
ಟೀಮ್ ಇಂಡಿಯಾದಲ್ಲಿ ನಾಯಕತ್ವ ಬದಲಾವಣೆ ಬಳಿಕ ನಡೆದ ಗೊಂದಲದ ಬಗ್ಗೆ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆಡಿದ ಕೆಲ ಮಾತುಗಳು ಬಿಸಿಸಿಐ ಕ್ರಮಗಳ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿದೆ. ಅಲ್ಲದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಡಿದ ಮಾತುಗಳಿಗೆ ವಿರುದ್ಧವಾಗಿದೆ. ಅದರಲ್ಲೂ ನಾಯಕತ್ವ ಬದಲಾವಣೆ ವಿಚಾರವಾಗಿ ವಿರಾಟ್ ಕೊಹ್ಲಿ ಸೂಕ್ತವಾದ ಸಂವಹನ ನಡೆದಿರಲಿಲ್ಲ. ಏಕದಿನ ನಾಯಕತ್ವ ಬದಲಾವಣೆ ಘೋಷಣೆಗೆ ಒಂದೂವರೆ ಗಂಟೆಗೆ ಮುನ್ನ ತನಗೆ ಈ ಸಂಗತಿಯನ್ನು ತಿಳಿಸಲಾಯಿತು ಎಂದು ಕೊಹ್ಲಿ ಆಡಿದ ಮಾತು ಎಂಬುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಆದರೆ ವಿರಾಟ್ ಕೊಹ್ಲಿ ಅವರ ಈ ಮಾತನ್ನು ಬಿಸಿಸಿಐನ ಅಧಿಕಾರಿಗಳು ನಿರಾಕರಿಸಿದ್ದಾರೆ. ಬಿಸಿಸಿಐನ ಅಧಿಕಾರಿಯೊಬ್ಬರು ಈ ವಿಚಾರವಾಗಿ ಇಂಡಿಯಾ ಟುಡೇ ಜೊತೆಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು "ವಿರಾಟ್ ಕೊಹ್ಲಿಯನ್ನು ನಾವು ಸಂಪರ್ಕಿಸಿರಲಿಲ್ಲ ಎಂದು ಅವರು ಹೇಳುವಂತಿಲ್ಲ. ನಾವು ಸೆಪ್ಟೆಂಬರ್ ತಿಂಗಳಿನಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಮಾತನಾಡಿದ್ದೆವು. ಟಿ20 ನಾಯಕತ್ವವನ್ನು ತೊರೆಯದಂತೆ ಕೇಳಿಕೊಂಡಿದ್ದೆವು. ಆದರೆ ಒಮ್ಮೆ ವಿರಾಟ್ ಕೊಹ್ಲಿ ತಮ್ಮ ಮಾತಿನಂತೆ ಟಿ20 ನಾಯಕತ್ವವನ್ನು ತೊರೆದರೋ ನಂತರ ವೈಟ್ಬಾಲ್ ಮಾದರಿಗೆ ಇಬ್ಬರು ನಾಯಕರನ್ನು ಹೊಂದುವುದು ಕಷ್ಟು ಎಂದು ನಾವು ಭಾವಿಸಿದೆವು. ಆ ಮಿಂಟಿಂಗ್ಗೆ ಮುನ್ನ ಬೆಳಗ್ಗೆ ಚೇತನ್ ಶರ್ಮಾ ಅವರು ವಿರಾಟ್ ಕೊಹ್ಲಿ ಬಳಿ ಮಾತನಾಡಿ ಏಕದಿನ ನಾಯಕತ್ವದ ವಿಚಾರವಾಗಿ ಮಾತನಾಡಿದ್ದರು" ಎಂದು ಬಿಸಿಸಿಐನ ಅಧಿಕಾರಿ ಹೇಳಿದ ಮಾತನ್ನು ಇಂಡಿಯಾ ಟುಡೇ ಉಲ್ಲೇಖಿಸಿದೆ.
ವಿರಾಟ್ ಕೊಹ್ಲಿ ಇಂದು ನಡೆಸಿದ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಏಕದಿನ ನಾಯಕತ್ವದಿಂದ ಕೆಳಕ್ಕಿಳಿಸುವ ಸಂದರ್ಭದಲ್ಲಿ ಯಾರೂ ಕೂಡ ಈ ವಿಚಾರವಾಗಿ ತನ್ನಲ್ಲಿ ಅದಕ್ಕೂ ಮುನ್ನ ಚರ್ಚೆ ನಡೆಸಿರಲಿಲ್ಲ ಎಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಪ್ರಕಟಿಸುವ ಮುನ್ನ ನಡೆಸಿದ ಚರ್ಚೆಯ ಮುಕ್ತಾಯದ ಹಂತದಲ್ಲಿ ಆಯ್ಕೆಗಾರರು ಏಕದಿನ ತಂಡದ ನಾಯಕತ್ವ ಬದಲಾವಣೆ ಮಾಡಿದ ಸಂಗತಿಯನ್ನು ತಿಳಿಸಿದ್ದರು ಎಂದಿದ್ದಾರೆ ವಿರಾಟದ ಕೊಹ್ಲಿ.
ಆದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಏಕದಿನ ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಕ್ಕಿಳಿಸಿದ ಬಳಿಕ ಉಂಟಾದ ವಿವಾದದ ಬಳಿಕ ಪ್ರತಿಕ್ರಿಯೆ ನೀಡಿದ್ದರು. ಈ ಸಂದರ್ಭದಲ್ಲಿ ಅವರು ವಿರಾಟ್ ಕೊಹ್ಲಿ ಬಳಿ ಟಿ20 ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಮತ್ತೊಮ್ಮೆ ಪರಿಗಣಿಸುವಂತೆ ಕೇಳಿಕೊಂಡಿದ್ದೆವು. ಆದರೆ ಅವರು ಅದನ್ನು ನಿರಾಕರಿಸಿದರು. ಹೀಗಾಗಿ ವೈಟ್ಬಾಲ್ ಮಾದರಿಗೆ ಇಬ್ಬರು ಪ್ರತ್ಯೇಕ ನಾಯಕರನ್ನು ಹೊಂದುವುದು ಅಸಾಧ್ಯ ಎಂದು ನಿರ್ಧರಿಸಿ ಈ ಬದಲಾವಣೆ ಮಾಡಲಾಗಿದೆ ಎಂದಿದ್ದರು.
"ಟಿ20 ನಾಯಕತ್ವವನ್ನು ತ್ಯಜಿಸುವುದಕ್ಕೂ ಮುನ್ನ ನಾನು ಬಿಸಿಸಿಐ ಬಳಿ ಈ ಬಗ್ಗೆ ಚರ್ಚಿಸಿದ್ದೆ. ಆಗ ನಾನು ಈ ಕಾರಣಗಳಿಂದಾಗಿ ನಾನು ನಾಯಕತ್ವವನ್ನು ತ್ಯಜಿಸುತ್ತಿದ್ದೇನೆ, ತನ್ನ ನಿರ್ಧಾರಕ್ಕೆ ಇದು ಕಾರಣ ಎಂದು ಹೇಳಿದ್ದೆ. ಆ ಸಂದರ್ಭದಲ್ಲಿ ಸಲೀಸಾಗಿ ಆ ರಾಜೀನಾಮೆಯನ್ನು ಸ್ವೀಕರಿಸಿದ್ದರು. ಯಾರು ಕೂಡ ಆ ನಿರ್ಧಾರವನ್ನು ತಪ್ಪಾಗಿ ಭಾವಿಸಿರಲಿಲ್ಲ ಮತ್ತು ಯಾರು ಕೂಡ ಹಿಂದೇಟು ಹಾಕಲಿಲ್ಲ. ಯಾರು ಕೂಡ ನನ್ನಲ್ಲಿ ಟಿ20 ನಾಯಕನಾಗಿ ಮುಂದುವರಿಯುವಂತೆ ಕೇಳಿಕೊಳ್ಳಲು ಇಲ್ಲ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
"ಅದನ್ನು ಸಕಾರಾತ್ಮಕಾವಾಗಿಯೇ ಸ್ವೀಕರಿಸಿದ್ದರು. ಎಲ್ಲರೂ ಇದು ಉತ್ತಮ ಬೆಳವಣಿಗೆ ಹಾಗೂ ಸೂಕ್ತ ನಿರ್ಧಾರ ಎಂದು ನೋಡಿದ್ದರು. ಆ ಸಮದರ್ಭದಲ್ಲಿ ನಾನು ಬಿಸಿಸಿಐಯನ್ನು ಸಂಪರ್ಕಿಸಿ ಬಿಸಿಸಿಐ ಪದಾಧಿಕಾರಿಗಳು ಅಥವಾ ಆಯ್ಕೆಗಾರರಿಂದ ಆಕ್ಷೇಪಗಳು ಇಲ್ಲದಿದ್ದರೆ ನಾನು ಏಕದಿನ ಹಾಗೂ ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯುತ್ತೇನೆ ಎಂದು ಹೇಳಿದ್ದೆ. ದೂರವಾಗಿ ಕರೆ ಮಾಡಿ ಈ ವಿಚಾರವನ್ನು ನಾನು ಸ್ಪಷ್ಟವಾಗಿ ತಿಳಿಸಿದ್ದೆ. ಬಿಸಿಸಿಐ ಜೊತೆಗೆ ನನ್ನ ಸಂವಾದ ಇಷ್ಟ ಸ್ಪಷ್ಟವಾಗಿತ್ತು. ಬಿಸಿಸಿಐ ಪದಾಧಿಕಾರಿಗಳಿಗೆ ನಾನೇ ಈ ಆಯ್ಕೆಯನ್ನು ನೀಡಿದ್ದೆ. ಅದರಿಂದಾಗಿ ನನಗೆ ಅದು ಸರಿಯೆನಿಸಿದೆ" ಎಂದಿದ್ದಾರೆ ವಿರಾಟ್ ಕೊಹ್ಲಿ.