ಭಾರತ ತಂಡದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿನೋದ್ ಕಾಂಬ್ಳಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಶನಿವಾರ ಮಹಾರಾಷ್ಟ್ರದ ಥಾಣೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ವೈದ್ಯರ ತಂಡ ಚಿಕಿತ್ಸೆ ನೀಡಿದ್ದು, ಕಾಂಬ್ಳಿ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ. ಭಾರತ ಮಾತ್ರವಲ್ಲದೆ ಇತರ ದೇಶಗಳಲ್ಲೂ ಕಾಂಬ್ಳಿ ಬೇಗ ಚೇತರಿಸಿಕೊಳ್ಳಲು ಜನರು ಪ್ರಾರ್ಥಿಸುತ್ತಿದ್ದಾರೆ. ಇದರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್ ಅಲಿ ಕೂಡ ಸೇರಿದ್ದಾರೆ.
ಪಾಕಿಸ್ತಾನ ಮಾಜಿ ಬ್ಯಾಟರ್ ಬಸಿತ್ ಅಲಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ವಿನೋದ್ ಕಾಂಬ್ಳಿ ಅವರನ್ನು ವಿಡಿಯೋ ಕಾಲ್ ಮಾಡುವ ಮೂಲಕ ವಿಚಾರಿಸಿದ್ದಾರೆ. ಬಾಸಿತ್ ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಕಾಂಬ್ಳಿ ಅವರನ್ನು ಸಂಪರ್ಕಿಸಿ ಆರೋಗ್ಯದ ಬಗ್ಗೆ ಮಾತನಾಡಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಕಾಂಬ್ಳಿ ಶೀಘ್ರವಾಗಿ ಚೇತರಿಸಿಕೊಳ್ಳಲು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.

ಇಂದು ನಾನು ವಿನೋದ್ ಅವರೊಂದಿಗೆ ವೀಡಿಯೊ ಕಾಲ್ ಮೂಲಕ ಮಾತನಾಡಿದ್ದು, ಅವರು ಆರೋಗ್ಯವಾಗಿದ್ದಾರೆ. ನಾನು ಹಿಂತಿರುಗುತ್ತೇನೆ ಎಂಬ ದೊಡ್ಡ ಭರವಸೆ ಇದೆ ಎಂದು ಕಾಂಬ್ಳಿ ಹೇಳಿದ್ದಾರೆ. ಹೀಗಾಗಿ ಬಸಿತ್ ಅವರು ತಮ್ಮ ಅಭಿಮಾನಿಗಳನ್ನು ಕಾಂಬ್ಳಿ ಚೇತರಿಸಿಕೊಳ್ಳಲು ಪ್ರಾರ್ಥಿಸುವಂತೆ ಕೇಳಿಕೊಂಡಿದ್ದಾರೆ. ನಿಮ್ಮ ಪ್ರಾರ್ಥನೆಯಲ್ಲಿ ಕಾಂಬ್ಳಿ ಅವರನ್ನು ಸ್ಮರಿಸಬೇಕೆಂದು ಮತ್ತೊಮ್ಮೆ ವಿನಂತಿಸುತ್ತೇವೆ ಎಂದು ಬಸಿತ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಕಾಂಬ್ಳಿ, ನಾನು ಬೇಗ ಚೇತರಿಸಿಕೊಳ್ಳುವುದಾಗಿ ಭರವಸೆಯಿದೆ. ನಾನು ಕ್ರಿಕೆಟ್ ಬಿಡುವುದಿಲ್ಲ, ಏಕೆಂದರೆ ನಾನು ಎಷ್ಟು ಶತಕ ಮತ್ತು ದ್ವಿಶತಕಗಳನ್ನು ಬಾರಿಸಿದ್ದೇನೆ ಎಂದು ನೆನಪಿಸಿಕೊಳ್ಳುತ್ತೇನೆ. ಸಚಿನ್ ತೆಂಡೂಲ್ಕರ್ ಯಾವಾಗಲೂ ನನ್ನೊಂದಿಗಿರುವ ಕಾರಣ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ.
ಥಾಣೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ವಿನೋದ್ ಕಾಂಬ್ಳಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಎಲ್ಲ ವೆಚ್ಚವನ್ನು ಆಸ್ಪತ್ರೆಯ ಆಡಳಿತ ಮಂಡಳಿ ತೆಗೆದುಕೊಳ್ಳದಿರಲು ನಿರ್ಧರಿಸಿದೆ. ಅಂದರೆ ವಿನೋದ್ ಕಾಂಬ್ಳಿ ಅವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಣೆ ಮಾಡಿದೆ. ದೀರ್ಘಕಾಲದಿಂದ ವಿಪರಿತ ಮದ್ಯಪಾನ ಸೇವನೆ ಮಾಡಿರುವುದು ಇಂದು ಕಾಂಬ್ಳಿ ಆರೋಗ್ಯ ಸಮಸ್ಯೆಗಳೊಂದಿಗೆ ಹೋರಾಡುವುದಕ್ಕೆ ಕಾರಣವಾಗಿದೆ.
ವಿನೋದ್ ಕಾಂಬ್ಳಿ ಪ್ರಜ್ಞಾಹೀನಾ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ನಂತರ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಬೆಳಕಿಗೆ ಬಂದಿತ್ತು. ಇದನ್ನು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ವಿವೇಕ್ ತ್ರಿವೇದಿ ಮಾಹಿತಿ ನೀಡಿದ್ದರು. 'ವಿನೋದ್ ಕಾಂಬ್ಳಿ ಅವರು ಆರಂಭದಲ್ಲಿ ಮೂತ್ರದ ಸೋಂಕು ಮತ್ತು ಸೆಳೆತದ ಬಗ್ಗೆ ಹೇಳಿಕೊಂಡಿದ್ದರು. ಬಳಿಕ ಅವರನ್ನು ಶನಿವಾರ ಭಿವಂಡಿ ನಗರದ ಕಲ್ಹೇರ್ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯಕೀಯ ತಂಡವು ಹಲವಾರು ಪರೀಕ್ಷೆಗಳ ನಂತರ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಪತ್ತೆ ಹಚ್ಚಿರುವುದಾಗಿ ತ್ರಿವೇದಿ ಹೇಳಿದ್ದರು.