ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 19ನೇ ಆವೃತ್ತಿಯ ಶನಿವಾರದಿಂದ ಆರಂಭವಾಗಲಿದೆ. ಮಾರ್ಚ್ 28 ರಂದು ನಡೆಯಲಿರುವ ಪಂದ್ಯದಲ್ಲಿ ಆರ್ಸಿಬಿ ಹಾಗೂ ಎಸ್ಆರ್ಎಚ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಸಂಜೆ 7.30ಕ್ಕೆ ಆರಂಭವಾಗಲಿದೆ. ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಮೊದಲಿನಿಂದಲೂ ಸಂಭ್ರಮಾಚರಣೆ ಇರುತ್ತದೆ. ಆದರೆ ಈ ಬಾರಿ ಸಂಪ್ರದಾಯ ಮುಂದುವರಿಯುವುದಿಲ್ಲ.
ಇದಕ್ಕೂ ಮೊದಲು ಐಪಿಎಲ್ ಉದ್ಘಾಟನಾ ಪಂದ್ಯವನ್ನು 2019ರಲ್ಲಿ ರದ್ದುಗೊಳಿಸಲಾಯಿತು. ಆಗ ಪುಲ್ವಾಮ್ ದಾಳಿಯ ನಂತರ ಉದ್ಘಾಟನಾ ಪಂದ್ಯವನ್ನು ರದ್ದುಗೊಳಿಸಲಾಯಿತು. ಆ ಬಳಿಕ ಕೋವಿಡ್ 19 ಸಮಯದಲ್ಲಿ ಈ ಕಾರ್ಯಕ್ರಮಕ್ಕೆ ಬ್ರೇಕ್ ಬಿದ್ದಿತ್ತು. ಆದರೆ ಬಳಿಕ ಸಂಪ್ರದಾಯದಂತೆ ಕಾರ್ಯಕ್ರಮವನ್ನು ಬಿಸಿಸಿಐ ನಡೆಸಿಕೊಂಡು ಬಂದಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತದ ಖ್ಯಾತನಾಮ ಸಂಗೀತಗಾರರು, ನಟರು ಭಾಗವಹಿಸುತ್ತಿದ್ದರು. ಆದರೆ ಈ ಬಾರಿ ಉದ್ಘಾಟನಾ ಪಂದ್ಯ ರದ್ದಾಗಿದೆ.

ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಾರಿಯೂ ಐಪಿಎಲ್ನ ಉದ್ಘಾಟನಾ ಸಮಾರಂಭ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಆದರೆ ಬಿಸಿಸಿಐ ಸಮಾರೋಪ ಸಮಾರಂಭವನ್ನು ಏರ್ಪಡಿಸಲು ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
ಆರ್ಸಿಬಿ ಕಳೆದ ವರ್ಷ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು. ಈ ಸಂಭ್ರಮಾಚಾರಣೆಯನ್ನು ಆರ್ಸಿಬಿ ಅಭಿಮಾನಿಗಳೊಂದಿಗೆ ಆಚರಿಸಲು ನಿರ್ಧರಿಸಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ಸಮಾರಂಭವನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಜನರು ಸಾವನ್ನಪ್ಪಿದ್ದರು. ಆ ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡ 11 ಜನರಿಗೆ ಗೌರವ ಸಲ್ಲಿಸಲು, ಈ ಬಾರಿ ಆರ್ಸಿಬಿ ಆರಂಭಿಕ ಪಂದ್ಯಕ್ಕೂ ಮುನ್ನ ಒಂದು ಕ್ಷಣ ಮೌನ ಆಚರಿಸಲು ನಿರ್ಧರಿಸಿದೆ, ಆದರೆ ಕ್ರೀಡಾಂಗಣದಲ್ಲಿ 11 ಆಸನಗಳು ಅವರ ನೆನಪಿಗಾಗಿ ಶಾಶ್ವತವಾಗಿ ಖಾಲಿ ಬಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಘಟನೆಯಿಂದಾಗಿ, ಈ ಬಾರಿ ಬಿಸಿಸಿಐ ಉದ್ಘಾಟನಾ ಸಮಾರಂಭವನ್ನು ರದ್ದುಗೊಳಿಸಲು ನಿರ್ಧರಿಸಿದೆ.
19ನೇ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಪಂದ್ಯ ಮಾರ್ಚ್ 28 ರಂದು ನಡೆಯಲಿದ್ದು, ಲೀಗ್ ಹಂತದಲ್ಲಿ ಒಟ್ಟು 70 ಪಂದ್ಯಗಳು ನಡೆಯಲಿವೆ. ಈ ಪಂದ್ಯಗಳಿಗೆ ಭಾರತದ 12 ನಗರಗಳು ಆತಿಥ್ಯ ನೀಡಲಿವೆ.
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಉದ್ಘಾಟನಾ ಪಂದ್ಯದಲ್ಲಿ ಕಣಕ್ಕೆ ಇಳಿಯಲಿದೆ. ಮೊದಲ ಪಂದ್ಯದಲ್ಲಿ ಆರ್ಸಿಬಿ, ಎಸ್ಆರ್ಎಚ್ ತಂಡದ ವಿರುದ್ಧ ಕಾದಾಟ ನಡೆಸಲಿದೆ. ಆರ್ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತುವ ಕನಸು ಕಾಣುತ್ತಿದೆ. ಈ ವೇಳೆ ಎಲ್ಲರು ಕಣ್ಣುಗಳು ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿವೆ. ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಸ್ಥಿರ ಪ್ರದರ್ಶನ ಮುಂದುವರೆಸಿ ಮತ್ತಷ್ಟು ದಾಖಲೆಗಳಿಗೆ ತಮ್ಮ ಹೆಸರನ್ನು ನಮೂದಿಸಲು ಸಜ್ಜಾಗಿದ್ದಾರೆ.