ದೇವಜಿತ್ ಸೈಕಿಯಾ ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ ಅವರ ಸ್ಥಾನದಲ್ಲಿ ಹೊಸ ಜಂಟಿ ಕಾರ್ಯದರ್ಶಿಯನ್ನು ನೇಮಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾರ್ಚ್ 1 ರಂದು ಮುಂಬೈನಲ್ಲಿ ವಿಶೇಷ ಸಾಮಾನ್ಯ ಸಭೆ (ಎಸ್ಜಿಎಂ) ಕರೆದಿದೆ. ಕಳೆದ ತಿಂಗಳು ಜಯ್ ಶಾ ಅವರಿಂದ ತೆರವಾದ ಕಾರ್ಯದರ್ಶಿ ಸ್ಥಾನಕ್ಕೆ ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ (ಎಸಿಎ)ನ ಸೈಕಿಯಾ ನೇಮಕಗೊಂಡಿದ್ದರು. ಡಿಸೆಂಬರ್ 1 ರಂದು ಜಯ್ ಶಾ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಬಿಸಿಸಿಐ ರಾಜ್ಯ ಸಂಘಗಳಿಗೆ ಎಸ್ಜಿಎಂಗಾಗಿ ಕಳುಹಿಸಲಾದ ನೋಟಿಸ್ನಲ್ಲಿ, ಜಂಟಿ ಕಾರ್ಯದರ್ಶಿಯನ್ನು ನೇಮಿಸುವುದು ಒಂದೇ ಕಾರ್ಯಸೂಚಿಯಾಗಿದೆ.
ಬಿಸಿಸಿಐ ಜಂಟಿ ಕಾರ್ಯದರ್ಶಿ ಚುನಾವಣೆ ಮತ್ತು ನೇಮಕಾತಿಗಾಗಿ ಮಾರ್ಚ್ 1, 2025 ರಂದು ಮಧ್ಯಾಹ್ನ 12:00 ಗಂಟೆಗೆ ಮುಂಬೈನಲ್ಲಿರುವ ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಬಿಸಿಸಿಐನ ವಿಶೇಷ ಸಾಮಾನ್ಯ ಸಭೆಗೆ ನೋಟಿಸ್ ನೀಡಲಾಗಿದೆ' ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಬಂಗಾಳ ಕ್ರಿಕೆಟ್ ಸಂಸ್ಥೆಯ (ಸಿಎಬಿ) ಮಾಜಿ ಅಧ್ಯಕ್ಷ ಅಭಿಷೇಕ್ ದಾಲ್ಮಿಯಾ (ಪೂರ್ವ ವಲಯ), ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಮುಖ್ಯಸ್ಥ ರೋಹನ್ ಜೇಟ್ಲಿ (ಉತ್ತರ ವಲಯ) ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆಯ (ಎಂಸಿಎ) ಸಂಜಯ್ ನಾಯಕ್ (ಪಶ್ಚಿಮ ವಲಯ) ಅವರ ಹೆಸರುಗಳು ಈ ಹುದ್ದೆಗೆ ಚರ್ಚೆಯಲ್ಲಿವೆ. ಬಿಸಿಸಿಐ ಕಾರ್ಯದರ್ಶಿ ಮತ್ತು ಖಜಾಂಚಿ ಹುದ್ದೆಯಂತೆ, ಮಂಡಳಿಯ ಹೊಸ ಜಂಟಿ ಕಾರ್ಯದರ್ಶಿಯನ್ನು ಆಯ್ಕೆ ಮಾಡಲು ಯಾವುದೇ ಚುನಾವಣೆ ಇರುವುದಿಲ್ಲ.
ನಿಯಮಗಳ ಪ್ರಕಾರ, ಎಸ್ಜಿಎಂ ಕರೆಯಲು 21 ದಿನಗಳ ನೋಟಿಸ್ ಅಗತ್ಯವಿದೆ. ಬಿಸಿಸಿಐ ಈ ಷರತ್ತನ್ನು ಪಾಲಿಸಿದೆ. ಇದಕ್ಕೂ ಮೊದಲು, ಜನವರಿ 12 ರಂದು, ಬಿಸಿಸಿಐ ವಾರ್ಷಿಕ ಮಹಾಸಭೆಯನ್ನು ಕರೆದಿತ್ತು. ಇದರಲ್ಲಿ ದೇವಜಿತ್ ಸೈಕಿಯಾ ಅವರನ್ನು ಹೊಸ ಕಾರ್ಯದರ್ಶಿಯಾಗಿ ಮತ್ತು ಪ್ರಭತೇಜ್ ಸಿಂಗ್ ಭಾಟಿಯಾ ಅವರನ್ನು ಹೊಸ ಖಜಾಂಚಿಯಾಗಿ ಆಯ್ಕೆ ಮಾಡಲಾಯಿತು. ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದರು.