ನವದೆಹಲಿ, ಜುಲೈ.09: ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್)ನ ಉಚ್ಚಾಟಿತ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡಕ್ಕೆ 550 ಕೋಟಿ ರೂ. ಪರಿಹಾರ ನೀಡುವಂತೆ ನ್ಯಾ. ಲಹೋಟಿ ಅವರ ಸಮಿತಿ ಸೂಚಿಸಿರುವುದು ಗೊತ್ತಿರಬಹುದು. ಅದರೆ, ಆಟಕ್ಕೂ, ಲೆಕ್ಕಕ್ಕೂ ಇಲ್ಲದ ಕೊಚ್ಚಿ ತಂಡಕ್ಕೆ ಭಾರಿ ಮೊತ್ತದ ಉಡುಗೊರೆ ನೀಡಲು ಬಿಸಿಸಿಐ ಸಿದ್ಧವಿದೆಯೇ? ಎಂಬ ಪ್ರಶ್ನೆ ಎದ್ದಿದೆ.
ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಸಿ. ಲಹೋಟಿ ಅಧ್ಯಕ್ಷತೆಯ ಸಮಿತಿ ಐಪಿಎಲ್ನ ಉಚ್ಚಾಟಿತ ಫ್ರಾಂಚೈಸಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡಕ್ಕೆ 550 ಕೋಟಿ ರೂ. ಪರಿಹಾರ ನೀಡುವಂತೆ ಬಿಸಿಸಿಐಗೆ ಬುಧವಾರ ಆದೇಶ ನೀಡಿತ್ತು. ಸಹಜವಾಗಿ ಬಿಸಿಸಿಐಗೆ ಭಾರಿ ಹಿನ್ನಡೆಯಾಗಿದೆ. ಐಪಿಎಲ್ ಸ್ಥಾಪಕ ಲಲಿತ್ ಮೋದಿ ಕಾಲದ ಕಷ್ಟ ಕೋಟಲೆಗೆ ಈಗ ಬೆಲೆ ತೆರಬೇಕಾದ ಪರಿಸ್ಥಿತಿ ಒದಗಿದೆ.
2011ರಲ್ಲಿ ಕೊಚ್ಚಿ ತಂಡ ನೀಡಿರುವ ಬ್ಯಾಂಕ್ ಖಾತ್ರಿ ಮೊತ್ತವನ್ನು ಬಿಸಿಸಿಐ ವಾಪಸ್ ನೀಡಿರಲಿಲ್ಲ. ಬಿಸಿಸಿಐಯ ಈ ನಿರ್ಧಾರವನ್ನು ಪ್ರಶ್ನಿಸಿ ಕೊಚ್ಚಿ ಫ್ರಾಂಚೈಸಿ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಲಹೋಟಿ ನೇತೃತ್ವದ ನ್ಯಾಯ ಪಂಚಾಯಿತಿ ಸಮಿತಿ ಮೊರೆ ಹೋಗಿದ್ದು, ನ್ಯಾಯ ಸಮಿತಿಯು ಕೊಚ್ಚಿ ತಂಡದ ಪರ ತೀರ್ಪು ನೀಡಿದೆ.
2011ರಲ್ಲಿ ಬಿಸಿಸಿಐ, ಕೊಚ್ಚಿ ತಂಡಕ್ಕೆ ಹೊಸ ಬ್ಯಾಂಕ್ ಖಾತ್ರಿಯನ್ನು ನೀಡುವಂತೆ ಆರು ತಿಂಗಳು ಕಾಲಾವಕಾಶ ನೀಡಿತ್ತು. ಆದರೆ, ಬ್ಯಾಂಕ್ ಖಾತ್ರಿ ನೀಡಲು ಕೊಚ್ಚಿ ತಂಡ ವಿಫಲವಾಗಿತ್ತು. ಬಿಸಿಸಿಐ ತನ್ನೊಂದಿಗೆ ಮಾಡಿಕೊಂಡಿರುವ ಒಪ್ಪಂದದ ಅನ್ವಯ ಐಪಿಎಲ್ ಟೂರ್ನಿಯಿಂದ ಉಚ್ಚಾಟಿಸಿತ್ತು. ಕೊಚ್ಚಿ ತಂಡದ ಆಕ್ಷೇಪದ ನಡುವೆಯೂ 156 ಕೋಟಿ ರೂ. ಬ್ಯಾಂಕ್ ಖಾತೆಯನ್ನು ನಗದೀಕರಿಸಿಕೊಂಡಿತ್ತು. ಹೀಗಾಗಿ ಬಿಸಿಸಿಐ ಬ್ಯಾಂಕ್ ಖಾತ್ರಿ ಮೊತ್ತ ಪಾವತಿಸುವುದು ಅನಿವಾರ್ಯವಾಯಿತು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೌಲ್ಯ ನಿರ್ಧಾರ ಹಾಗೂ ಕೊಚ್ಚಿ ಟಸ್ಕರ್ಸ್ ತಲೆನೋವಿನ ಬಗ್ಗೆ ಕಾನೂನು ಸಲಹೆ ಪಡೆಯಲು ಬಿಸಿಸಿಐ ನಿರ್ಧರಿಸಿದೆ ಎಂದು ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಹೇಳಿದ್ದಾರೆ. ಕಾನೂನು ಸಮರ ಜಾರಿಗೊಳಿಸಿ ಕೊಚ್ಚಿ ಟಸ್ಕರ್ಸ್ ತಂಡದ ಕೈಗೆ ಚುಕ್ಕಾಸು ಸಿಗದಂತೆ ಮಾಡಲು ಬಿಸಿಸಿಐ ಅಧಿಕಾರಿಗಳು ಯೋಜನೆ ಹಾಕುತ್ತಿದ್ದಾರೆ. ಈ ನಡುವೆ ಚಾಂಪಿಯನ್ಸ್ ಲೀಗ್ ಟಿ20 ಬಗ್ಗೆ ಕೂಡಾ ನಿರ್ಧಾರ ಕೈಗೊಳ್ಳಬೇಕಿದೆ.