
ಬಿಸಿಸಿಐ ಅಧ್ಯಕ್ಷ ಹಾಗೂ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಭಾನುವಾರ ಬೆಳಗ್ಗೆ ಕೊಲ್ಕತ್ತಾದ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ. ಎರಡನೇ ಯಶಸ್ವಿ ಆ್ಯಂಜಿಯೋಪ್ಲಾಸ್ಟಿಯ ನಂತರ ಎರಡು ದಿನ ಆಸ್ಪತ್ರೆಯಲ್ಲೇ ಉಳಿದುಕೊಂಡಿದ್ದ ಗಂಗೂಲಿ ಇಂದು ಬಿಡುಗಡೆಯಾದರು.
48ರ ಹರೆಯದ ಸೌರವ್ ಗಂಗೂಲಿ ಜನವರಿ 27ರಂದು ಎದೆಯಲ್ಲಿ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಎರಡನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದರು. ಜನವರಿ 28ರಂದು ಗಂಗೂಲಿಗೆ ಆ್ಯಜಿಯೋಪ್ಲಾಸ್ಟಿ ನಡೆಸಿದ ಎರಡು ಸ್ಟಂಟ್ಗಳನ್ನು ಅಳವಡಿಸಲಾಗಿತ್ತು. ಖ್ಯಾತ ಹೃದ್ರೋಗ ತಜ್ಞರಾದ ಕರ್ನಾಟಕ ಮೂಲದ ಡಾ. ದೇವಿ ಶೆಟ್ಟಿ ಹಾಗೂ ಡಾ. ಅಶ್ವಿನ್ ಮೆಹ್ತಾ ತಂಡ ಯಶಸ್ವಿಯಾಗಿ ಈ ಚಿಕಿತ್ಸೆಯನ್ನು ನಡೆಸಿದರು.
ಚಿಕಿತ್ಸೆಯ ಬಳಿಕ ಮಾತಮಾಡಿದ್ದ ಆಸ್ಪತ್ರೆಗೆ ವೈದ್ಯಾಧಿಕಾರಿಯೊಬ್ಬರು "ಸೌರವ್ ಗಂಗೂಲಿ ಉತ್ತಮ ರೀತಿಯನ್ನು ಸ್ಪಂದಿಸುತ್ತಿದ್ದು ಅವರ ಹೃದಯ ಸದೃಢವಾಗಿದ್ದು ಸಾಮಾನ್ಯ ಮನುಷ್ಯರ ಹೃದಯದಷ್ಟೆ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದೆ. ಸಂಪೂರ್ಣ ಚೇತರಿಕೆಯ ಹಾದಿಯಲ್ಲಿದ್ದು ಮುಂದಿನ ಎರಡ್ಮೂರು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬಹುದು ಎಂದು ಎಂದು ಅವರು ಹೇಳಿದ್ದರು. ನಿರೀಕ್ಷೆಯಂತೆಯೇ ಸೌರವ್ ಗಂಗೂಲಿ ಭಾನುವಾರ ಬಿಡುಗಡೆಯಾಗಿದ್ದಾರೆ.
ಸೌರವ್ ಗಂಗೂಲಿ ಕೆಲ ತಿಂಗಳುಗಳ ಕಾಲ ಕಠಿಣ ಆರೋಗ್ಯ ದಿನಚರಿಯನ್ನು ಹೊಂದಬೇಕಾಗಿದ್ದು ಔಷಧಿಯಗಳನ್ನು ಪಡೆದುಕೊಳ್ಳಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ವೈದ್ಯರು ಸೌರವ್ ಗಂಗೂಲಿಯ ಚಿಕಿತ್ಸೆಯ ನಂತರ ಪ್ರತಿಕ್ರಿಯೆಯನ್ನು ನೀಡಿದ್ದರು.
ಸೌರವ್ ಗಂಗೂಲಿ ಈ ತಿಂಗಳ ಆರಂಭದಲ್ಲಿ ಕೊಲ್ಕತ್ತಾದ ತಮ್ಮ ಮನೆಯ ಜಿಮ್ನಲ್ಲಿದ್ದಾಗ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಆ ಸಂದರ್ಭದಲ್ಲಿ ಒಂದು ಸ್ಟಂಟ್ ಅಳವಡಿಸಿದ್ದ ತಜ್ಞ ವೈದ್ಯರು ಬಳಿಕ ಎರಡು ಸ್ಟಂಟ್ಗಳನ್ನು ಮುಂದಿನ ದಿನಗಳಲ್ಲಿ ಅಳವಡಿಸುವ ನಿರ್ಧಾರ ಕೈಗೊಂಡಿದ್ದರು. ಗಂಗೂಲಿಯ ಹೃದಯದಲ್ಲಿ ಮತ್ತೆ ನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಈಗ ಮತ್ತೊಂದು ಆ್ಯಂಜಿಯೋ ಪ್ಲಾಸ್ಟಿ ನಡೆಸಿ ಸ್ಟಂಟ್ ಅಳವಡಿಸಲಾಗಿದೆ.