ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಕಳೆದ ಎರಡು ವರ್ಷದಲ್ಲಿ ಭಾರತೀಯ ಕ್ರಿಕೆಟ್ನಲ್ಲಿ ನಡೆದ ಅತಿದೊಡ್ಡ ವಿವಾದದ ಕುರಿತು ಕೊನೆಗೂ ಮೌನ ಮುರಿದಿದ್ದಾರೆ.
2021ರಲ್ಲಿ ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ವಿರಾಟ್ ಕೊಹ್ಲಿ ಇದ್ದಕ್ಕಿದ್ದಂತೆ ಟೆಸ್ಟ್ ತಂಡದ ನಾಯಕತ್ವವನ್ನು ತ್ಯಜಿಸಿದರು. ನಂತರ ಕಳೆದ ಎರಡು ವರ್ಷಗಳಿಂದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯೊಂದಿಗೆ ಸೌರವ್ ಗಂಗೂಲಿ ನಡುವಿನ ಮುನಿಸು ಪ್ರಮುಖ ಚರ್ಚೆಯ ವಿಷಯವಾಗಿತ್ತು.

ಭಾನುವಾರ, ಜೂನ್ 11ರಂದು ಲಂಡನ್ನ ಓವಲ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 209 ರನ್ಗಳಿಂದ ಸೋತ ನಂತರ ಸೌರವ್ ಗಂಗೂಲಿ "ಆಜ್ ತಕ್' ಸುದ್ದಿ ವಾಹಿನಿಯೊಂದಿಗೆ ಮಾತನಾಡಿದರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಉದ್ಘಾಟನಾ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ, ಡಬ್ಲ್ಯುಟಿಸಿ ಫೈನಲ್ನಲ್ಲಿ ಭಾರತ ತಂಡಕ್ಕೆ ಸತತ ಎರಡನೇ ಸೋಲು ಎದುರಾಯಿತು.
ಬಿಸಿಸಿಐ ವಿರಾಟ್ ಕೊಹ್ಲಿಯ ರಾಜೀನಾಮೆಗೆ ಸೂಚಿಸಿರಲಿಲ್ಲ ಮತ್ತು ನಂತರ ರೋಹಿತ್ ಶರ್ಮಾ ಅವರನ್ನು ಎಲ್ಲಾ ಸ್ವರೂಪದ ನಾಯಕರನ್ನಾಗಿ ನೇಮಿಸಬೇಕಾಗಿತ್ತು, ಆ ಸಂದರ್ಭದಲ್ಲಿ ಅವರು ಅತ್ಯುತ್ತಮ ಆಯ್ಕೆಯಾಗಿದ್ದರು ಎಂದು ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಬಹಿರಂಗಪಡಿಸಿದರು.

"ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವ ತೊರೆಯುವುದಕ್ಕೆ ಬಿಸಿಸಿಐ ಸಿದ್ಧರಿರಲಿಲ್ಲ. ದಕ್ಷಿಣ ಆಫ್ರಿಕಾ ಪ್ರವಾಸದ ನಂತರ ನಮಗೂ ಇದು ಅನಿರೀಕ್ಷಿತ ಸುದ್ದಿಯಾಗಿತ್ತು. ಟೆಸ್ಟ್ ನಾಯಕತ್ವ ತೊರೆದ ಕಾರಣವನ್ನು ವಿರಾಟ್ ಕೊಹ್ಲಿ ಮಾತ್ರ ಬಹಿರಂಗಪಡಿಸಬಹುದು," ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
"ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವ ತೊರೆದ ಕಾರಣದ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ. ಆಯ್ಕೆಗಾರರು ಭಾರತ ತಂಡದ ನಾಯಕನನ್ನು ನೇಮಿಸಬೇಕಾಗಿತ್ತು ಮತ್ತು ಆ ಸಮಯದಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಆಯ್ಕೆಯಾಗಿದ್ದರು," ಎಂದು ಸೌರವ್ ಗಂಗೂಲಿ ಆಜ್ ತಕ್ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
2021ರ ಟಿ20 ವಿಶ್ವಕಪ್ಗೆ ಮುನ್ನ ಟಿ20 ಮಾದರಿಯ ನಾಯಕತ್ವ ಸ್ಥಾನದಿಂದಲೂ ಕೆಳಗಿಳಿಯುವ ನಿರ್ಧಾರವನ್ನು ವಿರಾಟ್ ಕೊಹ್ಲಿ ಪ್ರಕಟಿಸಿದರು. ಈ ನಿರ್ಧಾರದ ನಂತರ, ಸೌರವ್ ಗಂಗೂಲಿ ಮತ್ತು ಮಾಜಿ ನಾಯಕನ ನಡುವಿನ ಭಿನ್ನಾಭಿಪ್ರಾಯದ ಕಾರಣ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕಲಾಯಿತು ಎಂಬ ವದಂತಿಗಳು ಎದ್ದವು.
