ಸಹ ಐಪಿಎಲ್ನ ಪಂದ್ಯಗಳ ನೇರ ಪ್ರಸಾರಕ್ಕೆ ಬ್ರೇಕ್ ಹಾಕಿತ್ತು.