ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಆಟಗಾರರ ಕೇಂದ್ರ ಒಪ್ಪಂದದ ಬಗ್ಗೆ ಇನ್ನೇನು ಕೆಲವೇ ದಿನಗಳಲ್ಲಿ ಮಹತ್ವದ ಘೋಷಣೆ ಮಾಡಲಿದೆ. ಈ ವೇಳೆಗೆ ಯಾರಿಗೆಲ್ಲಾ ಈ ಪಟ್ಟಿಯಲ್ಲಿ ಸ್ಥಾನ ಲಭಿಸಲಿದೆ. ಯಾರು ಅವಕಾಶ ವಂಚಿತರಾಗಲಿದ್ದಾರೆ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಇದಕ್ಕೆ ಸಂಬಂಧಿಸಿದಂತೆ ಬರುತ್ತಿರುವ ಸುದ್ದಿಯೊಂದನ್ನು ನಂಬುವುದಾದರೆ, ಈ ಬಾರಿ ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ ಮೂವರು ಹೊಸ ಮುಖಗಳಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಅಲ್ಲದೆ ಐಪಿಎಲ್ನಲ್ಲಿ ಶತಕ ದಾಖಲಿಸಿರುವ ಇಶಾನ್ ಕಿಶನ್ ಈ ಬಾರಿ ಕೇಂದ್ರ ಒಪ್ಪಂದದಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಹೊರ ಬರುತ್ತಿದೆ.
ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಎ+ ಗ್ರೇಡ್ನಲ್ಲಿ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ. ಇವರಿಗೆ ವಾರ್ಷಿಕ 7 ಕೋಟಿ ರೂ ಹಣ ಲಭಿಸಲಿದೆ. ಇವರಿಬ್ಬರೂ ಟಿ20 ಸ್ವರೂಪದಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಇವರಿಗೆ ಯಾವ ಗ್ರೇಡ್ನಲ್ಲಿ ಸ್ಥಾನ ಲಭಿಸುತ್ತದೆ ಎಂಬ ಪ್ರಶ್ನೆಗಳು ಇದ್ದವು. ಈಗ ಈ ಎಲ್ಲ ಪ್ರಶ್ನೆಗಳಿಗೆ ಬಹುತೇಕ ಉತ್ತರ ಲಭಿಸಿದೆ.

ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಗಿರುವ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಮತ್ತೆ ಕೇಂದ್ರ ಒಪ್ಪಂದದ ಅಡಿಯಲ್ಲಿ ಸೇರಿಕೊಳ್ಳುವ ಸಾಧ್ಯತೆ ಇದೆ ಎಂದು ಐಎಎನ್ಎಸ್ ಮೂಲಗಳು ಸ್ಪಷ್ಟ ಪಡಿಸಿವೆ. ಇನ್ನು ಕಳೆದ ವರ್ಷದ ಕೇಂದ್ರ ಒಪ್ಪಂದಿಂದ ಹೊರಗಿಡಲಾಗಿದ್ದ ಶ್ರೇಯಸ್ ಅಯ್ಯರ್ ಮತ್ತೆ ತಮ್ಮ ಕ್ಷಮತೆ ಸಾಬೀತು ಪಡಿಸಿದ್ದಾರೆ. ಆದರೆ ಇಶಾನ್ ಕಿಶನ್ ಈ ಗುತ್ತಿಗೆ ಕಾಂಟ್ರ್ಯಕ್ಟ್ನಲ್ಲಿ ಸ್ಥಾನ ಪಡೆಯುವಲ್ಲಿ ವಿಲರಾಗಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದ ಅಕ್ಷರ್ ಪಟೇಲ್ ಅವರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಇನ್ನು ಕಳೆದ ಶನಿವಾರ ಗುವಾಹಟಿಯಲ್ಲಿ ಬಿಸಿಸಿಐ ಸಭೆ ನಡೆಸುವ ಸಾಧ್ಯತೆ ಇತ್ತು. ಆದರೆ ಈ ಸಭೆ ಮುಂದೂಡಲಾಗಿದೆ. ಈ ವೇಳೆ ಭಾರತ ಪುರುಷರ ಕೇಂದ್ರ ಒಪ್ಪಂದ, ಆಟಗಾರರ ಸಂಭಾವನೆ, ಭಾರತ "ಎ" ಹಾಗೂ ಸೀನಿಯರ್ ತಂಡಗಳು ಇಂಗ್ಲೆಂಡ್ ಪ್ರವಾಸ ಬೆಳೆಸುವ ಕುರಿತಾಗಿ ಇದೇ ವೇಳೆ ಸಭೆಯಲ್ಲಿ ಚರ್ಚಿಸಲಾಗುವ ಸಾಧ್ಯತೆ ಇತ್ತು.
ಕಳೆದ 12 ತಿಂಗಳುನಿಂದ ಭಾರತದ ಪರ ಅಮೋಘ ಪ್ರದರ್ಶನ ನೀಡುತ್ತಿರುವ ವರುಣ್ ಚಕ್ರವರ್ತಿ, ನಿತೀಶ್ ಕುಮಾರ್ ರೆಡ್ಡಿ, ಅಭಿಷೇಕ್ ಶರ್ಮಾ ಮೊದಲ ಬಾರಿಗೆ ಕೇಂದ್ರ ಒಪ್ಪಂದದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಪ್ರಸಕ್ತ ಸಾಲಿನ ಭಾರತ ಮಹಿಳಾ ಹಿರಿಯರ ತಂಡದ ವಾರ್ಷಿಕ ಒಪ್ಪಂದವನ್ನು ಇತ್ತೀಚಿಗೆ ಬಿಸಿಸಿಐ ಘೋಷಿಸಿತ್ತು. ಘೋಷಿತ ತಂಡದಲ್ಲಿ ಹಲವು ಯುವ ಆಟಗಾರ್ತಿಯರಿಗೆ ಅವಕಾಶ ಸಿಕ್ಕಿತ್ತು. ಈ ವೇಳೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ಸಹ ಕೇಂದ್ರ ಒಪ್ಪಂದದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.