ನವದೆಹಲಿ, ಫೆಬ್ರವರಿ 05 : ಭಾರತದಲ್ಲಿ ಮಾರ್ಚ್ 8ರಿಂದ ಏಪ್ರಿಲ್ 3ರವರೆಗೆ ನಡೆಯಲಿರುವ ಟಿ20 ವಿಶ್ವಕಪ್ ಪಂದ್ಯಾವಳಿಗೆ, ಮಹೇಂದ್ರ ಸಿಂಗ್ ಧೋನಿ ನೇತೃತ್ವದ 15 ಆಟಗಾರರಿರುವ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ಮಂಡಳಿ ಶುಕ್ರವಾರ ಪ್ರಕಟಿಸಿದೆ.ಇದೇ ತಂಡ ಬಾಂಗ್ಲಾದೇಶದಲ್ಲಿ ಫೆಬ್ರವರಿ 24 ರಿಂದ ಮಾರ್ಚ್ 6 ರ ತನಕ ನಡೆಯಲಿರುವ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಆಡಲಿದೆ.
[ವಿಶ್ವ ಟ್ವೆಂಟಿ20 ಕ್ರಿಕೆಟ್ ಸಂಪೂರ್ಣ ವೇಳಾಪಟ್ಟಿ]
ಆಯ್ಕೆ ಸಮಿತಿಯ ಅಧ್ಯಕ್ಷ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಭಾರತದ ತಂಡವನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನದ ಸರಣಿಯಲ್ಲಿ ಅತ್ಯದ್ಭುತ ಶತಕ ಗಳಿಸಿ ಭಾರತಕ್ಕೆ ಏಕೈಕ ಜಯ ತಂದುಕೊಟ್ಟಿದ್ದ ಕರ್ನಾಟಕದ ಬ್ಯಾಟ್ಸ್ಮನ್ ಮನೀಶ್ ಪಾಂಡೆ ಅವರನ್ನು ಆಯ್ಕೆ ಮಾಡಲಾಗಿಲ್ಲ.

ಕರ್ನಾಟಕದ ಮನೀಶ್ ಪಾಂಡೆ ಮತ್ತು ಅಂಜಿಕ್ಯಾ ರಹಾನೆ ನಡುವೆ ಯಾರನ್ನು ಆಯ್ಕೆ ಮಾಡಬೇಕೆಂಬ ಸಂದಿಗ್ಧತೆಯಲ್ಲಿ ಆಯ್ಕೆದಾರರಿದ್ದರು. ಆದರೆ, ಕೊನೆಗೆ ಟೆಸ್ಟ್ ಆಟಗಾರ ಮತ್ತು ಹೆಚ್ಚು ಕನ್ಸಿಸ್ಟನ್ಸಿ ಇರುವ ಅಜಿಂಕ್ಯಾ ಅವರನ್ನು ಆಯ್ಕೆ ಮಾಡಲಾಗಿದೆ.
ಎರಡು ವರ್ಷಗಳಿಗೊಮ್ಮೆ ವಿಶ್ವಕಪ್ ಆಯೋಜಿಸಲಾಗುತ್ತಿದ್ದು, ಕಳೆದ ಬಾರಿ 2014ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ಶ್ರೀಲಂಕಾ ವಿರುದ್ಧ ಫೈನಲ್ ನಲ್ಲಿ ಸೋತಿತ್ತು. 2007ರಲ್ಲಿ ನಡೆದಿದ್ದ ಮೊದಲ ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನವನ್ನು ಸದೆಬಡಿದು ಕಪ್ ಎತ್ತಿತ್ತು. [ವಿಶ್ವ ಟಿ20 ಆಡುವ ತಂಡಕ್ಕೆ ಸುನೀಲ್ ಜೋಶಿ ಕೋಚ್!]
ತಂಡ ಇಂತಿದೆ : ಮಹೇಂದ್ರ ಸಿಂಗ್ ಧೋನಿ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (ಉಪನಾಯಕ), ಶಿಖರ್ ಧವನ್, ಅಜಿಂಕ್ಯಾ ರಹಾನೆ, ಸುರೇಶ್ ರೈನಾ, ಯುವರಾಜ್ ಸಿಂಗ್, ಮಹಮ್ಮದ್ ಶಮಿ, ರವೀಂದ್ರ ಜಜೇಜಾ, ರವಿಚಂದ್ರನ್ ಅಶ್ವಿನ್, ಹರ್ಭಜನ್ ಸಿಂಗ್, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಪವನ್ ನೇಗಿ, ಆಶಿಶ್ ನೆಹ್ರಾ. (ಒನ್ಇಂಡಿಯಾ ಸುದ್ದಿ)