ಇದೇ ಜೂನ್ 2ರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಿತು.
ಭಾರತ ತಂಡ ಪ್ರಕಟವಾದಾಗಿನಿಂದ, ಕ್ರಿಕೆಟ್ ತಜ್ಞರು ಮತ್ತು ಅಭಿಮಾನಿಗಳು ಆಯ್ಕೆಗಳನ್ನು ಚರ್ಚಿಸಿದ್ದಾರೆ ಮತ್ತು ಕೆಲವು ಇನ್-ಫಾರ್ಮ್ ಆಟಗಾರರನ್ನು ಬಿಟ್ಟಿದ್ದಕ್ಕಾಗಿ ಬಿಸಿಸಿಐ ಆಯ್ಕೆ ಸಮಿತಿಯನ್ನು ಟೀಕಿಸಿದ್ದಾರೆ.

ಭಾರತೀಯ ಆಯ್ಕೆಗಾರರು ಕೆಎಲ್ ರಾಹುಲ್, ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್, ರವಿ ಬಿಷ್ಣೋಯಿ ಅವರಂತಹ ಆಟಗಾರರನ್ನು ಕೈಬಿಟ್ಟಿದ್ದಕ್ಕಾಗಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೋಪವನ್ನು ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ರುತುರಾಜ್ ಗಾಯಕ್ವಾಡ್ ಅವರನ್ನು 15 ಸದಸ್ಯರ ಭಾರತ ತಂಡದಿಂದ ಹೊರಗಿಡಲಾಗಿದೆ ಮತ್ತು ಮೀಸಲು ಆಟಗಾರರ ಪಟ್ಟಿಯಲ್ಲೂ ಹೆಸರಿಸದ ನಂತರ ಬಿಸಿಸಿಐ ಮಾಜಿ ಮುಖ್ಯ ಆಯ್ಕೆಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಪ್ರಸ್ತುತ ಆಯ್ಕೆ ಸಮಿತಿಯ ವಿರುದ್ಧ ಕಿಡಿಕಾರಿದರು.
ಗುಜರಾತ್ ಟೈಟನ್ಸ್ ನಾಯಕ ಹಾಗೂ ಭಾರತ ತಂಡದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರ ಕಳಪೆ ಫಾರ್ಮ್ ಅನ್ನು ಎತ್ತಿ ತೋರಿಸಿದ ಕೃಷ್ಣಮಾಚಾರಿ ಶ್ರೀಕಾಂತ್, ಆಯ್ಕೆ ಸಮಿತಿಯನ್ನು "ಪಕ್ಷಪಾತಿ' ಎಂದು ಆರೋಪಿಸಿದರು.

ರುತುರಾಜ್ ಗಾಯಕ್ವಾಡ್ ಪ್ರಸ್ತುತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಅವರು ಆಡಿದ 10 ಇನ್ನಿಂಗ್ಸ್ಗಳಿಂದ 63.62ರ ಸರಾಸರಿ ಮತ್ತು 146.69ರ ಸ್ಟ್ರೈಕ್ ರೇಟ್ನಲ್ಲಿ 509 ರನ್ ಕಲೆಹಾಕಿದ್ದಾರೆ.
ಇದೇ ವೇಳೆ, ನಾಲ್ವರು ಮೀಸಲು ಆಟಗಾರರಲ್ಲಿ ಒಬ್ಬರಾಗಿ ಹೆಸರಿಸಲ್ಪಟ್ಟ ಶುಭ್ಮನ್ ಗಿಲ್ ಐಪಿಎಲ್ 2024ರಲ್ಲಿ ಆಡಿದ 10 ಪಂದ್ಯಗಳಿಂದ 35.56ರ ಸರಾಸರಿಯಲ್ಲಿ 320 ರನ್ ಗಳಿಸಿದ್ದಾರೆ.
ನಾಯಕ ರೋಹಿತ್ ಶರ್ಮಾ ಹೊರತುಪಡಿಸಿ 15 ಆಟಗಾರರ ತಂಡದಲ್ಲಿ ವಿಶೇಷ ಆರಂಭಿಕ ಆಟಗಾರನಾಗಿ ಆಯ್ಕೆಯಾಗಿರುವ ಯಶಸ್ವಿ ಜೈಸ್ವಾಲ್, ಐಪಿಎಲ್ 2024ರಲ್ಲಿ ಆಡಿದ 9 ಪಂದ್ಯಗಳಿಂದ 31.12 ಸರಾಸರಿಯಲ್ಲಿ 249 ರನ್ ಗಳಿಸುವ ಮೂಲಕ ಸಾಧಾರಣ ಅಭಿಯಾನ ಹೊಂದಿದ್ದಾರೆ.

"ಶುಭ್ಮನ್ ಗಿಲ್ ಸಂಪೂರ್ಣವಾಗಿ ಫಾರ್ಮ್ನಿಂದ ಹೊರಗಿದ್ದಾರೆ. ಆದರೂ ಅವರು ತಂಡದಲ್ಲಿ ಆಯ್ಕೆಯಾಗಿದ್ದಾರೆ. ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಸ್ಥಾನ ಪಡೆಯಲು ಅರ್ಹರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಈ ಐಪಿಎಲ್ನಲ್ಲಿ ಆಡಿದ 10 ಇನ್ನಿಂಗ್ಸ್ಗಳಲ್ಲಿ 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ".
"ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ್ದರು. ಶುಭ್ಮನ್ ಗಿಲ್ ಆಯ್ಕೆಗಾರರ ಆಯ್ಕೆಯಾಗಿದೆ. ಪ್ರತಿ ಬಾರಿ ವಿಫಲವಾದರೂ ಅವಕಾಶ ಸಿಗುತ್ತದೆ. ಟೆಸ್ಟ್, ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ವಿಫಲರಾದರೂ ಸ್ಥಾನ ಕಂಡುಕೊಳ್ಳುತ್ತಾರೆ. ಆಯ್ಕೆಯಲ್ಲಿ ಹೆಚ್ಚಿನ ಪಕ್ಷಪಾತವಿದೆ. ತಂಡದ ಆಯ್ಕೆಯು ಪಕ್ಷಪಾತಿ ವಿಷಯವಾಗಿದೆ," ಎಂದು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿನ ವಿಡಿಯೋದಲ್ಲಿ ಹೇಳಿದ್ದಾರೆ.
ಭಾರತ ತಂಡವು 2024ರ ಟಿ20 ವಿಶ್ವಕಪ್ನಲ್ಲಿ ಬದ್ಧ ಎದುರಾಳಿ ಪಾಕಿಸ್ತಾನ, ಸಹ-ಆತಿಥೇಯ ಯುಎಸ್ಎ, ಕೆನಡಾ ಮತ್ತು ಐರ್ಲೆಂಡ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ.
2007ರ ಟಿ20 ವಿಶ್ವಕಪ್ ಚಾಂಪಿಯನ್ ಭಾರತ ತಂಡ ಜೂನ್ 5ರಂದು ನ್ಯೂಯಾರ್ಕ್ನಲ್ಲಿ ಐರ್ಲೆಂಡ್ ವಿರುದ್ಧ ಐಸಿಸಿ ಟಿ20 ಪಂದ್ಯಾವಳಿಯಲ್ಲಿ ತಮ್ಮ ಅಭಿಯಾನವನ್ನು ಆರಂಭಿಸಲಿದೆ.
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಅರ್ಶ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಸಿರಾಜ್.
ಮೀಸಲು ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್, ಅವೇಶ್ ಖಾನ್.