ದೇಶದಲ್ಲಿ ಕ್ರಿಕೆಟ್ ಬೆಳೆಸಲು ಬಿಸಿಸಿಐ ಹಲವು ಯೋಜನೆಗಳನ್ನು ಹಮ್ಮಿಕೊಂಡಿದೆ. ಇದರಿಂದ ದೇಶದಲ್ಲಿ ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಅಂದು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಕ್ರಿಕೆಟ್ ಆಟಗಾರರ ಬದುಕು ಈಗ ಬದಲಾಗಿದೆ. ಆಟಗಾರರ ಆರ್ಥಿಕ ಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇದರಿಂದ ಆಟಗಾರರ ಗುರುತಿಸುವಿಕೆ ಹಾಗೂ ನೆರವು ಸಹ ಸಿಗಲಿದೆ.
ದೇಶೀಯ ಟೂರ್ನಿಗಳಲ್ಲೂ ಬಿಸಿಸಿಐ ಕ್ರೀಡಾ ಪಟುಗಳು ಪ್ರೋತ್ಸಾಹಕ್ಕೆ ಮಣೆ ಹಾಕಿದೆ. ಈ ಸಂಬಂಧ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಬಿಸಿಸಿಐ ಅಪೆಕ್ಸ್ ಕೌನ್ಸಿಲ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಆ ಬಗ್ಗೆ ವರದಿ ಇಲ್ಲಿದೆ.

2 ಪುರುಷರ ಪಂದ್ಯಾವಳಿಗಳ ಜೊತೆಗೆ ಎಲ್ಲಾ ಮಹಿಳಾ ಟೂರ್ನಿಗಳು ಮತ್ತು ಜೂನಿಯರ್ ಕ್ರಿಕೆಟ್ನಲ್ಲಿ ಪಂದ್ಯ ಶ್ರೇಷ್ಠ ಮತ್ತ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪರಿಚಯಿಸಲಾಗುತ್ತದೆ. ಜೂನಿಯರ್ ಕ್ರಿಕೆಟ್ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ ಮತ್ತು ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಅನ್ನು ಪರಿಚಯಿಸುವ ನಿರ್ಧಾರವನ್ನು ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಪುರುಷರ ಟೂರ್ನಮೆಂಟ್ ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯಲ್ಲಿ ಬಿಸಿಸಿಐ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನೂ ನೀಡಲು ತೀರ್ಮಾನಿಸಿದೆ. ಅಲ್ಲದೆ ಈ ಎರಡೂ ಟೂರ್ನಿಗಳಿಗೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಸಹ ನೀಡಲು ಬಿಸಿಸಿಐ ಮುಂದಾಗಿದೆ.
ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಆಟಗಾರರನ್ನು ಗುರುತಿಸುವುದು ಇದರ ಉದ್ದೇಶವಾಗಿದೆ. ಇದರಿಂದ ಕ್ರಿಕೆಟ್ ಆಟಗಾರರಿಗೆ ಲಾಭವಾಗುತ್ತದೆ. ಮಹಿಳಾ ಹಾಗೂ ಪುರುಷ ಟೂರ್ನಿಗಳಲ್ಲಿ ಬಹುಮಾನದ ರೂಪದಲ್ಲಿ ನಗದು ಹಣವನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಮೊದಲು ದೇಶೀಯ ಟೂರ್ನಿಗಳಾದ ರಣಜಿ ಟ್ರೋಫಿ ಹಾಗೂ ದುಲೀಪ್ ಟ್ರೋಫಿಯಲ್ಲಿ ಮಾತ್ರ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಲಾಗುತ್ತಿತ್ತು. ಈ ಪ್ರಶಸ್ತಿ ಒಂದು ಲಕ್ಷ ನಗದು ಹಣವನ್ನು ಒಳಗೊಂಡಿತ್ತು.
ಬಿಸಿಸಿಐ ಹಲವು ವಯೋಮಿತಿಗಳ ಅಡಿಯಲ್ಲಿ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತದೆ. ಅಂಡರ್-16ರಲ್ಲಿ ವಿಜಯ್ ಮರ್ಚೆಂಟ್ ಟ್ರೋಫಿ, ಅಂಡರ್-19ರಲ್ಲಿ ಕೂಚ್ ಬೆಹಾರ್ ಟ್ರೋಫಿ ಮತ್ತು ಜೂನಿಯರ್ ಮಟ್ಟದಲ್ಲಿ ಅಂಡರ್-23 ಪಂದ್ಯಾವಳಿಗಳಲ್ಲಿ ಸಿಕೆ ನಾಯುಡು ಟ್ರೋಫಿಯನ್ನು ಆಯೋಜಿಸುತ್ತದೆ. ಮಹಿಳೆಯರಿಗಾಗಿ ಅಂಡರ್-15, ಅಂಡರ್-19 ಮತ್ತು ಅಂಡರ್-23 ಪಂದ್ಯಾವಳಿ ನಡೆಯುತ್ತವೆ.