
ನವದೆಹಲಿ, ಜನವರಿ 22: ಆಸ್ಟ್ರೇಲಿಯಾದಲ್ಲಿ ಆತಿಥೇಯರ ವಿರುದ್ಧ ನಡೆದ ಏಕದಿನ ಸರಣಿಯನ್ನು ಭಾರತ 2-1 ಜಯಿಸಿತ್ತು. ಈ ಜಯದೊಂದಿಗೆ ಭಾರತ ಆಸ್ಟ್ರೇಲಿಯಾದಲ್ಲಿ ಚೊಚ್ಚಲ ದ್ವಿಪಕ್ಷೀಯ ಏಕದಿನ ಸರಣಿ ಗೆಲುವಿನ ಮೈಲಿಗಲ್ಲು ಸ್ಥಾಪಿಸಿತ್ತು. ಈ ಖುಷಿಗೆ ಬಿಸಿಸಿಐ ಭಾರತ ಕ್ರಿಕೆಟ್ ಆಯ್ಕೆ ಸಮಿತಿ ಸದಸ್ಯತಿಗೆ ನಗದು ಪುರಸ್ಕಾರ ಘೋಷಿಸಿದೆ.
ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಆಯ್ಕೆ ಸಮಿತಿಯಲ್ಲಿ ಒಟ್ಟು 5 ಜನ ಸದಸ್ಯರಿದ್ದಾರೆ. ಪ್ರತಿ ಸದಸ್ಯರಿಗೂ ಬಿಸಿಸಿಐ ಸರಣಿ ಗೆಲುವಿಗಾಗಿ 20 ಲಕ್ಷ ರೂ. ಬೋನಸ್ ನೀಡಲಿದೆ. ಆಸ್ಟ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಖುಷಿಯೂ ಇದೇ ಬೋನಸ್ ಕೊಡುಗೆಯಲ್ಲಿ ಸೇರಿದೆ.
ಭಾರತ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಅವರನ್ನು ಸೇರಿಸಿ ದೇವಾಂಗ್ ಗಾಂಧಿ, ಜತಿನ್ ಪರಂಜ್ಪೆ, ಗಗನ್ ಘೋಡಾ ಮತ್ತು ಸಂದೀಪ್ ಹೀಗೆ ಒಟ್ಟು 5 ಮಂದಿ ಸದ್ಯ ಆಯ್ಕೆ ಸಮಿತಿಯಲ್ಲಿ ಇದ್ದಾರೆ. ಐದೂ ಮಂದಿಗೂ ಬಿಸಿಸಿಐನಿಂದ ಬೋನಸ್ ದೊರೆಯಲಿದೆ.
'ಆಸ್ಟ್ರೇಲಿಯಾ ಪ್ರವಾಸ ಸರಣಿಗೆ ಸಂಬಂಧಿಸಿ ಭಾರತದ ಆಯ್ಕೆ ಸಮಿತಿ ಉತ್ತಮ ಆಟಗಾರರನ್ನು ಆರಿಸುವ ಮೂಲಕ ತಂಡದ ಗೆಲುವಿಗೆ ಕಾರಣವಾಗಿದೆ. ಕೆಲವು ಇಕ್ಕಟ್ಟಿನ ಸಂದರ್ಭಗಳಲ್ಲೂ ಉತ್ತಮ ರೀತಿಯಲ್ಲಿ ಸಮಿತಿ ಆಟಗಾರರ ಆಯ್ಕೆ ನಡೆಸಿತ್ತು. ಇದಕ್ಕಾಗಿ ಬೋನಸ್ ನೀಡುತ್ತಿದ್ದೇವೆ' ಎಂದು ಬಿಸಿಸಿಐ ಪ್ರಕಟನೆಯಲ್ಲಿ ತಿಳಿಸಿದೆ.