ಅಬುಧಾಬಿಯಲ್ಲಿ ನಡೆದ ಐಪಿಎಲ್ ಮಿನಿ ಹಾರಜಿನಲ್ಲಿ ಬಾಂಗ್ಲಾದೇಶದ ಮುಷ್ತಾಫಿಜುರ್ ರಹಮಾನ್ ಅವರಿಗೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) 9.2 ಕೋಟಿ ನೀಡಿ ಖರೀದಿಸಿತ್ತು. ಇವರು ಡೆತ್ ಓವರ್ಗಳಲ್ಲಿ ತಂಡಕ್ಕೆ ನೆರವಾಗಬಲ್ಲರು ಎಂಬ ಲೆಕ್ಕಾಚಾರ ತಂಡದ್ದಾಗಿತ್ತು. ಆದರೆ ಈಗ ಬಾಂಗ್ಲಾದೇಶದ ಆಟಗಾರರು ಐಪಿಎಲ್ನಲ್ಲಿ ಆಡಬೇಕಾ ಎಂಬ ಬಗ್ಗೆ ಪ್ರಶ್ನೆಗಳು ಎದ್ದಿವೆ. ಮುಷ್ತಾಫಿಜುರ್ ಐಪಿಎಲ್ನಲ್ಲಿ ಆಡುವ ಬಗ್ಗೆ ದೇಶದಲ್ಲಿ ವಿರೋಧ ಕೇಳಿ ಬಂದಿದೆ.
ಉಭಯ ದೇಶಗಳ ನಡುವಣ ಸದ್ಯದ ಪರಿಸ್ಥಿತಿಯನ್ನು ಉಲ್ಲೇಖಿಸಿ ಹಲವು ರಾಜಕಾರಣಿಗಳು ಕೆಕೆಆರ್ ತಂಡವನ್ನು ಟೀಕಿಸಿದ್ದಾರೆ. ಅಲ್ಲದೆ ಬಾಂಗ್ಲಾ ಆಟಗಾರನನ್ನು ಐಪಿಎಲ್ನಿಂದ ಹೊರ ಹಾಕಬೇಕು ಎಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬಂದಿದೆ. ಈ ಸುದ್ದಿ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಬೆನ್ನಲ್ಲೆ, ಬಿಸಿಸಿಐ ಅಧಿಕಾರಿಯೊಬ್ಬರು ಈ ಬಗ್ಗೆ ಈಗ ಸ್ಪಷ್ಟತೆ ನೀಡಿದ್ದಾರೆ.

ಭಾರತ ಸರ್ಕಾರದಿಂದ ಬಾಂಗ್ಲಾದೇಶ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸುವುದನ್ನು ನಿಷೇಧಿಸುವ ಯಾವುದೇ ಪತ್ರ ಬಿಸಿಸಿಐಗೆ ಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸರ್ಕಾರದಿಂದ ಯಾವುದೇ ಆಕ್ಷೇಪಣೆಗಳು ಅಥವಾ ಸೂಚನೆಗಳು ಬಂದಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಳಿಕ ಮುಷ್ತಾಫಿಜುರ್ ಆಯ್ಕೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಮುಷ್ತಾಫಿಜುರ್ ಐಪಿಎಲ್ನಲ್ಲಿ ಆಡುತ್ತಾರಾ ಎಂದು ಬಿಸಿಸಿಐ ಅಧಿಕಾರಿಗಳಿಗೆ ಕೇಳಿದಾಗ, ಈ ಬಗ್ಗೆ ಈಗ ಏನು ಚರ್ಚಿಸುವುದು ಬೇಡ. ನಮಗೆ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಇದು ಸೂಕ್ಷ್ಮ ಪರಿಸ್ಥಿತಿಯಾಗಿದೆ. ಇದನ್ನು ನಾವು ಅರಿತುಕೊಳ್ಳಬೇಕು. ಮುಷ್ತಾಫಿಜುರ್ ಅವರನ್ನು ನಿಷೇಧಿಸುವಂತೆ ಒತ್ತಾಯಿಸುತ್ತಿರುವುದರ ಬಗ್ಗೆ ನಮಗೆ ಏನು ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಷ್ತಾಫಿಜುರ್ ರಹಮಾನ್ ಕಳೆದ ಹಲವು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿದ್ದಾರೆ. ಇವರು 2016ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಮೊದಲ ಬಾರಿಗೆ ಆಡಿದ್ದರು. ಇದಾದ ಬಳಿಕ 208ರಲ್ಲಿ ಮುಂಬೈ ಇಂಡಿಯನ್ಸ್ ಪರ, 2021ರಲ್ಲಿ ರಾಜಸ್ಥಾನ ರಾಯಲ್ಸ್ ಪರ, 2022-23ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ, 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮುಷ್ತಾಫಿಜುರ್ ಆಡಿ ಎನಿಸಿಕೊಂಡಿದ್ದಾರೆ. ಇವರು ಐಪಿಎಲ್ನಲ್ಲಿ 65 ವಿಕೆಟ್ ಕಬಳಿಸಿದ್ದಾರೆ.
ಶಿವಸೇನಾ ನಾಯಕ ಸಂಜಯ್ ನಿರುಪಮ್ ಅವರು ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ತೆಗೆದುಹಾಕುವಂತೆ ಕೆಕೆಆರ್ ಮಾಲೀಕ ಶಾರುಖ್ ಖಾನ್ ಅವರಿಗೆ ಮನವಿ ಮಾಡಿದ್ದಾರೆ.