ಏಷ್ಯಾ ಕಪ್ ಸೋಲಿಗೆ ಕಾರಣ ತಿಳಿಸಿದ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್

ಟಿ20 ವಿಶ್ವಕಪ್ಗೂ ಮುನ್ನ ನಡೆದ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಈ ಬಾರಿ ನೀರಸ ಪ್ರದರ್ಶನ ನೀಡುವ ಮೂಲಕ ಸೋಲು ಅನುಭವಿಸಿತ್ತು. ಅದಾದ ಬಳಿಕ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಸೋಲು ಅನುಭವಿಸಿತಾದರೂ ಬಳಿಕ ಭಾರತ ತಂಡ ಸರಣಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಮಾತನಾಡಿದ್ದು ಏಷ್ಯಾ ಕಪ್ನಲ್ಲಿ ಭಾರತ ತಂಡ ಸೋಲು ಅನುಭವಿಸಲು ಕಾರಣವಾದ ಅಂಶವನ್ನು ಹೇಳಿಕೊಂಡಿದ್ದಾರೆ.
ಭಾರತ ಕಳೆದ ಆರು ಪಂದ್ಯಗಳಲ್ಲಿ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಸೋತಿರುವ ಮೂರು ಪಂದ್ಯಗಳು ಕೂಡ ರನ್ ರಕ್ಷಣೆ ಮಾಡುವ ಸಂದರ್ಭದಲ್ಲಿ ಬಂದಿದೆ ಎಂಬುದು ಗಮನಾರ್ಹ. ಅಂದರೆ ಭಾರತ ತಂಡ ಮೊದಲಿಗೆ ಬ್ಯಾಟಿಂಗ್ ನಡೆಸಿ ಅದನ್ನು ರಕ್ಷಣೆ ಮಾಡಲು ತಂಡಕ್ಕೆ ಸಾಧ್ಯವಾಗಿಲ್ಲ. ಈ ಮೂರು ಸೋಲುಗಳು ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಬಂದಿದೆ. ಭಾರತದ ಈ ಸೋಲುಗೆ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋರ್ ಕಾರಣ ನೀಡಿದ್ದು ಇಬ್ಬನಿಯ ಕಾರಣದಿಂದಾಗಿ ಭಾರತ ತಂಡ ರನ್ಗಳನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ವಿಕ್ರಂ ರಾಥೋರ್ ಭಾರತ ತಂಡ ರನ್ಗಳನ್ನು ರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಯಾವ ರೀತಿಯಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದು ಎಂಬುದರ ಕುರಿತಾಗಿ ಪರಿಶ್ರಮಿಸುತ್ತಿದ್ದೇವೆ ಎಂದಿದ್ದಾರೆ. "ನಮ್ಮ ಬೌಲರ್ಗಳಿಗೆ ಕೂಡ ನಾವು ನ್ಯಾಯವನ್ನು ಒದಗೊಸಬೇಕಾಗುತ್ತದೆ. ಟಾಸ್ ಇಲ್ಲಿ ಬಹಳ ಪ್ರಮುಖ ಪಾತ್ರವಹಿಸುತ್ತದೆ. ಇಬ್ಬನಿ ಹೆಚ್ಚಾಗಿ ಬೀಳುವ ಕಡೆಗಳಲ್ಲಿಯೇ ನಾವು ಪಂದ್ಯಗಳನ್ನು ಸೋತಿದ್ದೇವೆ" ಎಂದು ದಕ್ಷಿಣ ಆಫ್ರಿಕಾ ವಿರುದ್ಧದ ಟಿಒ20 ಸರಣಿಯ ಆರಂಭಕ್ಕೂ ಮುನ್ನ ವಿಕ್ರಂ ರಾಥೋರ್ ಹೇಳಿಕೆ ನೀಡಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ವಿಕ್ರಂ ರಾಥೋರ್ ಟೀಮ್ ಇಂಡಿಯಾದ ಬೌಲರ್ಗಳ ಬಗ್ಗೆ ಕಠಿಣವಾಗಿರಲು ತನ್ನಿಂದ ಸಾಧ್ಯವಿಲ್ಲ ಎಂದಿದ್ದಾರೆ. ಭಾರತದ ಬೌಲಿಂಗ್ ವಿಭಾಗ ಇಂಥಾ ಸಂದರ್ಭದಲ್ಲಿಯೂ ಪಂದ್ಯವನ್ನು ಅಂತಿಮ ಹಂತದವರೆಗೆ ತಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. "ಬೌಲರ್ಗಳ ವಿಚಾರವಾಗಿ ನಾವು ನಿರ್ದಯವಾಗಿರಲು ಸಾಧ್ಯವಿಲ್ಲ ಯಾಕೆಂದರೆ ಅವರು ಪಂದ್ಯವನ್ನು ಕಡೇಯ ಹಂತದವರೆಗೆ ತಂದಿಟ್ಟಿದ್ದಾರೆ. ಒಂದೊಂದು ಎಸೆತಗಳು ಅಂದುಕೊಂಡಂತೆ ಬಾರದ ಹಿನ್ನಲೆಯಲ್ಲಿ ಸೋಲು ಕಾಣುವಂತಾಯಿತು. ಹಾಗಿದ್ದರೂ ನಾವು ಉತ್ತಮವಾಗಿ ಆಡಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನಮ್ಮಿಂದ ಬರುವ ನಿರೀಕ್ಷೆಯಿದೆ" ಎಂದಿದ್ದಾರೆ ವಿಕ್ರಂ ರಾಥೋರ್.
ಇನ್ನು ಸದ್ಯ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಸಜ್ಜಾಗಿದೆ. ತಿರುವನಂತಪುರಂನಲ್ಲಿ ಈ ಸರಣಿಯ ಮೊದಲ ಪಂದ್ಯ ನಡೆಯಲಿದ್ದು ಬುಧವಾರ ಈ ಪಂದ್ಯ ಆಯೋಜನೆಯಾಗಲಿದೆ. ಟಿ20 ವಿಶ್ವಕಪ್ಗೆ ಮುನ್ನ ಭಾರತ ತಂಡ ಆಡಲಿರುವ ಅಂತಿಮ ಟಿ20 ಸರಣಿಯ ದ್ವಿಪಕ್ಷೀಯ ಸರಣಿಯಾಗಿದೆ. ಈ ಮೂಲಕ ಮಹತ್ವದ ಟೂರ್ನಿಗೆ ಅಂತಿಮ ಹಂತದ ಸಿದ್ಧತೆಯನ್ನು ಭಾರತ ತಂಡ ಮಾಡಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications