
ಕೊಹ್ಲಿ ಟಿ ಟ್ವೆಂಟಿ ನಾಯಕತ್ವವನ್ನು ತ್ಯಜಿಸಲು ಮುಂದಾದಾಗ ಎಲ್ಲರೂ ವಿರೋಧ ವ್ಯಕ್ತಪಡಿಸಿದ್ದೆವು ಎಂದ ಚೇತನ್ ಶರ್ಮಾ
ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗೊಂಡಾಗ ಎಲ್ಲರೂ ಸಭೆಯಲ್ಲಿ ಬೇಡ ಎಂದು ವಿರೋಧವನ್ನು ವ್ಯಕ್ತಪಡಿಸಿದ್ದೆವು ಎಂದು ಚೇತನ್ ಶರ್ಮಾ ಹೇಳಿಕೊಂಡಿದ್ದಾರೆ. ವಿರಾಟ್ ಕೊಹ್ಲಿಯ ಈ ನಿರ್ಧಾರ ಮುಂಬರಲಿರುವ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಮೇಲೆ ಪ್ರಭಾವ ಬೀಳಲಿದ್ದು ಟೂರ್ನಿ ಮುಗಿದ ನಂತರ ಈ ಕುರಿತು ಚರ್ಚಿಸೋಣ ಇದು ಕೊಹ್ಲಿ ಬಳಿ ಮಾತನಾಡಿದ್ದೆವು ಎಂದು ಚೇತನ್ ಶರ್ಮಾ ಹೇಳಿದ್ದಾರೆ.

ಯಾರ ಮಧ್ಯೆಯೂ ಬಿರುಕಿಲ್ಲ ಎಂದ ಚೇತನ್ ಶರ್ಮಾ
ಇನ್ನು ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಆಟಗಾರರು ಮತ್ತು ಬಿಸಿಸಿಐ ನಡುವೆ ಬಿರುಕಿದೆ ಹಾಗೂ ಕೆಲ ಆಟಗಾರರ ನಡುವೆಯೂ ಸಹ ಬಿರುಕಿದೆ ಎಂಬ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಚೇತನ್ ಶರ್ಮಾ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಯಾವುದೇ ರೀತಿಯ ಬಿರುಕಿಲ್ಲ, ಇಬ್ಬರೂ ಸಹ ಒಟ್ಟಿಗೆ ಊಟ ಮಾಡುತ್ತಾರೆ, ಒಟ್ಟಿಗೆ ಅಭ್ಯಾಸಗಳಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಒಟ್ಟಿಗೆ ಪಂದ್ಯವನ್ನು ಗೆಲ್ಲಲು ಯೋಜನೆಗಳನ್ನು ಮಾಡುತ್ತಾರೆ. ದಯವಿಟ್ಟು ಈ ಎಲ್ಲಾ ವಿವಾದಗಳನ್ನು 2021ಕ್ಕೆ ಬಿಟ್ಟು 2022ರ ಹೊಸ ವರ್ಷದ ಹೊಸ ದಿನದಿಂದ ಟೀಮ್ ಇಂಡಿಯಾವನ್ನು ಬೆಂಬಲಿಸಿ ಎಂದು ಚೇತನ್ ಶರ್ಮಾ ಕೇಳಿಕೊಂಡಿದ್ದಾರೆ. ಹಾಗೂ ವಿರಾಟ್ ಕೊಹ್ಲಿಯನ್ನು ಭಾರತ ಏಕದಿನ ತಂಡದ ನಾಯಕತ್ವದಿಂದ ತೆಗೆದು ಹಾಕುವ ಮುನ್ನ ಆತನಿಗೆ ವಿಷಯವನ್ನು ತಿಳಿಸಿದ್ದೆ ಹಾಗೂ ಇದಕ್ಕೆ ಕೊಹ್ಲಿ ಕೂಡ ಯಾವುದೇ ಪ್ರತಿರೋಧ ವ್ಯಕ್ತಪಡಿಸದೇ ಒಪ್ಪಿಗೆ ನೀಡಿದ್ದರು ಎಂಬ ವಿಷಯವನ್ನು ಸಹ ಚೇತನ್ ಶರ್ಮಾ ಬಿಚ್ಚಿಟ್ಟಿದ್ದಾರೆ.

ಗಂಗೂಲಿ ಪರ ಬ್ಯಾಟ್ ಬೀಸಿದ ಚೇತನ್ ಶರ್ಮಾ
ಟಿ ಟ್ವೆಂಟಿ ನಾಯಕತ್ವ ವಿಚಾರದ ಕುರಿತಾಗಿ ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ವಿಭಿನ್ನ ಹೇಳಿಕೆಗಳನ್ನು ನೀಡಿದ್ದರು. ಹೀಗಾಗಿ ಇಬ್ಬರಲ್ಲಿ ಯಾರು ಹೇಳಿದ್ದು ನಿಜ ಎಂಬ ಗೊಂದಲ ಹುಟ್ಟಿಕೊಂಡಿತ್ತು. ಇದೀಗ ಈ ವಿಷಯದ ಕುರಿತಾಗಿ ಬಿಸಿಸಿಐ ಆಯ್ಕೆಗಾರ ಚೇತನ್ ಶರ್ಮಾ ನೀಡಿರುವ ಮೇಲಿನ ಹೇಳಿಕೆಗಳನ್ನು ಗಮನಿಸಿದರೆ ಎಲ್ಲಾ ಹೇಳಿಕೆಗಳೂ ಸಹ ಸೌರವ್ ಗಂಗೂಲಿ ಅವರ ಹೇಳಿಕೆಗಳಂತೆಯೇ ಇವೆ. ಕೊಹ್ಲಿ ಟಿ ಟ್ವೆಂಟಿ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನ ಕೈಗೊಂಡಾಗ ಬಿಸಿಸಿಐ ವಿರೋಧವನ್ನು ವ್ಯಕ್ತಪಡಿಸಿತ್ತು ಎಂದು ಗಂಗೂಲಿ ಹೇಳಿದ್ದರು ಅದೇ ರೀತಿ ಚೇತನ್ ಶರ್ಮಾ ಕೂಡ ಹೇಳಿಕೆ ನೀಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ತಾನು ಟಿ ಟ್ವೆಂಟಿ ನಾಯಕತ್ವದಿಂದ ಕೆಳಗಿಳಿಯಲು ತೀರ್ಮಾನ ಕೈಗೊಂಡಾಗ ಬಿಸಿಸಿಐ ವಿರೋಧವನ್ನು ವ್ಯಕ್ತಪಡಿಸಲಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಇದೀಗ ಚೇತನ್ ಶರ್ಮಾ ಹೇಳಿಕೆ ಕೊಹ್ಲಿ ಹೇಳಿಕೆಗೆ ವಿರುದ್ಧವಾಗಿದ್ದು ಇದು ಯಾವ ರೀತಿಯ ವಿವಾದಕ್ಕೆ ಕಾರಣವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications
