ಭಾರತೀಯ ಕ್ರಿಕೆಟ್ನ ಬಲಗೈ ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತ ಬೋರಿಯಾ ಮಜುಂದಾರ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಷೇಧ ಹೇರಿ ಪ್ರಕಟಣೆ ಹೊರಡಿಸಿದೆ.
ವೃದ್ಧಿಮಾನ್ ಸಹಾ ಅವರು ಸಂದರ್ಶನ ನೀಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಅವರ ಮೇಲೆ ಪತ್ರಕರ್ತ ಬೋರಿಯಾ ಮಜುಂದಾರ್ ಟೀಕಾಸ್ತ್ರ ಪ್ರಯೋಗಿಸಿದ್ದರು. ಈ ಪ್ರಕರಣದ ತನಿಖೆಗಾಗಿ ಬಿಸಿಸಿಐ 3 ಸದಸ್ಯರ ಸಮಿತಿಯನ್ನು ರಚಿಸಿತ್ತು. ಸಮಿತಿ ನೀಡಿದ ವರದಿ ಆಧಾರದ ಮೇಲೆ ಬೋರಿಯಾ ವಿರುದ್ಧ ಬಿಸಿಸಿಐ ನಿಷೇಧದ ಕ್ರಮ ಜರುಗಿಸಿದೆ.
"ಬೋರಿಯಾರನ್ನು ಸ್ಟೇಡಿಯಂ ಒಳಗೆ ಬಿಡದಂತೆ ಭಾರತೀಯ ಕ್ರಿಕೆಟ್ ಮಂಡಳಿ ಎಲ್ಲಾ ರಾಜ್ಯ ಕ್ರಿಕೆಟ್ ಘಟಕಗಳಿಗೆ ತಿಳಿಸುತ್ತೇವೆ. ತವರಿನ ಪಂದ್ಯಗಳಿಗೆ ಅವರಿಗೆ ಮಾಧ್ಯಮ ಮಾನ್ಯತೆ ನೀಡಲಾಗುವುದಿಲ್ಲ ಮತ್ತು ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ನಾವು ಐಸಿಸಿಗೆ ಪತ್ರ ಬರೆಯುತ್ತೇವೆ. ಅವನೊಂದಿಗೆ ತೊಡಗಿಸಿಕೊಳ್ಳದಂತೆ ಆಟಗಾರರನ್ನು ಮಾನವಿ ಮಾಡಲಾಗುತ್ತದೆ,'' ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಫೆಬ್ರವರಿಯಲ್ಲಿ, ವೃದ್ಧಿಮಾನ್ ಸಹಾ ಅವರು 'ಪತ್ರಕರ್ತ' ಜೊತೆಗಿನ ಚಾಟಿಂಗ್ ಸ್ಕ್ರೀನ್ಶಾಟ್ ಅನ್ನು ಹಂಚಿಕೊಂಡಿದ್ದರು. ಮಜುಂದಾರ್ ಸಹಾರನ್ನು ಹೇಗೆ ಬೆದರಿಸಿದ್ದರು ಎಂಬುದನ್ನು ತೋರಿಸುತ್ತಾ, "ನಾನು ಅವಮಾನಗಳನ್ನು ದಯೆಯಿಂದ ತೆಗೆದುಕೊಳ್ಳುವುದಿಲ್ಲ. ಮತ್ತು ನಾನು ಇದನ್ನು ನೆನಪಿಸಿಕೊಳ್ಳುತ್ತೇನೆ," ಎಂದಿದ್ದರು. ಆದರೆ, ಆ ಸಮಯದಲ್ಲಿ ಪತ್ರಕರ್ತನ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಘಟನೆಯ ನಂತರ, ಭಾರತೀಯ ವಿಕೆಟ್ ಕೀಪರ್ಗೆ ಕ್ರಿಕೆಟ್ ವಲಯದಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. ವರದಿಯ ಪ್ರಕಾರ ರವಿಶಾಸ್ತ್ರಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಮಧ್ಯಪ್ರವೇಶಿಸುವಂತೆ ಕೇಳಿಕೊಂಡಿದ್ದರು. ಭಾರತದ ಕೋಚ್ ರಾಹುಲ್ ದ್ರಾವಿಡ್ ಸಹ ವೃದ್ಧಿಮಾನ್ ಸಹಾಗೆ ಬೆಂಬಲ ವ್ಯಕ್ತಪಡಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಬಿಸಿಸಿಐ ಸಮಿತಿಯ ಮುಂದೆ ಘಟನೆ ಬಗ್ಗೆ ವಿವರಿಸುವ ಸಂದರ್ಭದಲ್ಲಿ ವೃದ್ಧಿಮಾನ್ ಸಹಾ ಅವರು ಪತ್ರಕರ್ತನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಸಮಿತಿಯ ನೇತೃತ್ವವನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ವಹಿಸಿದ್ದರು. ಬಿಸಿಸಿಐ ಖಜಾಂಚಿ, ಅರುಣ್ ಧುಮಾಲ್ ಮತ್ತು ಪ್ರಭತೇಜ್ ಭಾಟಿಯಾ ಅವರು ಕೂಡಾ ಸಮಿತಿಯಲ್ಲಿದ್ದರು.