ಬಿಸಿಸಿಐನ ಆ ಒಂದು ಮಾತನ್ನು ಕೊಹ್ಲಿ ಕೇಳಲಿಲ್ಲ; ನಾಯಕತ್ವ ಕಳೆದುಕೊಂಡ ಕೊಹ್ಲಿಗೆ ಮರ್ಯಾದೆಯೂ ಸಿಗಲಿಲ್ಲ!

2021 ವಿರಾಟ್ ಕೊಹ್ಲಿ ಪಾಲಿಗೆ ಅತ್ಯಂತ ಕೆಟ್ಟ ವರ್ಷ ಎಂದೇ ಹೇಳಬಹುದು. ಈ ವರ್ಷ ನಡೆದ ಪ್ರತಿಷ್ಠಿತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುವುದರ ಮೂಲಕ ಟ್ರೋಫಿ ಎತ್ತಿಹಿಡಿಯುವ ಅವಕಾಶವನ್ನು ಕೈ ತಪ್ಪಿಸಿಕೊಂಡು ರನ್ನರ್ ಅಪ್ ಆಗಿ ಹೊರಹೊಮ್ಮಿದಾಗಿನಿಂದ ವಿರಾಟ್ ಕೊಹ್ಲಿ ಹೆಗಲೇರಿದ ದುರಾದೃಷ್ಟ ಇಂದಿಗೂ ಸಹ ಕೆಳಗಿಳಿದಂತೆ ಕಾಣುತ್ತಿಲ್ಲ.
ಮೊದಲಿಗೆ ಈ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸೋತು ಟ್ರೋಫಿ ಎತ್ತಿಹಿಡಿಯುವ ಅವಕಾಶವನ್ನು ಕೈ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ನಂತರ ನಡೆದ ಮತ್ತೊಂದು ಐಸಿಸಿ ಟೂರ್ನಿಯಾದ ಟಿ ಟ್ವೆಂಟಿ ವಿಶ್ವಕಪ್ನಲ್ಲಿಯೂ ನೆಲಕಚ್ಚಿತು. ಪ್ರತಿಷ್ಠಿತ ಟೂರ್ನಿಯಲ್ಲಿನ ಮೊದಲೆರಡು ಪಂದ್ಯಗಳಲ್ಲಿ ಬದ್ಧವೈರಿಯಾದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೋಲುವುದರ ಮೂಲಕ ಸೆಮಿಫೈನಲ್ ಹಂತವನ್ನು ಪ್ರವೇಶಿಸುವಲ್ಲಿಯೂ ವಿಫಲವಾದ ಟೀಮ್ ಇಂಡಿಯಾ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿತ್ತು. ಹೀಗೆ ಈ ವರ್ಷ ನಡೆದ 2 ಪ್ರಮುಖ ಐಸಿಸಿ ಟೂರ್ನಿಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಟ್ರೋಫಿಯ ಫಲವನ್ನು ನೀಡಲಿಲ್ಲ.
ಒಂದೆಡೆ ತನ್ನ ನಾಯಕತ್ವದಲ್ಲಿ ಐಸಿಸಿ ಟೂರ್ನಿಗಳಲ್ಲಿ ಭಾರತ ಮಂಕಾದರೆ, ಮತ್ತೊಂದೆಡೆ ವಿರಾಟ್ ಕೊಹ್ಲಿ ನಾಯಕತ್ವವನ್ನು ಕಳೆದುಕೊಳ್ಳುತ್ತಾ ಬಂದರು. ಮೊದಲಿಗೆ ಈ ಬಾರಿಯ ಟ್ವೆಂಟಿ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನವೇ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ಸ್ವಇಚ್ಛೆಯಿಂದ ತ್ಯಜಿಸುತ್ತಿರುವುದಾಗಿ ವಿರಾಟ್ ಕೊಹ್ಲಿ ಘೋಷಣೆ ಮಾಡಿದ್ದರು. ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕತ್ವದತ್ತ ಹೆಚ್ಚಿನ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಹೇಳಿದ್ದ ವಿರಾಟ್ ಕೊಹ್ಲಿ ಇದೀಗ ಭಾರತ ಏಕದಿನ ತಂಡದ ನಾಯಕತ್ವವನ್ನೇ ಕಳೆದುಕೊಂಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿರುವ ಪ್ರಕಾರ ಭಾರತ ಏಕದಿನ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ಬಿಟ್ಟುಕೊಟ್ಟಿಲ್ಲ, ಬದಲಾಗಿ ಬಿಸಿಸಿಐ ವಿರಾಟ್ ಕೊಹ್ಲಿಯಿಂದ ಕಸಿದುಕೊಂಡಿದೆ ಎನ್ನಲಾಗಿದೆ. ಬಿಸಿಸಿಐ ವಿರಾಟ್ ಕೊಹ್ಲಿಯಿಂದ ಧಿಡೀರನೆ ಏಕದಿನ ನಾಯಕತ್ವವನ್ನು ಕಸಿದುಕೊಳ್ಳಲು ಕಾರಣವೇನು ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ಓದಿ..

ನಾಯಕತ್ವ ಬಿಟ್ಟುಕೊಡುವಂತೆ ಕೊಹ್ಲಿಗೆ ಸೂಚನೆ ನೀಡಿತ್ತು ಬಿಸಿಸಿಐ!
ವರದಿಗಳ ಪ್ರಕಾರ ಬಿಸಿಸಿಐ 2 ದಿನಗಳ ಹಿಂದೆಯೇ ವಿರಾಟ್ ಕೊಹ್ಲಿ ಬಳಿ ಭಾರತ ಏಕದಿನ ತಂಡದ ನಾಯಕತ್ವವನ್ನು ಬಿಟ್ಟುಕೊಡುವುದರ ಕುರಿತಾಗಿ ಚರ್ಚೆಯನ್ನು ನಡೆಸಿತ್ತಂತೆ. ಈ ಚರ್ಚೆಯ ವೇಳೆ ಭಾರತ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಯಬೇಕೆಂದು ವಿರಾಟ್ ಕೊಹ್ಲಿಗೆ ಬಿಸಿಸಿಐ ಸೂಚನೆಯನ್ನು ನೀಡಿತ್ತು ಎನ್ನಲಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಸ್ವತಃ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿದಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ.

ಬಿಸಿಸಿಐ ಮಾತಿಗೆ ಒಪ್ಪಿಗೆ ನೀಡದ ಕೊಹ್ಲಿಗೆ ಸಿಗಲಿಲ್ಲ ಮರ್ಯಾದೆ
ಭಾರತ ಏಕದಿನ ತಂಡದ ನಾಯಕತ್ವವನ್ನು ಬಿಟ್ಟುಕೊಡುವಂತೆ ಬಿಸಿಸಿಐ ನೀಡಿದ್ದ ಸೂಚನೆಗೆ ಒಪ್ಪಿಗೆ ನೀಡದ ವಿರಾಟ್ ಕೊಹ್ಲಿಗೆ ಬಿಸಿಸಿಐ ಕೊಡಬೇಕಾಗಿದ್ದ ಮರ್ಯಾದೆಯನ್ನೂ ಕೊಟ್ಟಿಲ್ಲ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲು ಒಲ್ಲೆ ಎಂದ ನಂತರ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ನಾಯಕ ಸ್ಥಾನದಿಂದ ಸ್ವತಃ ತೆಗೆದುಹಾಕುವ ನಿರ್ಧಾರವನ್ನು ಕೈಗೊಂಡಿದೆ. ಹೀಗೆ ಕೊಹ್ಲಿಯನ್ನು ನಾಯಕ ಸ್ಥಾನದಿಂದ ತೆಗೆದುಹಾಕಿದ ನಂತರ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ರೋಹಿತ್ ಶರ್ಮಾ ಅವರನ್ನು ನೂತನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿರುವ ಬಿಸಿಸಿಐ, ನಾಯಕ ಸ್ಥಾನದಿಂದ ಕೆಳಗಿಳಿದ ವಿರಾಟ್ ಕೊಹ್ಲಿಗೆ ಒಂದೇ ಒಂದು ಕೃತಜ್ಞತೆಯನ್ನೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಲ್ಲಿಸಿಲ್ಲ. ಹೀಗೆ ನಾಯಕ ಸ್ಥಾನದಿಂದ ಹೊರಬಿದ್ದ ಕೊಹ್ಲಿಗೆ ಸಿಗಬೇಕಾಗಿದ್ದ ಮರ್ಯಾದೆ ಸಿಗದೇ ಇರುವುದು ಬೇಸರದ ಸಂಗತಿ.

ಬಿಸಿಸಿಐ ಮಾತನ್ನು ಕೊಹ್ಲಿ ಕೇಳಲಿಲ್ಲ, ಕೊಹ್ಲಿ ಹಠಕ್ಕೆ ಬಿಸಿಸಿಐ ಸೊಪ್ಪು ಹಾಕಲಿಲ್ಲ, ಒಟ್ಟಿನಲ್ಲಿ ಯಾವುದೂ ಸರಿಯಿಲ್ಲ!
ಭಾರತ ಏಕದಿನ ತಂಡದ ನಾಯಕತ್ವ ತ್ಯಜಿಸುವಂತೆ ಸೂಚನೆಯನ್ನು ನೀಡಿದ ಬಿಸಿಸಿಐನ ಮಾತಿಗೆ ಕೊಹ್ಲಿ ಒಪ್ಪಿಗೆ ಸೂಚಿಸಲಿಲ್ಲ. ಭಾರತ ಏಕದಿನ ತಂಡದ ನಾಯಕತ್ವವನ್ನು ಬಿಟ್ಟುಕೊಡುವುದಿಲ್ಲ ಎಂಬ ಕೊಹ್ಲಿ ಹಠಕ್ಕೆ ಬಿಸಿಸಿಐ ಸೊಪ್ಪನ್ನು ಹಾಕಿಲ್ಲ. ಹೀಗೆ ಅತ್ತ ಬಿಸಿಸಿಐ, ಇತ್ತ ಕೊಹ್ಲಿ ತಮ್ಮ ನಿಲುವನ್ನು ಬಿಟ್ಟುಕೊಡದೇ ಜಿದ್ದಾಜಿದ್ದಿಗೆ ಬಿದ್ದಂತಾಗಿದ್ದು ನಿಜ. ಹೀಗೆ ಬಿಸಿಸಿಐ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆದ ಈ ಜಿದ್ದಾಜಿದ್ದಿನ ಹೋರಾಟದಲ್ಲಿ ಅಂತಿಮವಾಗಿ ಬಿಸಿಸಿಐ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಿದ್ದು, ಬಿಸಿಸಿಐ ಮತ್ತು ವಿರಾಟ್ ಕೊಹ್ಲಿ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಅನುಮಾನ ಹೆಚ್ಚಾಗುವಂತೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications