ಮ್ಯಾಚ್ ಫಿಕ್ಸಿಂಗ್ ಎಂಬ ಕೇಳಿದ್ರೆ ಸಾಕು ಕ್ರಿಕೆಟ್ ಆಟಗಾರರು ಬೆಚ್ಚಿ ಬೀಳ್ತಾರೆ. ಈ ಪ್ರಕರಣ ಅದೆಷ್ಟೋ ಆಟಗಾರರ ಬಾಳಲ್ಲಿ ಕಪ್ಪು ಚುಕ್ಕೆ ಆಗಿದೆ. ಈಗ ಇದರ ಕರಿ ನೆರಳು ಐಪಿಎಲ್ ಮೇಲೆ ಕಾಣಿಸಿಕೊಂಡಿದೆ. ಮ್ಯಾಚ್ ಫಿಕ್ಸಿಂಗ್ ಛಾಯೇ ಈ ಬಾರಿಯ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದರಿಂದ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಎಚ್ಚೆತ್ತುಕೊಂಡಿದೆ. ಬಿಸಿಸಿಐ ಈ ಬಾರಿ ಐಪಿಎಲ್ ಫ್ರಾಂಚೈಸಿ ಮಾಲೀಕರು, ತಂಡದ ಸಿಬ್ಬಂದಿಗಳು, ಅಷ್ಟೇ ಅಲ್ಲ ಈ ಬಾರಿ ವೀಕ್ಷಕ ವಿವರಣೆಗಾರರಿಗೂ ಎಚ್ಚರಿಕೆ ನೀಡಿದೆ. ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಭದ್ರತಾ ಘಟಕ ಹೈದರಾಬಾದ್ನ ಉದ್ಯಮಿಯೊಬ್ಬರು ಬುಕ್ಕಿಗಳ ಜೊತೆಗೆ ಸಂಪರ್ಕ ಹೊಂದಿದ್ದಾರೆಂದು ನಂಬಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಕಟ್ಟೆಚ್ಚರ ವಹಿಸಿದೆ.
ಈ ಬಾರಿಯ ಐಪಿಎಲ್ನಲ್ಲಿ ವ್ಯಕ್ತಿಗಳು ಭ್ರಷ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಹಾಗೂ ಆಮೀಷ ಒಡ್ಡುವ ಪ್ರಯತ್ನಗಳು ನಡೆದಿವೆ ಎಂದು ಬಿಸಿಸಿಐ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಸಿಸಿಐ ತಂಡಗಳ ಮಾಲೀಕರು, ಸಿಬ್ಬಂದಿಗಳು, ಕಾಮೆಂಟೆಟರ್ಗಳಿಗೆ ಸೂಚನೆ ನೀಡಿದೆ. ಅನುಮಾಸ್ಪದ ದಾಖಲೆ ಹೊಂದಿರುವ ಉದ್ಯಮಿ ಸಂಪರ್ಕಿಸಲು ಪ್ರಯತ್ನಿಸಬಹುದು. ಎಚ್ಚರಿಕೆಯಿಂದ ಇರುವಂತೆ ಬಿಸಿಸಿಐ ಕಡಕ್ ಸೂಚನೆ ರವಾನಿಸಿದೆ.

ಐಪಿಎಲ್ ಮೇಲೆ ಫಿಕ್ಸಿಂಗ್ ಕರಿ ನೆರಳು ಕಾಣಿಸಿಕೊಂಡಂತೆ ಕಣ್ಗಾವಲು ಹೆಚ್ಚಿಸಲಾಗಿದೆ. 'ಕ್ರಿಕ್ಬಜ್' ವರದಿಯ ಪ್ರಕಾರ, ಈ ಹೈದರಾಬಾದ್ ಉದ್ಯಮಿಯ ಗುರುತನ್ನು ರಹಸ್ಯವಾಗಿಡಲಾಗಿದೆ ಮತ್ತು ಅವರು ಪ್ರಸಿದ್ಧ ಬುಕ್ಕಿಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ಆರೋಪಿಸಲಾಗಿದೆ. ಅಲ್ಲದೆ, ಅವರು ಅನೇಕ ಪಂದ್ಯಗಳ ಮೇಲೆ ಪ್ರಭಾವ ಬೀರಿದ ಇತಿಹಾಸವನ್ನು ಹೊಂದಿದ್ದಾರೆ ಎಂಬ ಆರೋಪ ಸಹ ಇವರ ಮೇಲೆ ಇದೆ.
ಉದ್ಯಮಿ ಹೈದರಾಬಾದ್ ಮೂಲದವನಾಗಿದ್ದು, ಬುಕ್ಕಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾನೆ, ಈ ಉದ್ಯಮಿ ಈ ಹಿಂದೆಯೂ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾನೆ ಎಂದು ಭ್ರಷ್ಟಾಚಾರ ನಿಗ್ರಹ ಭದ್ರತಾ ಘಟಕವು ನಂಬಿದೆ. ಫಿಕ್ಸಿಂಗ್ ಕರಿ ನೆರಳು ಈ ಬಾರಿಯ ಐಪಿಎಲ್ ಮೇಲೆ ಬಿದ್ದಿರುವುದರಿಂದ ಬಿಸಿಸಿಐ ಮುನ್ನೆಚ್ಚರಿಕಯಾಗಿ ಎಲ್ಲರಿಗೂ ಸಂದೇಶವನ್ನು ರವಾನಿಸಿದೆ. ಈ ಹಿಂದೆ ಈ ರೀತಿಯ ವ್ಯಕ್ತಿಗಳು ಯಾರನ್ನಾದ್ರೂ ಸಂಪರ್ಕಿಸಿದ್ದರೆ, ಮಾಹಿತಿ ನೀಡುವಂತೆಯೂ ಕೇಳಿಕೊಂಡಿದೆ. ಉದ್ಯಮಿ ದುಬಾರಿ ಬೆಲೆಯ ಆಭಾರಣಗಳನ್ನು ಹಾಕಿಕೊಂಡು ಆಟಗಾರರು ಅಥವಾ ತರಬೇತಿದಾರರನ್ನು ಆಕರ್ಷಿಸಬಹುದು. ಉದ್ಯಮಿ ಅಭಿಮಾನಿಯ ವೇಷದಿಂದ ಬಂದು ವಂಚಿಸಬಹುದು ಎಂದು ಬಿಸಿಸಿಐ ಮುನ್ನೆಚ್ಚರಿಕೆಯನ್ನು ನೀಡಿದೆ.
ಶ್ರೀಮಂತ ಉದ್ಯಮಿ ಈಗಾಗಲೇ ಹೋಟೆಲ್ ಹಾಗೂ ಪಂದ್ಯಾವಳಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಆತ ಆಟಗಾರರು ಹಾಗೂ ಸಿಬ್ಬಂದಿಗಳೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನಿಸುತ್ತಾರೆ. ಅಲ್ಲದೆ ಅವರನ್ನು ಖಾಸಗಿ ಪಾರ್ಟಿಗಳಿಗೆ ಅಮಂತ್ರಣ ನೀಡಿ, ಆಟಗಾರರಿಗೆ ಮಾತ್ರವಲ್ಲದೆ ಅವರ ಕುಟುಂಬಸ್ಥರಿಗೂ ಉಡುಗೊರೆ ನೀಡಿದ ನಿದರ್ಶನವೂ ಇದೆ. ಈ ಉದ್ಯಮಿ ಸಾಮಾಜಿಕ ತಾಣಗಳ ಮೂಲಕ ಬೇರೆ ದೇಶದಲ್ಲಿ ನೆಲೆಸಿರುವ ಆಟಗಾರರು ಹಾಗೂ ಸಿಬ್ಬಂದಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.