ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸುವ ಮುನ್ನ, ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಲಭ್ಯತೆಯ ಬಗ್ಗೆ ವ್ಯಾಪಕ ಅನುಮಾನಗಳು ಎದ್ದಿವೆ.
ಹೈದರಾಬಾದ್ ಮತ್ತು ವಿಶಾಖಪಟ್ಟಣದಲ್ಲಿ ನಡೆದ ಮೊದಲ ಎರಡು ಟೆಸ್ಟ್ ಪಂದ್ಯಗಳಿಂದ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ಹಿಂದೆ ಸರಿದಿರುವುದು ಗಮನಿಸಬೇಕಾದ ಸಂಗತಿ.

ಆದಾಗ್ಯೂ, ಕೆಲವು ವರದಿಗಳ ಪ್ರಕಾರ, ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯ ಮೂರನೇ ಮತ್ತು ನಾಲ್ಕನೇ ಪಂದ್ಯಗಳನ್ನು ಸಹ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಮತ್ತು ಧರ್ಮಶಾಲಾದಲ್ಲಿ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅವರ ಭಾಗವಹಿಸುವಿಕೆ ಇನ್ನೂ ಅನಿಶ್ಚಿತವಾಗಿದೆ ಎನ್ನಲಾಗಿದೆ.
ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಿರಿಯರ ತಂಡದ ಆಯ್ಕೆ ಸಮಿತಿಯು ಗುರುವಾರ, ಫೆಬ್ರವರಿ 8ರಂದು ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಪಂದ್ಯಗಳಿಗೆ ಭಾರತ ತಂಡವನ್ನು ಪ್ರಕಟಿಸಲು ವಾಸ್ತವಿಕವಾಗಿ ಸಭೆ ಸೇರುವ ಸಾಧ್ಯತೆಯಿದೆ.

ಇತ್ತೀಚೆಗೆ, ಬಿಸಿಸಿಐ ಅಧಿಕಾರಿಯೊಬ್ಬರು ವಿರಾಟ್ ಕೊಹ್ಲಿಯನ್ನು ಸದ್ಯ ತಂಡಕ್ಕೆ ಸೇರಿಸಿಕೊಳ್ಳುವುದಿಲ್ಲ ಮತ್ತು ಅವರು ತಮ್ಮ ಲಭ್ಯತೆಯನ್ನು ಖಚಿತಪಡಿಸಿದಾಗ ಅವರನ್ನು ಸೇರಿಸಲಾಗುವುದು ಎಂದು ಬಹಿರಂಗಪಡಿಸಿದರು.
"ಭಾರತ ತಂಡಕ್ಕೆ ಯಾವಾಗ ಪುನರಾಗಮನ ಮಾಡಬೇಕೆಂದು ವಿರಾಟ್ ಕೊಹ್ಲಿ ನಿರ್ಧರಿಸುತ್ತಾರೆ. ಅವರು ಇಲ್ಲಿಯವರೆಗೆ ನಮಗೆ ಏನನ್ನೂ ತಿಳಿಸಿಲ್ಲ, ಆದರೆ ಅವರು ಆಡಲು ನಿರ್ಧರಿಸಿದರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗುವುದು," ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ದೇಶವನ್ನು ಪ್ರತಿನಿಧಿಸುವುದು ವಿರಾಟ್ ಕೊಹ್ಲಿಯ ಪ್ರಮುಖ ಆದ್ಯತೆಯಾಗಿದೆ. ಆದರೆ ಕೆಲವು ಪರಿಸ್ಥಿತಿಯಲ್ಲಿ ಅವರ ಕುಟುಂಬದೊಂದಿಗೆ ಅವರ ಉಪಸ್ಥಿತಿಯ ಅಗತ್ಯವಿದೆ ಎಂದು ಬಿಸಿಸಿಐ ಅಧಿಕಾರಿ ಬಹಿರಂಗಪಡಿಸಿದ್ದಾರೆ.
"ದೇಶವನ್ನು ಪ್ರತಿನಿಧಿಸುವುದು ಯಾವಾಗಲೂ ವಿರಾಟ್ ಕೊಹ್ಲಿ ಪ್ರಮುಖ ಆದ್ಯತೆಯಾಗಿದೆ. ಆದರೆ ಕೆಲವು ಸನ್ನಿವೇಶಗಳು ವೈಯಕ್ತಿಕವಾಗಿ ಅವರ ಉಪಸ್ಥಿತಿ ಮತ್ತು ಅವಿಭಜಿತ ಗಮನವನ್ನು ಬಯಸುತ್ತವೆ. ಬಿಸಿಸಿಐ ಅವರ ನಿರ್ಧಾರವನ್ನು ಗೌರವಿಸುತ್ತದೆ ಮತ್ತು ಮಂಡಳಿ ಮತ್ತು ತಂಡದ ಮ್ಯಾನೇಜ್ಮೆಂಟ್ ಸ್ಟಾರ್ ಬ್ಯಾಟರ್ಗೆ ತನ್ನ ಬೆಂಬಲವನ್ನು ನೀಡಿದೆ," ಎಂದು ಹೇಳಿದರು.
ಭಾರತ ತಂಡದಿಂದ ಗೈರುಹಾಜರಿಯ ಹಿಂದಿನ ಕಾರಣದ ಬಗ್ಗೆ ವಿರಾಟ್ ಕೊಹ್ಲಿ ಮತ್ತು ಅವರ ಕುಟುಂಬ ಮೌನವಾಗಿದ್ದರೂ, ಅವರ ಆಪ್ತ ಸ್ನೇಹಿತ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಸ್ಟಾರ್ ಬ್ಯಾಟರ್ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಬಹಿರಂಗಪಡಿಸಿದರು.
ಇದೇ ವೇಳೆ, ಇಂಗ್ಲೆಂಡ್ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದಲ್ಲಿ ಆಯ್ಕೆಯಾಗುವ ಆಟಗಾರರನ್ನು ಫೆಬ್ರವರಿ 11ರಂದು ರಾಜ್ಕೋಟ್ನಲ್ಲಿ ವರದಿ ಮಾಡಲು ತಿಳಿಸಲಾಗಿದೆ.
ಟೀಮ್ ಇಂಡಿಯಾಕ್ಕೆ ಮತ್ತೊಂದು ಸಿಹಿ ಸುದ್ದಿಯೆಂದರೆ, ಗಾಯಾಳು ಆಟಗಾರರಾದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅವರು ಫೆಬ್ರವರಿ 15ರ ಗುರುವಾರದಿಂದ ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಪ್ರಾರಂಭವಾಗುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಪುನರಾಗಮನ ಮಾಡುವ ನಿರೀಕ್ಷೆಯಿದೆ.
ಗಮನಾರ್ಹವಾಗಿ, ಹೈದರಾಬಾದ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ 4ನೇ ದಿನದಂದು ತವೀಂದ್ರ ಜಡೇಜಾ ಮಂಡಿರಜ್ಜು ಗಾಯಕ್ಕೆ ಒಳಗಾದರೆ, ಕೆಎಲ್ ರಾಹುಲ್ ಬಲ ಕ್ವಾಡ್ರೈಸ್ಪ್ ನೋವಿನ ಕುರಿತು ದೂರು ನೀಡಿದ್ದರು.
ಇಬ್ಬರೂ ತಕ್ಷಣವೇ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ) ವರದಿ ಮಾಡಿದ್ದಾರೆ ಮತ್ತು ಅಂದಿನಿಂದ ಉತ್ತಮ ಪ್ರಗತಿ ಸಾಧಿಸಿದ್ದಾರೆ.