ಐಪಿಎಲ್ ಹೀರೋಗಳಿಗೆ ಅವಕಾಶ
ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಮೂವರು ಪ್ರತಿಭಾನ್ವಿತ ಆಟಗಾರರು ಈ ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂವರು ಆಟಗಾರರು ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾದ ಕರೆಯನ್ನು ಸ್ವೀಕರಿಸಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಆರ್ಸಿಬಿ ತಂಡದಲ್ಲಿದ್ದ ವೇಗಿ ಹರ್ಷಲ್ ಪಟೇಲ್, ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಅಮೋಘ ಪ್ರದರ್ಶನ ನೀಡಿದ ವೆಂಕಟೇಶ್ ಐಯ್ಯರ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬೌಲಿಂಗ್ ಅಸ್ತ್ರವಾಗಿದ್ದ ಆವೇಶ್ ಖಾನ್ ಐಪಿಎಲ್ನಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕೆ ತಕ್ಕ ಉಡುಗೊರೆ ಪಡೆದಿದ್ದು ಟೀಮ್ ಇಂಡಿಯಾ ಕ್ಯಾಪ್ ತೊಡಲು ಸಿದ್ಧರಾಗಿದ್ದಾರೆ.
ಮರಳಿ ಸ್ಥಾನ ಗಿಟ್ಟಿಸಿಕೊಂಡ ಆಟಗಾರರು
ಇನ್ನು ಈ ಬಾರಿಯ ಟಿ20 ವಿಶ್ವಕಪ್ನ ತಂಡದಲ್ಲಿ ಅವಕಾಶ ಪಡೆಯದೆ ನಿರಾಸೆ ಅನುಭವಿಸಿದ್ದ ಅನುಭವಿ ಆಟಗಾರ ಯುಜುವೇಂದ್ರ ಚಾಹಲ್ ಈ ಸರಣಿಯಲ್ಲಿ ಮರಳಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೊಹಮ್ಮದ್ ಸಿರಾಜ್ ಕೂಡ ಮತ್ತೆ ಟೀಮ್ ಇಂಡಿಯಾ ಟಿ20 ತಂಡದಲ್ಲಿ ಸ್ಥಾನವನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಮೀಸಲು ಆಟಗಾರನಾಗಿ ತೆರಳಿದ್ದ ಶ್ರೇಯಸ್ ಐಯ್ಯರ್ ಕೂಡ ಈ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಮೋಘ ಫಾರ್ಮ್ನಲ್ಲಿರುವ ಋತುರಾಜ್ ಗಾಯಕ್ವಾಡ್ ಶ್ರೀಲಂಕಾ ಪ್ರವಾಸದಲ್ಲಿ ಮೊದಲ ಬಾರಿಗೆ ಅವಕಾಶ ಪಡೆದ ನಂತರ ಮತ್ತೊಮ್ಮೆ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ.
ನ್ಯೂಜಿಲೆಂಡ್ ಸರಣಿಗೆ ಆಯ್ಕೆಯಾದ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್
ರಾಹುಲ್ ದ್ರಾವಿಡ್- ರೋಹಿತ್ ಶರ್ಮಾ ಯುಗಾರಂಭ
ವಿರಾಟ್ ಕೊಹ್ಲಿ ನಾಯಕನಾಗಿ ಹಾಗೂ ರವಿ ಶಾಸ್ತ್ರಿ ಕೋಚ್ ಆಗಿ ಟೀಮ್ ಇಂಡಿಯಾ ಅದ್ಭುತ ಸಾಧನೆಗಳನ್ನು ಮಾಡಿದೆ. ಟಿ20 ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದಿದ್ದು ಆ ಜವಾಬ್ಧಾರಿ ರೋಹಿತ್ ಶರ್ಮಾ ಹೆಗಲಿಗೆ ಬಿದ್ದಿದೆ. ಇದೇ ಸಂದರ್ಭದಲ್ಲಿ ಕೋಚ್ ಆಗಿ ರಾಹುಲ್ ದ್ರಾವಿಡ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ಜೋಡಿಯ ಮೇಲೆಯೂ ಕೂಡ ಈಗ ಭಾರೀ ನಿರೀಕ್ಷೆಯಿದೆ. ಈಗಾಗಲೇ ನಾಯಕನಾಗಿ ತನ್ನ ಸಾಮರ್ಥ್ಯವನ್ನು ರೋಹಿತ್ ಶರ್ಮಾ ಪ್ರದರ್ಶಿಸಿದ್ದು ರಾಹುಲ್ ದ್ರಾವಿಡ್ ಕೂಡ ಅಂಡರ್ 19, ಭಾರತ ಎ ಹಾಗೂ ಕಳೆದ ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡದ ಕೋಚ್ ಆಗಿ ಅದ್ಭುತವಾದ ಅನುಭವಗಳನ್ನು ಪಡೆದುಕೊಂಡಿದ್ದಾರೆ.