ನಂತರ, ವಿರಾಟ್ ಕೊಹ್ಲಿ 2021ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ನಂತರ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದರು. ಆಗ ಭಾರತ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಕ್ಕಾಗಿ ರೋಹಿತ್ ಶರ್ಮಾ ಅವರನ್ನು ಸೌರವ್ ಗಂಗೂಲಿ ಶ್ಲಾಘಿಸಿದರು.
"ಆ ಸಮಯದಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಪರ್ಯಾಯ ನಾಯಕನಾಗಿ ಕಾಣುತ್ತಿದ್ದರು. ಅಲ್ಲದೆ ಅವರು ಐದು ಐಪಿಎಲ್ ಪ್ರಶಸ್ತಿ ಗೆದ್ದಿದ್ದಾರೆ. ಏಷ್ಯಾಕಪ್ನಂತೆ ನಾಯಕತ್ವದ ಅವಕಾಶ ಸಿಕ್ಕಾಗಲೆಲ್ಲಾ ಅವರು ಗೆದ್ದಿದ್ದಾರೆ. ಅವರು ಅತ್ಯುತ್ತಮ ಆಯ್ಕೆಯಾಗಿದ್ದರು," ಎಂದು ಸೌರವ್ ಗಂಗೂಲಿ ಹೇಳಿದರು.
"ಭಾರತ ಸೋತರೂ, ರೋಹಿತ್ ಶರ್ಮಾ ಈ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ನಾನು ಚೆನ್ನಾಗಿ ಆಡದಿದ್ದರೂ, ನಾವು ವಿಶ್ವಕಪ್ ಸೆಮಿಫೈನಲ್ ತಲುಪಿದ್ದೇವೆ. ಅದಕ್ಕೂ ಮೊದಲು (2021) ನಾವು ನಾಕೌಟ್ಗಳಿಗೆ ಅರ್ಹತೆಯನ್ನೂ ಪಡೆದಿರಲಿಲ್ಲ".
"ರೋಹಿತ್ ಮೇಲೆ ನನಗೆ ನಂಬಿಕೆ ಇದೆ. ರೋಹಿತ್ ಮತ್ತು ಎಂಎಸ್ ಧೋನಿ ಮಾತ್ರ ಐದು ಬಾರಿ ಐಪಿಎಲ್ ಗೆದ್ದಿದ್ದಾರೆ. ಬೇರೆ ಯಾರೂ ಅಲ್ಲ'' ಎಂದು ರೋಹಿತ್ ಶರ್ಮಾ ಬಗ್ಗೆ ಗಂಗೂಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶ್ವಕಪ್ ಗೆಲ್ಲುವುದಕ್ಕಿಂತ ಐಪಿಎಲ್ ಗೆಲ್ಲುವುದು ಕಠಿಣ
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆಲ್ಲುವುದು ವಿಶ್ವಕಪ್ ಗೆಲ್ಲುವುದಕ್ಕಿಂತ ಕಠಿಣ ಎಂದು ಮಾಜಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.
"ಐಪಿಎಲ್ ಗೆಲ್ಲುವುದು ಅಷ್ಟು ಸುಲಭವಲ್ಲ. ಇದು ತುಂಬಾ ಕಠಿಣ ಪಂದ್ಯಾವಳಿ. ಐಪಿಎಲ್ ಗೆಲ್ಲುವುದು ವಿಶ್ವಕಪ್ಗಿಂತ ಕಷ್ಟ. 14 ಪಂದ್ಯಗಳ ನಂತರ ನೀವು ಪ್ಲೇಆಫ್ಗಳಲ್ಲಿ ಆಡುತ್ತೀರಿ. ಕನಿಷ್ಠ 17 ಪಂದ್ಯಗಳನ್ನು ಗೆದ್ದ ನಂತರವೇ ನೀವು ಚಾಂಪಿಯನ್ ಆಗಬಹುದು. ವಿಶ್ವಕಪ್ನಲ್ಲಿ ನೀವು 4-5 ಪಂದ್ಯಗಳ ನಂತರ ಸೆಮಿಫೈನಲ್ಗೆ ಅರ್ಹತೆ ಪಡೆಯುತ್ತೀರಿ," ಎಂದು ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.