ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿ ಮುಗಿದಿದೆ. ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡಿ ಸೋಲು ಕಂಡಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಪಡೆ ಒಂದೆ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಸರಣಿಯ ಸೋಲಿನ ಬಳಿಕ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಈ ಸೋಲಿನ ಬಳಿಕ ಬಿಸಿಸಿಐ ಕೋಚ್ ಜೊತೆ ಚರ್ಚೆ ನಡೆಸುವುದಾಗಿ ತಿಳಿಸಿತ್ತು.
ನ್ಯೂಜಿಲೆಂಡ್ನಲ್ಲಿ ಟೀಮ್ ಇಂಡಿಯಾ ಸೋತ ಬೆನ್ನಲ್ಲೆ ಬಿಸಿಸಿಐ ಸಭೆಯನ್ನು ಕರೆದಿದೆ. ಬಿಸಿಸಿಐ ಟೀಂ ಇಂಡಿಯಾ ಸೋಲಿನ ಬಗ್ಗೆ ಚರ್ಚಿಸಲು ಸಭೆ ಕರೆದಿತ್ತು. ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕೋಚ್ ಗೌತಮ್ ಗಂಭೀರ್, ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮಾ ಭಾಗವಹಿಸಿದ್ದರು.

ವರದಿಗಳ ಪ್ರಕಾರ ಮುಂಬೈನ ಬಿಸಿಸಿಐ ಕಚೇರಿಯಲ್ಲಿ ಈ ಸಭೆಯನ್ನು ನಡೆಸಲಾಗಿದೆ. ಈ ಸಭೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೋಲು, ಮುಂದಿನ ರೂಪು ರೇಷೆ ಬಗ್ಗೆ ಚರ್ಚೆಯನ್ನು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಲಿದೆ. ಈ ವೇಳೆ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಸರಣಿಯ ಸಿದ್ಧತೆ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಸಭೆ ಸುಮಾರು 6 ಗಂಟೆಗಳ ಕಾಲ ನಡೆದಿದೆ ಎಂದು ತಿಳಿದು ಬಂದಿದೆ.
ಬಿಸಿಸಿಐ ಹಾಗೂ ಕೋಚ್, ನಾಯಕ, ಆಯ್ಕೆದಾರರ ನಡುವಿನ ಸಭೆಯ ಮಾಹಿತಿ ಹೊರ ಬಂದಿಲ್ಲ. ಆದರೆ, ಕೆಲವೊಂದು ಅಸಮಾಧಾನಗಳು ಇರುವುದಾಗಿ ತಿಳಿದು ಬಂದಿದೆ. ಜಸ್ಪ್ರಿತ್ ಬುಮ್ರಾ ಮುಂಬೈ ಟೆಸ್ಟ್ನಲ್ಲಿ ಆಡದಿರಲು ಕಾರಣ ಏನು ಎಂಬ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗಿದೆ.
ಯಾರ್ಕರ್ ಸ್ಪೇಷಲಿಸ್ಟ್ ಬುಮ್ರಾ ಅವರನ್ನು ತಂಡದಿಂದ ಕೈ ಬಿಡುವ ಬಗ್ಗೆ ಆಯ್ಕೆದಾರರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಹೆಡ್ ಕೋಚ್ ಅವರಿಂದ ಬುಮ್ರಾ ಅವರನ್ನು ಮುಂಬೈ ಟೆಸ್ಟ್ನಿಂದ ಹೊರಗಿರಿಸುವ ಸೂಚನೆ ಸಿಕ್ಕಿತ್ತು. ಇದಾದ ಬಳಿಕ ಬಿಸಿಸಿಐನಿಂದ ಬುಮ್ರಾ ಅವರಲ್ಲಿ ಜ್ವರ ಕಾಣಿಸಿಕೊಂಡ ಬಗ್ಗೆ ಮಾಹಿತಿ ನೀಡಲಾಯಿತು. ಬುಮ್ರಾ ಅವರು ಜ್ವರದಿಂದ ಚೇತರಿಸಿಕೊಂಡಿರಲಿಲ್ಲ. ಹೀಗಾಗಿ ಮೂರನೇ ಟೆಸ್ಟ್ಗೆ ಬುಮ್ರಾ ಬದಲಿಗೆ ಮೊಹಮ್ಮದ್ ಸಿರಾಜ್ ಅವರಿಗೆ ಅವಕಾಶ ನೀಡಲಾಯಿತು.
ಇನ್ನು ಈ ಸಭೆಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಬೆಳೆಸಲಿರುವ ಟೀಮ್ ಇಂಡಿಯಾ ತಂಡದ ಬಗ್ಗೆ ಸಹಮತ ಇಲ್ಲದಿರುವುದು ತಿಳಿದು ಬಂದಿದೆ. ನಿತೀಶ್ ರೆಡ್ಡೆ ಹಾಗೂ 10 ರಣಜಿ ಪಂದ್ಯಗಳನ್ನು ಆಡಿರುವ ಹರ್ಷಿತ್ ರಾಣಾ ಅವರ ಆಯ್ಕೆ ಎಲ್ಲರಲ್ಲೂ ಸಮ್ಮತಿ ಇಲ್ಲದಿರುವುದು ತಿಳಿದು ಬಂದಿದೆ.
ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾ ಕಠಿಣ ಸವಾಲನ್ನು ಎದುರಿಸಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಉಭಯ ತಂಡಗಳ ನಡುವಿನ ಮೊದಲ ಪಂದ್ಯ ನವೆಂಬರ್ 22 ರಂದು ನಡೆಯಲಿದೆ.