ಆಗಸ್ಟ್ 12 ಸೋಮವಾರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ನೆರೆಯ ರಾಷ್ಟ್ರ ನೇಪಾಳಕ್ಕೆ ಸಹಾಯ ಮಾಡುವ ಮೂಲಕ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ.
ನೇಪಾಳ ಕ್ರಿಕೆಟ್ ತಂಡವು ಅಭ್ಯಾಸ ಮಾಡಲು ಮತ್ತು ತನ್ನ ಕೌಶಲ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಭಾರತಕ್ಕೆ ಬರಲಿದೆ. ಈ ಮಹ್ವತದ ನಿರ್ಧಾರವನ್ನು ಬಿಸಿಸಿಐ ಕೈಗೊಂಡಿದ್ದು, ನೇಪಾಳ ಕ್ರಿಕೆಟ್ ತಂಡಕ್ಕೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) 2 ವಾರಗಳ ಅಭ್ಯಾಸ ನಡೆಸಲು ಅವಕಾಶ ನೀಡಿದೆ.

ಎನ್ಸಿಎಯಲ್ಲಿ 2 ವಾರಗಳ ಕಾಲ ಅಭ್ಯಾಸ ನಡೆಸಲಿರುವ ನೇಪಾಳ ತಂಡವು ಮೊದಲು ಏಷ್ಯಾಕಪ್ ಹಾಗು 2024 ರ ಟಿ20 ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. 2024ರ ಟಿ20 ವಿಶ್ವಕಪ್ನಲ್ಲಿ ನೇಪಾಳ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 1 ರನ್ನಿಂದ ಸೋತಿತ್ತು.
ಈ ವೇಳೆ ದಕ್ಷಿಣ ಆಫ್ರಿಕಾದಂತಹ ಬಲಿಷ್ಠ ತಂಡಕ್ಕೆ ನೇಪಾಳ ಪ್ರಬಲ ಪೈಪೋಟಿ ನೀಡಿತ್ತು. ಈ ತಂಡ ಇನ್ನೆರಡು ತಂಡಗಳಿಗೆ ಕಠಿಣ ಪೈಪೋಟಿ ನೀಡಿ ಗೆಲ್ಲುವ ಕೊನೆ ಹಂತದಲ್ಲಿ ಮುಗ್ಗರಿಸಿತ್ತು.
ಇದೀಗ ಭಾರತದಲ್ಲಿ ಅತ್ಯುತ್ತಮ ತರಬೇತುದಾರರು ಮತ್ತು ಉತ್ತಮ ಸೌಲಭ್ಯಗಳೊಂದಿಗೆ ನೇಪಾಳದ ಕ್ರಿಕೆಟಿಗರು ತಮ್ಮ ಆಟವನ್ನು ಇನ್ನಷ್ಟು ಸುಧಾರಿಸಲು ಎನ್ಸಿಎಗೆ ಬಂದಿದ್ದಾರೆ. ನೇಪಾಳದ 15 ಆಟಗಾರರು ಭಾರತದಲ್ಲಿ ತರಬೇತಿ ಪಡೆಯುತ್ತಿದ್ದು, ಮುಂಬರುವ 2026ರ ಟಿ20 ವಿಶ್ವಕಪ್ಗೆ ನೇಪಾಳ ತಂಡ ಭರ್ಜರಿ ತಯಾರಿ ಆರಂಭಿಸಿದೆ.
ಬಿಸಿಸಿಐ ಈಗಾಗಲೇ ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೂ ಸಹಾಯ ಮಾಡಿದೆ . ಭಾರತದಲ್ಲಿ ಉಳಿದುಕೊಂಡಿರುವಾಗ ಕ್ರಿಕೆಟ್ ಆಡಲು ಮತ್ತು ಎದುರಾಳಿ ತಂಡಗಳೊಂದಿಗೆ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಅಫ್ಘಾನಿಸ್ತಾನ ತಂಡಕ್ಕೆ ಮೈದಾನವನ್ನು ನೀಡಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣವನ್ನು ಮೊದಲು ಫಿರೋಜ್ ಶಾ ಕೋಟ್ಲಾ ಮೈದಾನ ಎಂದು ಕರೆಯಲಾಗುತ್ತಿತ್ತು. ಇದು ದೀರ್ಘಕಾಲದವರೆಗೆ ಅಫ್ಘಾನಿಸ್ತಾನ ತಂಡದ ತವರು ಮೈದಾನವಾಗಿತ್ತು. ಬಿಸಿಸಿಐ ಈ ನಿರ್ಧಾರಗಳಿಂದ ಉಳಿದ ಕ್ರಿಕೆಟ್ ತಂಡ ಮತ್ತು ಆಟಗಾರರಿಗೆ ಸಾಕಷ್ಟು ಸಹಾಯ ಮಾಡುತ್ತಿದೆ.