
ನವದೆಹಲಿ, ಸೆಪ್ಟೆಂಬರ್ 25: ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಜಿಂಬಾಬ್ವೆ ಬದಲು ಶ್ರೀಲಂಕಾ ತಂಡವನ್ನು ಹೆಸರಿಸಿದೆ. ಈ ಸರಣಿ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದೆ.
ಜಿಂಬಾಬ್ವೆ ರಾಷ್ಟ್ರೀಯ ತಂಡ ಇತ್ತೀಚೆಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ನಿಂದ (ಐಸಿಸಿ) ಅಮಾನತಾಗಿದೆ. ಹೀಗಾಗಿ ಯೋಜಿತ ಟಿ20 ಸರಣಿಗಾಗಿ ಜಿಂಬಾಬ್ವೆ ಬದಲು ಬಿಸಿಸಿಐ ಶ್ರೀಲಂಕಾವನ್ನು ಹೆಸರಿಸಿದೆ. ಮೊದಲ ಟಿ20 ಜನವರಿ 5ರಂದು ಗುವಾಹಟಿಯಲ್ಲಿ ನಡೆಯಲಿದೆ. ಇನ್ನುಳಿದ ಪಂದ್ಯಗಳು ಜನವರಿ 7ರಂದು ಇಂದೋರ್ನಲ್ಲಿ, ಜನವರಿ 10ರಂದು ಪುಣೆಯಲ್ಲಿ ನಡೆಯಲಿದೆ.
'ಐಸಿಸಿಯಿಂದ ಜಿಂಬಾಬ್ವೆ ಸಮಾನತಾಗಿರುವುದರಿಂದ ಮೂರು ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐಯು ಶ್ರೀಲಂಕಾವನ್ನು ಆಹ್ವಾನಿಸಿದೆ. ಶ್ರೀಲಂಕಾ ಕ್ರಿಕೆಟ್ ತಂಡವೂ ತಾವು ಭಾಗವಹಿಸುತ್ತಿರುವುದನ್ನು ಖಾತರಿಪಡಿಸಿದೆ,' ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಜಿಂಬಾಬ್ವೆ ರಾಷ್ಟ್ರೀಯ ತಂಡದ ಆಡಳಿತ ವಿಚಾರದಲ್ಲಿ ಅಲ್ಲಿನ ಸರ್ಕಾರ ಮೂಗು ತೂರಿಸಿದ್ದರಿಂದ ಕಳೆದ ಜುಲೈನಲ್ಲಿ ಐಸಿಸಿ, ಜಿಂಬಾಬ್ವೆ ಕ್ರಿಕೆಟ್ ತಂಡವನ್ನು ಅಮಾನತುಗೊಳಿಸಿತ್ತು. ಹೀಗಾಗಿ ಭಾರತ ಪ್ರವಾಸ ಸರಣಿಯಲ್ಲಿ ಜಿಂಬಾಬ್ವೆ ಪಾಲ್ಗೊಳ್ಳುವ ಸಾಧ್ಯತೆಯಿಲ್ಲ. ಆದ್ದರಿಂದ ಪ್ರವಾಸ ಸರಣಿಯ ಅವಕಾಶ ಲಂಕಾಕ್ಕೆ ಒದಗಿದೆ.