ಬೆಂಗಳೂರು ನಗರ ಇಷ್ಟು ದಿನಗಳ ಕಾಲ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ. ಆದರೆ ನಗರದಲ್ಲಿ ಕಾಲ್ತುಳಿತ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ನಡೆದಿರಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಹದಮಾಬಾದ್ನಲ್ಲಿ ನಡೆದ ಐಪಿಎಲ್ ಫೈನಲ್ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. 18 ವರ್ಷಗಳಲ್ಲಿ ಆಗದ ಸಾಧನೆಯನ್ನು ತಮ್ಮ ತಂಡ ಮಾಡಿ ಬಿಟ್ಟಿದೆ ಎಂಬ ಸಮಾಧಾನ ಅಭಿಮಾನಿಗಳಲ್ಲಿತ್ತು. ಈ ಜೋಶ್ ಕಾವು ಇದ್ದಾಗಲೇ ಆರ್ಸಿಬಿ ಮ್ಯಾನೇಜ್ಮೆಂಟ್ ವಿಕ್ಟರಿ ಪೆರೆಡ್ ನಡೆಸಲು ತೀರ್ಮಾನಿಸಿತು.
ಬೆಂಗಳೂರಿನಲ್ಲಿ ಆರ್ಸಿಬಿ ಕಪ್ ಗೆಲುವಿನ ಜೋಶ್ ಹೆಚ್ಚಿಸಲು ಆರ್ಸಿಬಿ ವಿಕ್ಟರಿ ಪೆರೆಡ್ ಆಯೋಜಿಸಿತ್ತು. ಈ ಪೆರೆಡ್ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲು ತೀರ್ಮಾನಿಸಲಾಗಿತ್ತು. ಈ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಆಗ ನೂಕುನುಗ್ಗಲು ಆಗಿ 11 ಜನರು ಸಾವನ್ನಪ್ಪಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸೊಮೋಟೊ ಕೇಸ್ ದಾಖಲಿಸಿಕೊಂಡಿದೆ. ಅಲ್ಲದೆ ಆರ್ಸಿಬಿ, ಕೆಎಸ್ಸಿಎ, ಇವೆಂಟ್ ಮ್ಯಾನೇಜ್ಮೆಂಟ್ ಡಿಎನ್ಎ ವಿರುದ್ಧ ದೂರು ದಾಖಲಿಸಲಾಯಿತು. ಇಷ್ಟೆಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಈಗ ಕಾರ್ಯಪ್ರವೃತವಾಗಿದೆ. ಬಿಸಿಸಿಐ ಈಗ ಆಕ್ಷನ್ ಮೂಡ್ನಲ್ಲಿ ಕಾಣಿಸಿಕೊಂಡಿದೆ.

ಸಂಭ್ರಮಾಚರಣೆ ಭವಿಷ್ಯದಲ್ಲಿ ನಡೆದರೆ, ಇಂತಹ ಕಾರ್ಯಕ್ರಮವನ್ನು ನಿಯಂತ್ರಿಸಲು ಬಿಸಿಸಿಐ ಔಪಚಾರಿಕ ಮಾರ್ಗಸೂಚಿಗಳನ್ನು ತರಲು ಪರಿಗಣನೆ ನಡೆಸುತ್ತಿದೆ. ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಕ್ರಿಕ್ಬಜ್ ಜೊತೆ ಮಾತನಾಡಿದ್ದಾರೆ. ಇಂತಹ ಮಾರ್ಗಸೂಚಿಗಳಿಗೆ ಕಡಿವಾಣ ಹಾಕಲು ಬಿಸಿಸಿಐ ಕಾರ್ಯ ಸೂಚಿಗಳನ್ನು ಕೈಗೊಳ್ಳುವ ಅಗತ್ಯ ಇದೆ. ನಾವು ಇಂತಹ ಘಟನೆಗಳು ನಡೆದಾಗ ನೋಡಿ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಘಟನೆಗಳು ನಡೆದ ನಂತರ ಇಂತಹ ಘಟನೆಗಳನ್ನು ತಡೆಯುವುದು ಹೇಗೆ ಎಂಬ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಈಗಾಗಲೇ ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದೆ. ಅಲ್ಲದೆ ಅರ್ಸಿಬಿ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸ್ಲೆ ಅವರನ್ನು ಬಂಧಿಸಿದೆ. ಇನ್ನು ಇಂತಹ ಘಟನೆಗಳ ವಿರುದ್ಧ ಜನರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಇಂತಹ ಘಟನೆಗಳು ಮುಂದೆ ಭವಿಷ್ಯದಲ್ಲಿ ನಡೆಯದಿರುವಂತೆ ತಡೆಯಲು ಬಿಸಿಸಿಐ ಒಂದು ವ್ಯವಸ್ಥೆಯನ್ನು ರಚಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಆದರೆ ಈ ವ್ಯವಸ್ಥೆ ಹೇಗಿರಲಿದೆ, ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಬಗ್ಗೆ ಇನ್ನು ಮಾಹಿತಿ ಇಲ್ಲ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಹಾಗೂ ಶೀಘ್ರದಲ್ಲಿ ಈ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು ಎಂದು ತಿಳಿದುಬಂದಿದೆ. ಇದೇ ಘಟನೆಗ ಬಗ್ಗೆ ಟೀಮ್ ಇಂಡಿಯಾದ ಬಗ್ಗೆ ಮುಖ್ಯ ಕೋಚ್ ಗೌತಮ್ ಗಂಭೀರ್ ಸಹ ಈ ವಿಜಯೋತ್ಸವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಗಂಭೀರ್, ಇಂತಹ ರೋಡ್ ಶೋಗಳನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.