

ನವದೆಹಲಿ, ಜನವರಿ 8: ಸುಮಾರು 71 ವರ್ಷಗಳ ಬಳಿಕ ಆಸ್ಟ್ರೇಲಿಯಾ ನೆಲದಲ್ಲಿ ಆತಿಥೇಯರ ವಿರುದ್ಧ ಟೆಸ್ಟ್ ಸರಣಿ ಜಯಿಸಿ ಹೊಸ ಮೈಲಿಗಲ್ಲು ಸ್ಥಾಪಿಸಿರುವ ಭಾರತ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಅಭಿನಂದನೆ ಸಲ್ಲಿಸಿದೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಬಿಸಿಸಿಐ ದೇಸಿ ತಂಡಕ್ಕೆ ದೊಡ್ಡ ಮೊತ್ತದ ನಗದು ಪುರಸ್ಕಾರ ಘೋಷಿಸಿ ಪ್ರೋತ್ಸಾಹ ಸೂಚಿಸಿದೆ.
ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ, ಜಸ್ಪ್ರೀತ್ ಬೂಮ್ರಾ ಅದ್ಭುತ ಆಟ ಆಸೀಸ್ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಗೆಲ್ಲುವಲ್ಲಿ ಪ್ರಮುಖವೆನಿಸಿತ್ತು. 2-1 ಸರಣಿ ಜಯದೊಂದಿಗೆ ಭಾರತ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಜಯಿಸಿತ್ತು.
ಟೆಸ್ಟ್ ಸರಣಿಗಾಗಿ ಪ್ರಕಟಿತ ತಂಡದಲ್ಲಿ ಆಡುವ 11 ಆಟಗಾರರಲ್ಲಿ ಹೆಸರಿಸಿದ್ದವರಿಗೆ ಪ್ರತಿಯೊಬ್ಬರಂತೆ ಪ್ರತೀ ಪಂದ್ಯಕ್ಕೆ 15 ಲಕ್ಷ ರೂ., ಮೀಸಲು ಆಟಗಾರರಿಗೆ 7.5 ಲಕ್ಷ ರೂ. ನಗದನ್ನು ಬಿಸಿಸಿಐ ಘೋಷಿಸಿದೆ. ಜೊತೆಗೆ ತರಬೇತುದಾರರು 25 ಲಕ್ಷ ರೂ. ಪಡೆಯಲಿದ್ದಾರೆ. ಸಪೋರ್ಟ್ ಸ್ಟಾಫ್ಗೂ ಕೂಡ ವೃತ್ತಪರ ಶುಲ್ಕ ದೊರೆಯಲಿದೆ.
ಐತಿಹಾಸಿಕ ಟೆಸ್ಟ್ ಸರಣಿ ಜಯದಿಂದ ಭಾರತ, ಅಪರೂಪದ ಸಾಧನೆ ತೋರಿದ ಏಷ್ಯಾದ ಮೊದಲ ತಂಡವಾಗಿ ಗುರುತಿಸಿಕೊಂಡಿತ್ತು. ಜೊತೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ನಮ್ಮದು ವಿಶ್ವದಲ್ಲೇ ನಂ.1 ತಂಡವೆಂಬುದನ್ನು ಟೀಮ್ ಇಂಡಿಯಾ ಲೋಕಕ್ಕೆ ಮತ್ತೊಮ್ಮೆ ಕೂಗಿ ಹೇಳಿತ್ತು.