ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ದೆಹಲಿ ಹೈಕೋರ್ಟ್ಗೆ ಕೊರೊನಾ ವೈರಸ್ನ ಹೆಚ್ಚಳದ ಕಾರಣದಿಂದಾಗಿ ಐಪಿಎಲ್ 2021 ಆವೃತ್ತಿಯನ್ನು ಅನಿಷ್ಟಾವಧಿಗೆ ಮುಂದೂಡಿರುವ ಮಾಹಿತಿಯನ್ನು ಬುಧವಾರ ಅಧಿಕೃತವಾಗಿ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಟೂರ್ನಿ ಆಯೋಜನೆಯ ವಿರುದ್ಧವಾಗಿ ಬಂದಿದ್ದ ಹಿನ್ನೆಲೆಯಲ್ಲಿ ಬಿಸಿಸಿಐ ಹೈಕೋರ್ಟ್ಗೆ ಈ ಮಾಹಿತಿಯನ್ನು ನೀಡಿದೆ.
ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ(ಪಿಐಎಲ್) ವಿಚಾರಣೆಯ ಸಂದರ್ಭದಲ್ಲಿ ಬಿಸಿಸಿಐ ಬುಧವಾರ ಈ ಮಾಹಿತಿಯನ್ನು ಕೋರ್ಟ್ಗೆ ಸಲ್ಲಿಸಿದೆ. ಸಾರ್ವಜನಿಕ ಆರೋಗ್ಯಕ್ಕಿಂತಲೂ ಐಪಿಎಲ್ಗೆ ಯಾವ ಕಾರಣಕ್ಕಾಗಿ ಆದ್ಯತೆ ನೀಡಲಾಗುತ್ತಿದೆ ಎಂಬ ಬಗ್ಗೆ ವಿಚಾರಣೆಯನ್ನು ನಡೆಸಲಾಗಿದೆ.
ಡಿ ವಿಲಿಯರ್ಸ್, ಕೊಹ್ಲಿ ಜೊತೆ ಆಡುವ ಮೊದಲು ಅಂಜಿಕೊಂಡಿದ್ದೆ: ರಜತ್
ಬಿಸಿಸಿಐ ಪರ ವಕೀಲ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಲ್ಲಿಸಿದ ದಾಖಲೆಗಳನ್ನು ಸ್ವೀಕರಿಸಿದ ನಂತರ, ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ನ್ಯಾಯಪೀಠವು ಈ ವಿಚಾರಣೆಯನ್ನು ಮೇ 19 ಕ್ಕೆ ಮುಂದೂಡಿದೆ.
ಕೊರೊನಾ ವೈರಸ್ನ ಭೀಕರ ಪರಿಸ್ಥಿತಿಯ ಸಂದರ್ಭದಲ್ಲಿ ದೆಹಲಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸುತ್ತಿರುವ ಬಗ್ಗೆ ವಕೀಲ ಕರಣ್ ಸಿಂಗ್ ಠಾಕೂರ್ ಹಾಗೂ ಸಾಮಾಜಿಕ ಕಾರ್ಯಕರ್ತ ಇಂದರ್ ಮೋಹನ್ ಸಿಂಗ್ ಎಂಬವರು ದೆಹಲಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.