ಇತ್ತೀಚೆಗಷ್ಟೇ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತ ತಂಡ ಸೋಲುಂಡಿತ್ತು. ಇದಾದ ನಂತರ ಭಾರತ ತಂಡ ಟೀಕೆಗಳಿಗೆ ಗುರಿಯಾಗಿತ್ತು. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಭಾರತ ತಂಡದ ಸತತ ಸೋಲಿನ ನಂತರ ಆಟಗಾರರಿಗೆ ಹಲವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ.
ವರದಿಗಳ ಪ್ರಕಾರ, ಟೀಮ್ ಇಂಡಿಯಾ ಆಟಗಾರರು ಕುಟುಂಬದೊಂದಿಗೆ ಕಳೆಯುವ ಸಮಯವನ್ನು ಕಡಿಮೆ ಮಾಡಲು ಸಂಪೂರ್ಣವಾಗಿ ಸಿದ್ಧವಾಗಿದೆ. ಒಂದೂವರೆ ತಿಂಗಳಿಗಿಂತ ಹೆಚ್ಚು ಅವಧಿಯ ಪ್ರವಾಸಗಳಲ್ಲಿ 2 ವಾರಗಳಿಗಿಂತ ಹೆಚ್ಚು ಕಾಲ ಆಟಗಾರರೊಂದಿಗೆ ಪತ್ನಿಯರು ಮತ್ತು ಕುಟುಂಬ ಸದಸ್ಯರು ಪ್ರಯಾಣಿಸುವುದಕ್ಕೆ ಬಿಸಿಸಿಐ ಬ್ರೇಕ್ ಹಾಕಿದೆ. ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಸಮ್ಮುಖದಲ್ಲಿ ಬಿಸಿಸಿಐ ಶನಿವಾರ ನಡೆಸಿದ ಪರಿಶೀಲನಾ ಸಭೆಯಲ್ಲಿ ನಿಯಮಗಳನ್ನು ಜಾರಿಗೊಳಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, ವಿದೇಶಿ ಪ್ರವಾದ ವೇಳೆ 45 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಟೂರ್ನಿಗಳು ನಡೆದರೆ ಆಟಗಾರರು ಕುಟುಂಬಸ್ಥರೊಂದಿಗೆ 14 ದಿನಗಳವರೆಗೆ ಮಾತ್ರ ಇರಲು ಅವಕಾಶವಿದೆ. ಪ್ರವಾಸದ ಅವಧಿಯು ಇದಕ್ಕಿಂತ ಕಡಿಮೆಯಿದ್ದರೆ, ಆಟಗಾರರು ತಮ್ಮ ಪತ್ನಿ ಮತ್ತು ಕುಟುಂಬ ಸದಸ್ಯರೊಂದಿಗೆ ಇರಲು ಸಮಯವನ್ನು ಒಂದು ವಾರ ಕಡಿಮೆ ಮಾಡಬಹುದು. ಇಡೀ ಟೂರ್ನಿಯಲ್ಲಿ ಪತ್ನಿಯರು ಆಟಗಾರರೊಂದಿಗೆ ಇರುವಂತಿಲ್ಲ.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 1-3 ಅಂತರದಿಂದ ಭಾರತ ತಂಡದ ಸೋತಿತ್ತು. ಈ ಸೋಲಿನ ನಂತರ ಬಿಸಿಸಿಐ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೊಳಿಸಿದೆ. ಸರಣಿಯ ಸಮಯದಲ್ಲಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ವರದಿಗಳಾಗಿದ್ದವು. ಇದರ ಮಧ್ಯೆ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದರು. ಅಲ್ಲದೆ, ಸರಣಿಯ ಕೊನೆ ಟೆಸ್ಟ್ ಪಂದ್ಯದಿಂದ ನಾಯಕ ರೋಹಿತ್ ಶರ್ಮಾ ಅವರನ್ನು ಹೊರಗಿಟ್ಟಿರುವುದು ಕೂಡ ಚರ್ಚೆ ಆಗಿತ್ತು.
ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಅವರು ತಮ್ಮ ಕುಟುಂಬದೊಂದಿಗೆ ಪ್ರತ್ಯೇಕವಾಗಿ ಪ್ರಯಾಣಿಸುತ್ತಿದ್ದರೆ, ತಂಡದ ಉಳಿದ ಸದಸ್ಯರು ಆಸ್ಟ್ರೇಲಿಯಾದಲ್ಲಿ ತಂಡದ ಬಸ್ನಲ್ಲಿ ಪ್ರತ್ಯೇಕವಾಗಿ ಪ್ರಯಾಣಿಸಿದ್ದರು. ಇದೀಗ ಹೊಸ ನಿಯಮಗಳ ಪ್ರಕಾರ, ಯಾವುದೇ ಆಟಗಾರರು ಪ್ರತ್ಯೇಕವಾಗಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ತಂಡದ ಬಸ್ ಮೂಲಕ ಮಾತ್ರ ಎಲ್ಲಾ ಆಟಗಾರರು ಒಟ್ಟಿಗೆ ಪ್ರಯಾಣಿಸಬೇಕಾಗಿದೆ.
ಟೀಮ್ ಇಂಡಿಯಾ ಹೆಡ್ಕೋಚ್ ಗೌತಮ್ ಗಂಭೀರ್ ಅವರಿಗೂ ಸಂಬಂಧಿಸಿದ ಕೆಲವು ಕ್ರಮಗಳನ್ನು ಜಾರಿಗೊಳಿಸಲಾಗಿದೆ. ಗೌತಮ್ ಗಂಭೀರ್ ವಿಐಪಿ ಬಾಕ್ಸ್ನಲ್ಲಿ ಕುಳಿತುಕೊಳ್ಳುವಂತಿಲ್ಲ. ಇದಲ್ಲದೆ, ಟೀಮ್ ಇಂಡಿಯಾ ಆಟಗಾರನ ಲಗೇಜ್ 150 ಕೆಜಿ ಮಿತಿಯನ್ನು ಮೀರಿದರೆ, ಅವರೇ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬಿಸಿಸಿಐ ಅವುಗಳನ್ನು ಭರಿಸುವುದಿಲ್ಲ.