ಏಕದಿನ ವಿಶ್ವಕಪ್ ಪಂದ್ಯಗಳ ವೇಳೆ ಪಟಾಕಿ ಸಿಡಿಸುವುದು ಸಂಭ್ರಮದ ಒಂದು ಭಾಗವಾಗಿದೆ. ಲೈಟ್ ಶೋ, ಸಿಡಿಮದ್ದಿನ ಪ್ರದರ್ಶನ ಸಾಕಷ್ಟು ಗಮನ ಸೆಳೆಯುತ್ತದೆ. ಆದರೆ ಮುಂಬೈ ಮತ್ತು ದೆಹಲಿ ಮಹಾನಗರಗಳಲ್ಲಿ ಈಗಾಗಲೇ ಗಾಳಿಯ ಗುಣಮಟ್ಟ ಕುಸಿದ ಕಾರಣ, ಈ ಎರಡೂ ನಗರಗಳಲ್ಲಿ ಏಕದಿನ ವಿಶ್ವಕಪ್ ಪಂದ್ಯಗಳ ವೇಳೆ ಪಟಾಕಿ ಸಿಡಿಸಿದೇ ಇರಲು ಬಿಸಿಸಿಐ ನಿರ್ಧರಿಸಿದೆ.
ಬಾಂಬೆ ಹೈಕೋರ್ಟ್ ಮುಂಬೈನ ಗಾಳಿಯ ಗುಣಮಟ್ಟವನ್ನು ಗಮನಿಸಿ ಸ್ವಯಂಪ್ರೇರಿತವಾಗಿ ಪ್ರಕ್ರಿಯೆ ಪ್ರಾರಂಭಿಸಿದ ಬಳಿಕ ಬಿಸಿಸಿಐ ಈ ನಿರ್ಧಾರವನ್ನು ತಿಳಿಸಿದೆ.
ಗುರುವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಶ್ರೀಲಂಕಾ ಮುಖಾಮುಖಿಯಾಗಲಿದ್ದು, ಸೋಮವಾರ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಮುಖಾಮುಖಿಯಾಗಲಿವೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಬಗ್ಗೆ ಮಾತನಾಡಿ, "ನಾನು ಈ ವಿಷಯವನ್ನು ಐಸಿಸಿಗೆ ಔಪಚಾರಿಕವಾಗಿ ತಿಳಿಸಲಾಗಿದೆ. ಮುಂಬೈ ಮತ್ತು ದೆಹಲಿಯಲ್ಲಿ ಯಾವುದೇ ಪಟಾಕಿ ಪ್ರದರ್ಶನ ಇರಲ್ಲ, ಪಟಾಕಿ ಸಿಡಿಸುವುದರಿಂದ ಮಾಲಿನ್ಯದ ಮಟ್ಟವನ್ನು ಹೆಚ್ಚಾಗಬಹುದು. ಮಂಡಳಿಯು ಪರಿಸರ ಸಮಸ್ಯೆಗಳನ್ನು ಎದುರಿಸಲು ಬದ್ಧವಾಗಿದೆ" ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮುಂಬೈ ಮತ್ತು ನವದೆಹಲಿ ಎರಡರಲ್ಲೂ ಗಾಳಿಯ ಗುಣಮಟ್ಟದ ಬಗೆಗಿನ ಕಾಳಜಿಯನ್ನು ಬಿಸಿಸಿಐ ಒಪ್ಪಿಕೊಂಡಿದೆ. ಕ್ರಿಕೆಟ್ನ ಸಂಭ್ರಮಾಚರಣೆಗೆ ಸೂಕ್ತವಾದ ರೀತಿಯಲ್ಲಿ ಐಸಿಸಿ ವಿಶ್ವಕಪ್ ಅನ್ನು ಆಯೋಜಿಸಲು ನಾವು ಶ್ರಮಿಸುತ್ತೇವೆ, ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡುಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ದತ್ತಾಂಶದ ಪ್ರಕಾರ, ಮಂಗಳವಾರ ಮುಂಬೈನಲ್ಲಿ ಒಟ್ಟಾರೆ ಎಕ್ಯೂಐ (AQI) ರೀಡಿಂಗ್ 172 (ಮಧ್ಯಮ) ಆಗಿದ್ದು, ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ನಲ್ಲಿ 260 ರ ಆತಂಕಕಾರಿ ಮಟ್ಟವನ್ನು ಮುಟ್ಟಿದೆ. ದೆಹಲಿಯಲ್ಲಿ, ಈ ಅಕ್ಟೋಬರ್ ಗಾಳಿಯ ಗುಣಮಟ್ಟವು 2020 ರಿಂದ ಕೆಟ್ಟದಾಗಿದೆ.
ಮುಂಬೈ ಮತ್ತು ದೆಹಲಿಯನ್ನು ಪಟಾಕಿ ಮುಕ್ತ ಮಾಡುವ ಮೂಲಕ ಕ್ರಿಕೆಟ್ ಮಂಡಳಿಯು ಉತ್ತಮ ಸಂದೇಶ ನೀಡುತ್ತಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಇದು ಹೆಚ್ಚು ಸಾರ್ವಜನಿಕ ಹಿತಾಸಕ್ತಿ ಹೇಳಿಕೆಯಾಗಿದ್ದು ಅದು ನಾಗರಿಕರಲ್ಲಿ ಪರಿಸರ ಜಾಗೃತಿಯನ್ನು ಹೆಚ್ಚಿಸುತ್ತದೆ. ಗಮನಾರ್ಹವಾದ ಸಾಮಾಜಿಕ ಬದಲಾವಣೆಯನ್ನು ತರುವ ಮಾರ್ಗವಾಗಿದೆ," ಎಂದು ಹೇಳಿದ್ದಾರೆ.