ಕ್ರಿಕೆಟ್ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಆಟಗಾರರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಭಾನುವಾರ ಗೌರವಿಸಲಿದೆ. ಈ ಪ್ರಶಸ್ತಿ ಸಮಾರಂಭ ಮಾರ್ಚ್ 15 ರಂದು ನವದೆಹಲಿಯಲ್ಲಿ ನಡೆಯಲಿದೆ. ಬಿಸಿಸಿಐ ಈ ಪ್ರಶಸ್ತಿಗಳನ್ನು ವಿವಿಧ ವಿಭಾಗಗಳಲ್ಲಿ ಸಕ್ರಿಯ ಆಟಗಾರರು, ನಿವೃತ್ತ ಹೊಂದಿದ ಆಟಗಾರರಿಗೆ ಬಿಸಿಸಿಐ ಗೌರವ ಸೂಚಿಸಲಿದೆ.
ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಟಿ20 ವಿಶ್ವಕಪ್ ತಂಡದ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಕರ್ನಲ್ ಸಿ.ಕೆ. ನಾಯುಡು 'ಜೀವಮಾನ ಸಾಧನೆ ಪ್ರಶಸ್ತಿ' ನೀಡಲಾಗುವುದು. ಇದು ಬಿಸಿಸಿಐ ನೀಡುವ ಅತ್ಯುನ್ನತ ಗೌರವ ಇದಾಗಿದೆ. ಇವರೊಂದಿಗೆ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಅವರಿಗೂ ಇದೇ ಗೌರವ ನೀಡಲು ನಿರ್ಧರಿಸಲಾಗಿದೆ. ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಮಿಥಾಲಿ ರಾಜ್ ಅವರಿಗೆ ಮಹಿಳಾ ವಿಭಾಗದಲ್ಲಿ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಭಾರತೀಯ ಟೆಸ್ಟ್ ಮತ್ತು ಏಕದಿನ ನಾಯಕ ಶುಭ್ಮನ್ ಗಿಲ್ಗೆ ಪಾಲಿ ಉಮ್ರಿಗರ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಯನ್ನು ಗಿಲ್ ಸತತ ಎರಡನೇ ಬಾರಿಗೆ ಪಡೆಯುತ್ತಿದ್ದಾರೆ. ಮಹಿಳಾ ವಿಭಾಗದಲ್ಲಿ ಸ್ಮೃತಿ ಮಂಧಾನಾ ಅವರು ಅತ್ಯುತ್ತಮ ಅಂತರರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆಯಲಿದ್ದಾರೆ.
ಕರ್ನಾಟಕದ ಇಬ್ಬರು ಆಟಗಾರರಿಗೆ ಗೌರವ ಸಂದಿದೆ. ಅದರಲ್ಲಿ ಒಬ್ಬರಾದ ಮ್ಯಾಕ್ನೀಲ್ ಎಚ್.ಎನ್ ಸಿ.ಕೆ. ನಾಯುಡು ಟ್ರೋಫಿ ಅತಿ ಹೆಚ್ಚು ರನ್ ಬಾರಿಸಿದ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಕರ್ನಾಟಕದ ಜೆ ಸುಚಿತ್ ಸದ್ಯ ನಾಗಾಲ್ಯಾಂಡ್ ಪರ ರಣಜಿ ಆಡುತ್ತಿದ್ದು ಇವರಿಗೂ ಮಾಧವರಾವ್ ಸಿಂಧಿಯಾ ಪ್ರಶಸ್ತಿ ಸಂದಿದೆ.