
ಕೋಲ್ಕತ್ತ, ಅಕ್ಟೋಬರ್ 22: ಬಾಂಗ್ಲಾದೇಶದ ಕ್ರಿಕೆಟರ್ಗಳು ಪ್ರತಿಭಟನೆಯಲ್ಲಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ಗೆ (ಬಿಸಿಬಿ) ಸಂಬಂಧಿಸಿ ನಾವು ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಾಂಗ್ಲಾ ಕ್ರಿಕೆಟಿಗರು ಮುಷ್ಕರ ಕೂತಿದ್ದಾರೆ. ಹೀಗಾಗಿ ಭಾರತಕ್ಕೆ ಬಾಂಗ್ಲಾ ಪ್ರವಾಸ ಸರಣಿ ಅನುಮಾನವೆಂಬಂತಿದೆ.
ಆದರೆ ಬಿಸಿಸಿಐಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ಬಾಂಗ್ಲಾ ಕ್ರಿಕೆಟ್ ತಂಡ ಭಾರತಕ್ಕೆ ಪ್ರವಾಸ ಕೈಗೊಳ್ಳಲಿದೆ. ಅಲ್ಲಿ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಿಕೊಂಡು ಬಾಂಗ್ಲಾ ತಂಡ ಭಾರತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಗಂಗೂಲಿ, 'ಇದು ಅವರ ಆಂತರಿಕ ಸಮಸ್ಯೆ. ಸಮಸ್ಯೆಯನ್ನು ಪರಿಹರಿಸಿಕೊಂಡು ಬಾಂಗ್ಲಾ ತಂಡ ಇಲ್ಲಿಗೆ ಬರಲಿದೆ,' ಎಂದು ನಕ್ಕರು. ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಬಾಂಗ್ಲಾ, ನವೆಂಬರ್ 3ರಿಂದ 3 ಟಿ20, 2 ಟೆಸ್ಟ್ ಪಂದ್ಯಗಳನ್ನಾಡುವುದರಲ್ಲಿತ್ತು.
ವೇತನ ಹೆಚ್ಚಳ, ಫ್ರಾಂಚೈಸಿ ಕ್ರಿಕೆಟ್ ಆಡಲು ಅನುಮತಿ ಸೇರಿದಂತೆ ಇನ್ನಿತರ ಸವಲತ್ತುಗಳನ್ನು ನೀಡುವಂತೆ ಬಾಂಗ್ಲಾ ಕ್ರಿಕೆಟಿಗರು ಒಟ್ಟು 11 ಅಂಶಗಳ ಬೇಡಿಕೆಯನ್ನು ಮುಂದಿಟ್ಟು ಮುಷ್ಕರ ನಡೆಸುತ್ತಿದ್ದಾರೆ. ಆಲ್ ರೌಂಡರ್ ಶಕೀಬ್ ಅಲ್ ಹಸನ್, ಮೊಹಮ್ಮದುಲ್ಲ, ಮುಷ್ಫಿಕರ್ ರಹೀಮ್ನಂತ ಆಟಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.